ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!

ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಯುವಕರು ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ತಮ್ಮ ದಿನನಿತ್ಯದ ಆದಾಯವನ್ನು ನಷ್ಟ ಮಾಡಿಕೊಳ್ಳಲಿದ್ದಾರೆ. ಒಂದು ಲಕ್ಷಕ್ಕೂ ಮಿಕ್ಕಿ ಯುವಕರು ಬೈಕ್ ಟ್ಯಾಕ್ಸಿ ನಿಷೇಧದಿಂದ ಉದ್ಯೋಗ ನಷ್ಟ ಮಾಡಿಕೊಳ್ಳಲಿದ್ದು, ಇದು ನಿಜಕ್ಕೂ ಆತಂಕಕಾರಿ ಸುದ್ದಿ ಎಂದು ವಿಶ್ಲೇಷಿಸಲಾಗಿದೆ. ಈ ಒಂದು ಲಕ್ಷಕ್ಕೂ ಮಿಕ್ಕಿದ ಬೈಕ್ ಟ್ಯಾಕ್ಸಿ ಚಾಲಕರಿಂದ ವರ್ಷಕ್ಕೆ ಎಂಟು ಕೋಟಿ ರೈಡ್ ದಾಖಲಾಗಿದ್ದು, ಇದು ಬೆಂಗಳೂರಿನ ಆರ್ಥಿಕತೆಯ ವಿಷಯದಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ಈ ಕುರಿತು ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಶನ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಏನಾದರೂ ಪರಿಹಾರ ಮಾರ್ಗ ಕಂಡುಹಿಡಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಏಕಾಏಕಿ ಹೀಗೆ ಬೈಕ್ ಟ್ಯಾಕ್ಸಿ ಬಂದ್ ಆದರೆ ಅತ್ತ ಬೈಕ್ ಸವಾರರಿಗೂ, ಇತ್ತ ಮಿತವ್ಯಯಯದಲ್ಲಿ ಪ್ರಯಾಣಿಸುವ ಮಧ್ಯಮವರ್ಗದವರಿಗೂ ತೊಂದರೆ ಆಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಬೈಕ್ ಟ್ಯಾಕ್ಸಿ ಮಾರ್ಗಸೂಚಿಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿರುವುದರಿಂದ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ಆಪರೇಟರ್ ಗಳಾದ rapido, ಓಲಾ ಹಾಗೂ ಉಬರ್ ಮೋಟೋ ಕಂಪೆನಿಗಳಿಗೆ ಬೈಕ್ ಟ್ಯಾಕ್ಸಿ ಚಾಲನೆ ಮಾಡುವಂತಿಲ್ಲ ಎಂದು ಆದೇಶ ನೀಡಿದೆ.
ಇನ್ನು ಬೈಕ್ ಟ್ಯಾಕ್ಸಿ ಅಸೋಸಿಯೇಶನ್ ತಮ್ಮ ಪತ್ರದಲ್ಲಿ ಈ ಉದ್ಯೋಗ ಸವಾರರ ಪ್ರಾಥಮಿಕ ಆದಾಯ ಮೂಲವಾಗಿದ್ದು, ಎಂತಹುದೇ ಬಿಸಿಲು, ಮಳೆ, ಗಾಳಿ ಎನ್ನದೇ ದಿನಕ್ಕೆ 10 ರಿಂದ 12 ಗಂಟೆಗಳ ತನಕ ಕರ್ತವ್ಯ ಮಾಡುವ ಬೈಕ್ ಸವಾರರ ಪರ ಕಾಳಜಿ ಇಟ್ಟುಕೊಂಡು ಏನಾದರೂ ಸಹಾಯ ಮಾಡಬೇಕು ಎಂದು ವಿನಂತಿಸಿದ್ದಾರೆ.
ಇದು ಸೈಡ್ ಇನ್ ಕಂ ಅಲ್ಲ, ಇದು ಬದುಕಿಗಾಗಿ ದುಡಿಯುವ ಅನಿವಾರ್ಯತೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಹೀಗೆ ಸಡನ್ ಬ್ಯಾನ್ ಆಗುವ ಬದಲಿಗೆ ರಾಜ್ಯ ಸರಕಾರ ಮೊದಲೇ ಈ ಕ್ಷೇತ್ರದ ಬಗ್ಗೆ ನಿಯಮಾವಳಿಗಳನ್ನು ಮಾಡಬಹುದಿತ್ತು ಎಂದು ಕೇಳಿಕೊಳ್ಳಲಾಗಿದ್ದು, ಲೈಸೆನ್ಸ್, ಇನ್ಯೂರೆನ್ಸ್, ಸುರಕ್ಷತಾ ವಿಧಾನಗಳ ಬಗ್ಗೆ ಕಾನೂನು ತಂದಿದ್ದರೆ ದೆಹಲಿ, ತೆಲಂಗಾಣ, ರಾಜಸ್ಥಾನದಲ್ಲಿ ಇದ್ದ ಹಾಗೆ ಇಲ್ಲಿಯೂ ಬೈಕ್ ಟ್ಯಾಕ್ಸಿಗೆ ಯೋಗ್ಯ ವಾತಾವರಣ ಸೃಷ್ಟಿಸಿದಂತೆ ಆಗುತ್ತಿತ್ತು ಎಂದು ಹೇಳಲಾಗಿದೆ.
ಇನ್ನು ಮಧ್ಯಮ ವರ್ಗದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ, ಶೀಘ್ರವಾಗಿ, ಉತ್ತಮ ವ್ಯವಸ್ಥೆಯಲ್ಲಿ ತಮ್ಮ ಗಮ್ಯವನ್ನು ಪಡೆಯಲು ಇದಕ್ಕಿಂತ ಯೋಗ್ಯ ಆಯ್ಕೆ ಬೇರೆ ಇರಲಿಲ್ಲ ಎನ್ನುವುದಕ್ಕೆ ವರ್ಷಕ್ಕೆ ಎಂಟು ಕೋಟಿ ರೈಡ್ ಗಳು ದಾಖಲಾಗಿರುವುದೇ ಸಾಕ್ಷಿ ಎಂದು ತಿಳಿಸಲಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಚಾಲಕ ಸಂಘಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಇದಕ್ಕೊಂದು ಮಾರ್ಗಸೂಚಿ ರಚಿಸಿ, ಚಾಲಕರ ಹಾಗೂ ಪ್ರಯಾಣಿಕರ ಇಬ್ಬರ ಕಾಳಜಿಯನ್ನು ಕೂಡ ವಹಿಸಬೇಕೆಂದು ಕೋರಲಾಗಿದೆ.