ಖಾರ್ ಬೂಂದಿ ತಿನ್ನುತ್ತಿದ್ದಿರಾ? ಎಚ್ಚರಿಕೆ!

ಕರ್ನಾಟಕ ರಾಜ್ಯದಲ್ಲಿ ಕಬಾಬ್, ಗೋಬಿ ಮಂಚೂರಿ, ಸಿಹಿ ತಿಂಡಿಗಳ ಬಳಿಕ ಹಲವರು ಬಹಳ ಇಷ್ಟಪಟ್ಟು ತಿನ್ನುವ ಮತ್ತೆರಡು ತಿಂಡಿಯ ಮೇಲೆ ಕರಿಛಾಯೆ ಬಿದ್ದಿದೆ. ಅದೇ ಖಾರ ಬೂಂದಿ ಮತ್ತು ಮಿಕ್ಸರ್. ಇದನ್ನು ತಯಾರಿಸುವಾಗ ಅದರ ಆಕರ್ಷಣಗೆ ಕೃತಕ ಬಣ್ಣ ಬಳಕೆ ಆಗುತ್ತಿರುವುದು ಪತ್ತೆಯಾಗಿದೆ. ರಾಜ್ಯದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಖಾರ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಈ ವೇಳೆ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಸಲಿದ್ದು, ಈ ಕುರಿತು ಆರೋಗ್ಯ ಸಚಿವರೇ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024 – 25 ಹಾಗೂ 2025 – 26 ನೇ ಸಾಲಿನಲ್ಲಿ 19 ತಪಾಸಣಾ ಅಭಿಯಾನ ನಡೆಸಿದ್ದು, 19 ಬಗೆಯ ತಿಂಡಿ ಮತ್ತು ಪಾನೀಯಗಳ 3,787 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದೀಗ ಖಾರ ಬೂಂದಿ, ಮಿಕ್ಸರ್ ಗಳ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಕೃತಕ ಬಣ್ಣ ಬಳಕೆಯಾಗಿರುವುದು ತಿಳಿದುಬಂದಿದೆ. ವರದಿ ಆಧಾರದ ಮೇಲೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗೆ ಜನರು ಆಸೆಪಟ್ಟು ತಿನ್ನುವ ಒಂದೊಂದು ತಿಂಡಿಗಳು ಕೂಡ ಅಪಾಯಕಾರಿಯಾಗುತ್ತಿರುವುದು ತಿಂಡಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.