ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು – ಮೋಹನದಾಸ್ ಪೈ

ಬಸವರಾಜ್ ಬೊಮ್ಮಾಯಿ ಅವರ ಸರಕಾರದ ಮೇಲೆ 40% ಭ್ರಷ್ಟಾಚಾರದ ಆರೋಪ ಬಂದಾಗ ಅವರು ಓರ್ವ ನ್ಯಾಯಮೂರ್ತಿಗಳ ಆಯೋಗ ರಚಿಸಿ, ಯಾರೆಲ್ಲಾ ಇಂತಹ ಆರೋಪ ಮಾಡುತ್ತಾರೋ ಅವರಿಗೆ ಸಾಕ್ಷಿ ಸಮೇತ ಕರೆಸಿ ವಿಚಾರಣೆ ಮಾಡಬೇಕಿತ್ತು. ಯಾರು ಏನೂ ದಾಖಲೆ ಇಲ್ಲದೆ ಸುಮ್ಮನೆ ಆರೋಪ ಮಾಡುತ್ತಿದ್ದರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕಿತ್ತು ಎಂದು ಐಟಿ ದಿಗ್ಗಜ ಪದ್ಮಶ್ರೀ ಟಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಬೊಮ್ಮಾಯಿ ಅವಧಿಯಲ್ಲಿ ಇಷ್ಟು ಭ್ರಷ್ಟಾಚಾರ ಇರಲಿಲ್ಲ. ಆದರೆ ಅವರು ಆರೋಪ ಬಂದಾಗಲೂ ಸುಮ್ಮನೆ ಕುಳಿತುಕೊಂಡು ತಪ್ಪು ಮಾಡಿದ್ರು. ಆದರೆ ಈಗ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ ಎಂದರೆ ಬಿಲ್ಡರ್ ನಿರ್ಮಾಣ ಪರವಾನಿಗೆ ಪ್ರಮಾಣ ಪತ್ರ ಕೇಳಿದರೆ ಸಿಕ್ಕಾಪಟ್ಟೆ ಲಂಚ ಕೇಳುತ್ತಾರೆ. ಸರಕಾರದಿಂದ ಏನು ಮಂಜೂರಾತಿ ಪ್ರಮಾಣ ಪತ್ರ ಬೇಕಾದರೂ ಲಂಚದ ಪ್ರಮಾಣ ಜಾಸ್ತಿ ಇದೆ. ರೇರಾದಲ್ಲಿ, ಬಿಡಿಎನಲ್ಲಿ, ಬಿಬಿಎಂಪಿಯಲ್ಲಿ ಎಲ್ಲಾ ಕಡೆ ಲಂಚದ ಪ್ರಮಾಣ ಅತೀ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಇನ್ನು ಭ್ರಷ್ಟಾಚಾರದ ವಿಷಯದಲ್ಲಿ ಒಂದು ರೇಟ್ ಕಾರ್ಡ್ ಮಾಡುವ ಅಗತ್ಯ ಇದೆ. ಬೇಕಾದರೆ ಬಿಲ್ಡರ್ ಗಳ ಬಳಿ ಹೋಗಿ ವಾಸಸ್ಥಳ ಪ್ರಮಾಣ ಪತ್ರ ಪಡೆದುಕೊಳ್ಳಲು ಎಷ್ಟು ಕೊಡಬೇಕಾಗುತ್ತದೆ ಎಂದು ಕೇಳಿ. ಈಗಿನ ಪರಿಸ್ಥಿತಿ ನೋಡಿದರೆ ಲಂಚದ ಹಾವಳಿ ಸಾಕಾಗಿ ಹೋಗಿದೆ ಎಂದು ಎಲ್ಲರಿಗೂ ಅನಿಸುತ್ತದೆ. ಇನ್ನು ಸರಕಾರಿ ಕಚೇರಿಯಲ್ಲಿ ರೇಟ್ ಕಾರ್ಡ್ ಹಾಕುವುದು ಒಳ್ಳೆಯದು. ಇದರಿಂದ ಇಂತಿಂತಹ ಕೆಲಸಗಳಿಗೆ ಇಂತಿಷ್ಟು ಹಣ ಕೊಡಬೇಕಾಗುತ್ತದೆ ಎಂದು ಗೊತ್ತಾಗುತ್ತದೆ. ರೇಟ್ ಕಾರ್ಡ್ ಜೊತೆಯಲ್ಲಿ ಇಂತಿಷ್ಟು ಮೊತ್ತ ಹೇಗೆ ಹಂಚಿಕೆಯಾಗುತ್ತದೆ ಎನ್ನುವುದು ಕೂಡ ಬರೆದರೆ ಉತ್ತಮ. ಉದಾಹರಣೆಗೆ ನೂರು ರೂಪಾಯಿಯಲ್ಲಿ ಸಚಿವರಿಗೆ ಇಷ್ಟು, ಅವರಿಗೆ ಇಷ್ಟು, ಇವರಿಗೆ ಇಷ್ಟು ಎಂದು ನಮೂದಿಸಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಪೈ ತಿಳಿಸಿದರು.
ಇನ್ನು ಪಕ್ಕದ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯಕ್ಕಿಂತ ಹೆಚ್ಚು ಭ್ರಷ್ಟಾಚಾರ ಹೆಚ್ಚಿದೆ. ಆದರೆ ಅಲ್ಲಿ ಸಚಿವರಿಗೆ ಹಣ ಕೊಟ್ಟರೆ ಅವರು ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳು ಮಾಡದಿದ್ದರೆ ಅಂತಹ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಸಚಿವರಿಗೆ ಕೊಟ್ಟರೂ ಕೆಲಸ ಆಗುವುದಿಲ್ಲ. ಅವರಿಗೆ ಕೊಟ್ಟರೆ ನಮಗೇನು ಸಿಗುತ್ತದೆ ಎಂದು ಅಧಿಕಾರಿಗಳು ಕೇಳುತ್ತಾರೆ. ಒಂದೊಂದು ಹುದ್ದೆಗೂ ಇಂತಿಂಷ್ಟೇ ರೇಟ್ ಫಿಕ್ಸ್ ಇದೆ. ಅದನ್ನು ಕೊಟ್ಟು ಬರುವ ಅಧಿಕಾರಿ ಅದನ್ನು ಹಿಂದಕ್ಕೆ ಪಡೆದುಕೊಳ್ಳಬೇಕಲ್ಲ. ಅದಕ್ಕಾಗಿ ಜನರನ್ನು ನೇಮಿಸಿ ಲಂಚ ಪಡೆದುಕೊಳ್ಳುತ್ತಾರೆ. ಪೊಲೀಸ್ ಇಲಾಖೆಯಿಂದ ಹಿಡಿದು ವಾಯು ಮಾಲಿನ್ಯ ಇಲಾಖೆಯ ತನಕ ಲಂಚದ ಪ್ರಮಾಣ ಹೆಚ್ಚಿದೆ ಎಂದು ಮೋಹನದಾಸ್ ಪೈ ಹೇಳಿದರು.