ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!

ಮಂಗಳೂರು ನಗರದಲ್ಲಿ ಮಂಗಳಾ ಕ್ರೀಡಾಂಗಣದ ಸಮೀಪ ಇರುವ ಸರಕಾರಿ ಈಜುಕೊಳದಲ್ಲಿ ಈಜು ಕೋಚ್ ಆಗಿದ್ದ ರಾಷ್ಟ್ರೀಯ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು ಭಾನುವಾರ ಈಜುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಭಾನುವಾರ ನಿರ್ವಹಣೆಯ ಕೆಲಸಗಳಿಗಾಗಿ ಈಜುಕೊಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಬೆಳಗ್ಗೆ ಈಜುಕೊಳಕ್ಕೆ ಚಂದ್ರಶೇಖರ್ ಬಂದಿದ್ದರು. ರಜೆ ಇದ್ದ ಕಾರಣ ಬೇರೆ ಕೋಚುಗಳು ಬಂದಿರಲಿಲ್ಲ. ನಿರ್ವಹಣಾ ಕೆಲಸದವರು ಬರುವ ತನಕ ಈಜಾಡಲು ನಿರ್ಧರಿಸಿ ಕೊಳಕ್ಕೆ ಇಳಿದಿದ್ದರು. ಸ್ವಲ್ಪ ಹೊತ್ತು ಈಜಾಡಿದ ಬಳಿಕ ನೀರಿನಡಿ ಈಜುವ ಉದ್ದೇಶದಿಂದ ಕಾವಲು ಸಿಬ್ಬಂದಿಯ ಬಳಿ ಟೈಮರ್ ಕೊಟ್ಟು ನೀರೊಳಗೆ ಇಳಿದಿದ್ದಾರೆ. ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪಿದ ಬಳಿಕ ಅವರು ಮೇಲಕ್ಕೆ ಬಂದಿಲ್ಲ. ಈ ಬಗ್ಗೆ ಆತಂಕಗೊಂಡ ಕಾವಲು ಸಿಬ್ಬಂದಿ ನೀರಿಗೆ ಇಳಿದು ಪರಿಶೀಲಿಸಿದಾಗ ಸ್ಪಂದಿಸಿಲ್ಲ. ತಕ್ಷಣ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಚಂದ್ರಶೇಖರ್ ಬಂಟ್ವಾಳದ ಮಾಣಿ ಸೂರಿಕುಮೇರು ಮೂಲದವರಾಗಿದ್ದು, ಮಂಗಳೂರಿನ ಕುದ್ರೋಳಿ ಬಳಿ ವಾಸವಾಗಿದ್ದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ. ಚಂದ್ರಶೇಖರ್ ರೈ ಸೂರಿಕುಮೇರು ಸುಮಾರು ಐದಾರು ವರ್ಷದಿಂದ ಪಾಲಿಕೆ ಈಜುಕೊಳದಲ್ಲಿ ಕೋಚ್ ಹಾಗೂ ಲೈಫ್ ಗಾರ್ಡ್ ಆಗಿದ್ದರು. ಉಸಿರು ಬಿಗಿಹಿಡಿದುಕೊಂಡು ನೀರಿನೊಳಗೆ ಈಜುವುದರಲ್ಲಿ ಪರಿಣತಿ ಹೊಂದಿದ್ದರು. ದೈಹಿಕವಾಗಿಯೂ ಸದೃಢರಾಗಿದ್ದರು. 2023 ರಲ್ಲಿ ಈಜುಕೊಳದಲ್ಲಿ ನೀರಿನೊಳಗೆ ಮುಳುಗಿ ಉಸಿರು ಕಟ್ಟಿಕೊಂಡು ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್ ಸಾಲ್ಟ್ ಮಾಡಿ ವರ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದರು. ಗಿನ್ನಿಸ್ ದಾಖಲೆ ಮಾಡುವ ನಿಟ್ಟಿನಲ್ಲಿಯೂ ತಯಾರಿ ನಡೆಸುತ್ತಿದ್ದರು. ಅವರ ನಿಧನದಿಂದ ಅವರ ಕುಟುಂಬಕ್ಕೆ, ಈಜುಕೊಳಕ್ಕೆ ನಿತ್ಯ ಬರುತ್ತಿದ್ದ ಸಾರ್ವಜನಿಕರಿಗೆ, ತರಬೇತುದಾರರಿಗೆ, ತರಬೇತು ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಈ ಹೃದಯಾಘಾತ ಎನ್ನುವುದು ಸದೃಢರಾಗಿದ್ದ ವ್ಯಕ್ತಿಗಳನ್ನು ಹೇಗೆ ಮಣಿಸುತ್ತದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಚರ್ಚೆಯಲ್ಲಿರುವ ಸಂಗತಿಯಾಗಿದೆ.