ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!

2008 ರ ಮಾಲೆಗಾಂ ಸ್ಫೋಟದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ಮುಂಬೈನ ಎನ್ ಐಎ ವಿಶೇಷ ಕೋರ್ಟ್ ತೀರ್ಪು ನೀಡಿದ ನಂತರ ಈಗ ಒಂದೊಂದೇ ವಿಷಯಗಳು ಬೆಳಕಿಗೆ ಬರುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತ ಅವರ ಜೊತೆ ದೋಷಮುಕ್ತಗೊಂಡಿರುವ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಕೂಡ ಇಂತದ್ದೇ ಆರೋಪ ಮಾಡಿದ್ದಾರೆ. ಬೆಂಗಳೂರು ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥರಾದ ಶ್ರೀ ರವಿಶಂಕರ್ ಗುರೂಜಿಯವರ ಹೆಸರು ಹೇಳುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಒಪ್ಪದ್ದಕ್ಕೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಜತೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ , ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರ ಹೆಸರನ್ನು ಹೇಳುವಂತೆ ನನಗೆ ಜೈಲಿನಲ್ಲಿ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ಭಾನುವಾರ ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿದ ಅವರು ” ನನ್ನನ್ನು ಭಯೋತ್ಪಾದಕ ನಿಗ್ರಹ ದಳ 2008 ರ ಅಗಸ್ಟ್ ನಲ್ಲಿ ಕಸ್ಟಡಿಗೆ ತೆಗೆದುಕೊಂಡಿತ್ತು. ಈ ವೇಳೆ ನನಗೆ ತೀವ್ರ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲಾಗಿತ್ತು. ಹಲವು ವರ್ಷಗಳ ಕಾಲ ನನ್ನನ್ನು ಏಕಾಂತ ಸೆರೆವಾಸದಲ್ಲಿಡಲಾಗಿತ್ತು. ರಾಜಕೀಯ ಮತ್ತು ಧಾರ್ಮಿಕ ನಾಯಕರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ಹೆಸರು ಹೇಳು. ಹೀಗಾದರಷ್ಟೇ ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದು ಒತ್ತಡ ಹೇರಲಾಗಿತ್ತು ಎಂದರು.
ಆಗಿನ ಯುಪಿಎ ಸರಕಾರ ರಾಜಕೀಯ ಪ್ರೇರಿತವಾಗಿ ಪ್ರಕರಣದ ತನಿಖೆ ನಡೆಸಲಾಗಿದೆ. ಸೋನಿಯಾ ಗಾಂಧಿ, ದಿಗ್ವಿಜಯ್ ಸಿಂಗ್ ಮತ್ತು ಸುಶೀಲ್ ಕುಮಾರ್ ಶಿಂಧೆಯಂತಹ ನಾಯಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ವಿನಾಕಾರಣ 17 ವರ್ಷ ಜೈಲಲ್ಲಿ ಕಳೆಯಬೇಕಾಯಿತು ಎಂದು ಆರೋಪಿಸಿದ್ದಾರೆ.
ನಾನು ನಾರ್ಕೋ ಮತ್ತು ಪಾಲಿಗ್ರಾಫ್ ಪರೀಕ್ಷೆ ಮಾಡಿಸಿಕೊಳ್ಳಲು 3 ಬಾರಿ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದೆ. ಆದರೂ ಎಟಿಎಸ್ ಅದರ ವರದಿಯನ್ನು ಕೋರ್ಟ್ ಗೆ ಸಲ್ಲಿಸಲೇ ಇಲ್ಲ ಎಂದು ಉಪಾಧ್ಯಾಯ ಬೇಸರ ವ್ಯಕ್ತಪಡಿಸಿದರು.