• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಶೀರ್ ನನ್ನು ಕೊಂದದ್ದು ಯಾಕೆ?

Hanumantha Kamath Posted On January 8, 2018


  • Share On Facebook
  • Tweet It

ಬಶೀರ್ ನನ್ನು ಯಾಕೆ ಕೊಂದರು? ಆತ ಮಾಡಿದ ತಪ್ಪಾದರೂ ಏನು? ಆತನನ್ನು ಕೊಂದ ಕಾರಣ ಹಂತಕರಿಗೆ ಏನು ಸಿಕ್ಕಿತು? ಇಷ್ಟು ಪ್ರಶ್ನೆಗಳು ಈಗ ಮತ್ತೆ ಉದ್ಭವಿಸುತ್ತಿವೆ. ದೀಪಕ್ ರಾವ್ ಹತ್ಯೆಯಾದಾಗಲೂ ಇಂತಹುದೇ ಪ್ರಶ್ನೆಗಳು ಎಲ್ಲರಲ್ಲೂ ಕಾಣಿಸಿದ್ದವು. ಅಸಲಿಗೆ ಒಬ್ಬ ವ್ಯಕ್ತಿ ತನ್ನ ಪಾಡಿಗೆ ತಾನು ಇದ್ದವ, ಯಾರ ರಗಳೆಗೂ ಹೋಗದವ, ತಾನು ತನ್ನ ಕುಟುಂಬ, ತನ್ನ ವ್ಯವಹಾರ ಎಂದು ಇದ್ದವನನ್ನು ಯಾಕೆ ಕೊಲ್ಲುತ್ತಾರೆ? ಬಶೀರ್ ಅನೇಕ ವರ್ಷ ವಿದೇಶದಲ್ಲಿ ಹೊಟ್ಟೆಪಾಡಿಗೆ ಕೆಲಸ ಮಾಡುತ್ತಾ, ನಂತರ ಒಂದಿಷ್ಟು ವರ್ಷಗಳ ಹಿಂದೆ ಊರಿಗೆ ಬಂದು ಮಂಗಳೂರಿನಲ್ಲಿ ಒಂದು ಫಾಸ್ಟ್ ಫುಡ್ ಅಂಗಡಿ ನಡೆಸುತ್ತಾ ಅದರಲ್ಲಿಯೇ ವ್ಯವಹಾರ ಮಾಡುತ್ತಾ ಹೆಂಡತಿ ಮಕ್ಕಳನ್ನು ಸಾಕುತ್ತಾ ಆರಾಮವಾಗಿ ಇದ್ದರು. ಅವರನ್ನು ಹತ್ಯೆ ಮಾಡಲು ಹೊರಟವರಿಗೆ ಆವತ್ತು ಒಬ್ಬ ಮುಸ್ಲಿಮ್ ಬೇಕಿತ್ತಷ್ಟೇನಾ? ಬಹುಶ: ಬಶೀರ್ ಅವರನ್ನು ಹೊಡೆಯಲು ಬಳಸಿದ ತಲವಾರುಗಳಿಗೂ ತನ್ನನ್ನು ಆವತ್ತು ಹಿಡಿದವರ ಬಗ್ಗೆ ಅಸಹ್ಯ ಮೂಡಿರಬಹುದು. ನೀವು ನಾಲ್ಕು ಜನ ತಲವಾರು ಹಿಡಿದು ತನ್ನ ಪಾಡಿಗೆ ತಾನು ಹೋಗುತ್ತಿದ್ದವನ ಮೇಲೆ ದಾಳಿ ಮಾಡಿದಿರಲ್ಲ, ನೀವು ಕೂಡ ಮನುಷ್ಯರಾ ಎಂದು ತಲವಾರುಗಳೇ ಕೇಳಿರಬಹುದು. ಈ ಪ್ರಶ್ನೆ ಆವತ್ತು ದೀಪಕ್ ನನ್ನು ಹತ್ಯೆ ಮಾಡಲು ಹೊರಟವರ ತಲವಾರುಗಳು ಕೂಡ ಕೇಳಿರುತ್ತವೆ.

ಬಶೀರ್ ದುಬೈಯಲ್ಲಿ ಇದ್ದಾಗ ಅವರ ರೂಂಮೇಟ್ ಪ್ರಭಾಕರ ಎನ್ನುವವರ ಮೇಲೆ ಮತಾಂಧರು ದಾಳಿ ಮಾಡಲು ಬಂದಾಗ ಇದೇ ಬಶೀರ್ ಅಡ್ಡನಿಂತು ಅವನು ನಮ್ಮವ ಎಂದು ಹೇಳಿ ಪ್ರಭಾಕರ ಅವರನ್ನು ಉಳಿಸಿದ್ದರು ಎಂದು ಹೇಳಲಾಗುತ್ತದೆ. ಅಂತಹ ಬಶೀರ್ ನನ್ನು ಕೊಂದು ಹಾಕಲು ಆ ಪಾಪಿಗಳಿಗೆ ಹೇಗೆ ಮನಸ್ಸು ಬಂತೊ? ಕೊಂದವರು ಆ ಜಾತಿ, ಈ ಜಾತಿಯವರು, ಅಂತಹ ಜಾತಿಯವರನ್ನೇ ಕೊಲ್ಲಲು ಬಳಸಿದ್ದರು ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಕೊಲ್ಲಲು ಹೊರಟವರಿಗೆ ಯಾವುದೇ ಜಾತಿ, ಧರ್ಮ ಎನ್ನುವುದೇ ಇರುವುದಿಲ್ಲ. ಅಂತವರದ್ದು ಬರೀ ರಾಕ್ಷಸ ಜಾತಿ. ಅವರಲ್ಲಿ ಹರಿಯುವುದು ಮನುಷ್ಯನ ರಕ್ತ ಅಲ್ಲ, ಹುಳಜಂತುಗಳ ರಕ್ತ. ಒಬ್ಬ ಹಿಂದೂ ಸತ್ತರೆ ಒಬ್ಬ ಮುಸ್ಲಿಂ ಸಾಯಬೇಕು ಎನ್ನುವುದು ಯಾವತ್ತೂ ಕೂಡ ಕ್ಯಾಲ್ಕುಲೇಶಷನ್ ಆಗಬಾರದು. ಅಷ್ಟಕ್ಕೂ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ತಮ್ಮ ಲಾಭ ಮಾಡಿಕೊಳ್ಳುವವರು ಮನುಷ್ಯರೇ ಅಲ್ಲ. ಯಾಕೆ ಒಂದು ಧರ್ಮದವರು ಮತ್ತೊಂದು ಧರ್ಮದವರನ್ನು ಕೊಲ್ಲುತ್ತಾರೆ ಎನ್ನುವುದಕ್ಕೆ ಉತ್ತರ ಯಾವ ಜ್ಞಾನಿಯೂ ಕೊಡಲು ಸಾಧ್ಯವೇ ಇಲ್ಲ. ಒಬ್ಬ ದೀಪಕ್, ಒಬ್ಬ ಬಶೀರ್ ಅವರನ್ನು ಕೊಂದ ಹಂತಕರಿಗೆ ಒಂದಿಷ್ಟು ಪುಡಿ ಕಾಸು ಸಿಗಬಹುದು. ಆದರೆ ಅವರು ಭವಿಷ್ಯದಲ್ಲಿ ಯಾವ ಕಾಯಿಲೆ, ರೋಗದಿಂದ ನರಳಲಿದ್ದಾರೆ ಎನ್ನುವುದು ಕೂಡ ಜಗಜಾಹೀರವಾಗಬೇಕು. ಯಾಕೆಂದರೆ ಅನ್ಯಾಯ ಮಾಡಿದವರು ಇವತ್ತಲ್ಲ ನಾಳೆ ಅದರ ಪ್ರತಿಫಲ ಪಡೆದೇ ಪಡೆಯುತ್ತಾರೆ. ಅಂತಹ ನೈತಿಕ ಶಿಕ್ಷಣವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕು. ಆಗ ಮುಂದೆ ಅವರು ನಿನ್ನದು ಯಾವ ಜಾತಿ, ಧರ್ಮ ಎಂದು ಯಾರನ್ನೂ ಕೇಳುವುದಿಲ್ಲ. ಕೊಲ್ಲುವುದಂತೂ ದೂರದ ಮಾತು.

ಇನ್ನು ಒಂದು ವಾರದ ತನಕ ದೀಪಕ್, ಬಶೀರ್ ಮನೆಗೆ ರಾಜಕಾರಣಿಗಳು, ಗಣ್ಯರು ಬಂದು ಹೋಗಬಹುದು. ಒಂದಿಷ್ಟು ಹಣ ದೀಪಕ್ ಅಥವಾ ಬಶೀರ್ ಕುಟುಂಬಕ್ಕೆ ಸಿಗಬಹುದು. ಆದರೆ ಹಣ ನಮಗೆ ಬೇಡಾ, ನನ್ನ ಮಗನನ್ನು, ನನ್ನ ತಂದೆಯನ್ನು, ನನ್ನ ಗಂಡನನ್ನು ನನಗೆ ಕೊಡಿ ಎಂದು ಈ ಕುಟುಂಬದವರು ಕೇಳಿದರೆ ಆಗ ಹೋದವರ ಬಳಿ ಉತ್ತರ ಇದೆಯಾ? ಒಬ್ಬ ತಾಯಿಗೆ ಸಂಜೆ ಇಳಿಹೊತ್ತಿನಲ್ಲಿ ತನ್ನ ಮಗ ಒಂದು ಬ್ರೆಡ್ ತೆಗೆದುಕೊಂಡು ಬಂದು ಕೊಟ್ಟರೂ ಅದೇ ಪರಮಾನ್ನ. ಅವನಿಲ್ಲದಿದ್ದರೆ ಎದುರಿಗೆ ಮೃಷ್ಟಾನ್ನ ಇಟ್ಟರೂ ಅವರಿಗೆ ಅದು ಬೇಡಾ. ಇನ್ನು ಬಶೀರ್ ಮಕ್ಕಳು ವಿದೇಶದಲ್ಲಿ ಇದ್ದವರು ತಂದೆಯ ಸಾವಿನ ಸುದ್ದಿ ಕೇಳಿ ಓಡೋಡಿ ಬಂದಿದ್ದಾರೆ. ಅಪ್ಪನನ್ನು ಯಾಕೆ ಕೊಂದರು ಎಂದು ಅವರು ಯಾರಲ್ಲಾದರೂ ಕೇಳಿದರೆ ಕೊಟ್ಟಾರದಿಂದ 20 ಕಿಲೋ ಮೀಟರ್ ದೂರ ಇರುವ ಕಾಟಿಪಳ್ಳದಲ್ಲಿ ಒಬ್ಬ ಹಿಂದೂವಿನ ಕೊಲೆಯಾಗಿತ್ತು, ಅದಕ್ಕೆ ನಿನ್ನ ಅಪ್ಪನ್ನು ಕೊಂದರು ಎಂದು ಹೇಳೋಕೆ ಆಗುತ್ತಾ? ಯಾರೋ ಹಿಂದೂ ಸತ್ತರೆ ನನ್ನ ಅಪ್ಪನನ್ನು ಯಾಕೆ ಕೊಲ್ಲಬೇಕು ಎಂದು ಅವರು ಮರುಪ್ರಶ್ನಿಸಿದರೆ ಅದಕ್ಕೆ ಏನು ಹೇಳಲು ಸಾಧ್ಯ? ಇದು ಮಂಗಳೂರು ಎನ್ನಲು ಆಗುತ್ತಾ? ಹಿಂದೆ ಇದ್ದ ಮಂಗಳೂರು ಹೇಗಿತ್ತು, ಇವತ್ತಿನ ಮಂಗಳೂರು ಹೇಗಿದೆ? ಈಗ ಮಂಗಳೂರಿನಲ್ಲಿ ಎಲ್ಲವೂ ಇದೆ. ಆದರೆ ಪರಸ್ಪರ ಧರ್ಮಗಳ ನಡುವಿನ ಭಾಂದವ್ಯ ಕಡಿಮೆಯಾಗಿದೆ. ಮನೆಯ ಊಟಕ್ಕೆ ಕುರಿ ಕುಡಿದು ಮಾಂಸ ತೊಟ್ಟೆಯಲ್ಲಿ ತುಂಬಿಸಿ ಮಾರುಕಟ್ಟೆಯಿಂದ ತೆಗೆದುಕೊಂಡು ಬಂದಷ್ಟೇ ಸಲೀಸಾಗಿ ಹತ್ಯೆಗಳು ನಡೆಯುತ್ತವೆ ಎಂದರೆ ನಾವು ಎತ್ತ ಸಾಗುತ್ತಿದ್ದೇವೆ.

ಉನ್ನತ ಅಧಿಕಾರದಲ್ಲಿ ಇರುವವರು, ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರಗಳಲ್ಲಿ ಇರುವವರು, ಬೃಹತ್ ಸಂಸ್ಥೆಗಳನ್ನು ನಡೆಸುವವರಿಗೆ ಎಲ್ಲ ಧರ್ಮದವರು ಬೇಕು, ಎಲ್ಲಾ ಧರ್ಮಗಳಲ್ಲಿ ಅವರಿಗೆ ಗೆಳೆಯರು ಇರ್ತಾರೆ. ಹಾಗೆ ಈ ಸಣ್ಣಪುಟ್ಟ ಕೆಲಸಗಳಲ್ಲಿ ಇದ್ದು ತಮ್ಮ ದಿನನಿತ್ಯದ ಹೊಟ್ಟೆಪಾಡಿಗಾಗಿ ದುಡಿಯುವವರಿಗೂ ಎಲ್ಲಾ ಧರ್ಮಗಳಲ್ಲಿ ಗೆಳೆಯರು ಇರ್ತಾರೆ. ಸೆಂಟ್ರಲ್ ಮಾರುಕಟ್ಟೆಗಳಲ್ಲಿ ಒಳಗೆ, ಹೊರಗೆ ತರಕಾರಿ, ಜಿನಸು ವ್ಯಾಪಾರ ಮಾಡುವ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂಗಳೇ ಪರ್ಮನೆಂಟ್ ಗಿರಾಕಿಗಳು. ಹಾಗೆ ಎಷ್ಟೋ ಹಿಂದೂಗಳ ವ್ಯಾಪಾರ ಮುಸ್ಲಿಂ ಪಾಲುದಾರರೊಂದಿಗೆ ನಡೆಯುತ್ತಾ ಇರುತ್ತದೆ. ಇನ್ನು ಕೂಲಿಯಾಳುಗಳು, ಬಟ್ಟೆ ಅಂಗಡಿಯಲ್ಲಿ, ಜೆರಾಕ್ಸ್ ಅಂಗಡಿಯಲ್ಲಿ, ಆಸ್ಪತ್ರೆಗಳಲ್ಲಿ, ಹೋಟೆಲ್ ಗಳಲ್ಲಿ ಕೆಲಸ ಮಾಡುವವರಿಗೆ ಆವತ್ತು ಮೈಮುರಿದು ದುಡಿದರೆ ಅದೇ ಜೀವನ. ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ ಕತ್ತಲಾದ ನಂತರ ನೀವು ದೊಡ್ಡ ಕೇಸರಿ ನಾಮ ಹಾಕಿ ಯಾವುದಾದರೂ ಅಜ್ಞಾತ ಗಲ್ಲಿಯಲ್ಲಿ ಹೋಗುವುದು ಅಥವಾ ಮುಸ್ಲಿಂ ಒಬ್ಬ ಟೊಪ್ಪಿ ಹಾಕಿ ಹೋಗುವುದು ಕಷ್ಟಕರ ಎನ್ನುವ ಭಾವನೆ ಇದೆ. ಇದು ಹೋಗಬೇಕು. ಅದಕ್ಕಾಗಿ ಹಿಂದೂ ಮುಖಂಡರು, ಮುಸ್ಲಿಂ ಮುಖಂಡರು ತಮ್ಮ ತಮ್ಮ ಯುವಕರನ್ನು ಹದ್ದುಬಸ್ತಿನಲ್ಲಿಡಬೇಕು. ಪೊಲೀಸರು ನಿಸ್ಪಕ್ಷಪಾತವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಬೇಕು. ಈ ಎರಡೂ ಸರಿಯಾದರೆ ತಲವಾರುಗಳು ತುಕ್ಕು ಹಿಡಿಯುತ್ತವೆ. ಹಾಗೆ ಆಗಲಿ.

 

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search