ಸಿದ್ಧರಾಮಯ್ಯ ಇನೈದು ವರ್ಷ ಅಧಿಕಾರದಲ್ಲಿದ್ದರೆ ದೊಡ್ಡ ಪುಸ್ತಕವೇ ಬರಲಿದೆ!
ತಾಯಿಯಂದಿರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬರೆದ ಪತ್ರಗಳು, ನಮ್ಮ ರಾಜ್ಯ ಕಂಡ ಧೀರ, ಪ್ರಾಮಾಣಿಕ ಅಧಿಕಾರಿಗಳ ನಿಗೂಢ ಸಾವಿನ ಹಿಂದಿನ ಕರಾಳ ಸತ್ಯಗಳು, ಕರಳು ಹಿಂಡುವ ವಾಸ್ತವ ಒಳಗೊಂಡ ಪದ್ಯ ಹಾಗೂ ರಕ್ತದೊಕುಳಿಯನ್ನು ನೆನಪಿಸುವ ಫೋಟೋಗಳ ಒಟ್ಟು ಸಂಗ್ರಹವೇ ಹಡೆದವ್ವನ ಶಾಪ. ಆ ಹೊತ್ತಗೆಯಲ್ಲಿರುವ ಪದ್ಯವನ್ನೇ ಎತ್ತಿಕೊಂಡು ಮಾತು ಪ್ರಾರಂಭಿಸಿದವರು ಚಕ್ರವರ್ತಿ ಸೂಲಿಬೆಲೆ.
ಕಿತ್ತು ತಿನ್ನುವ ರಣಹದ್ದುಗಳಿಗೆ ನೀನು ಬರಿಯ ಮಾಂಸವಷ್ಟೇ, ಹಿಡಿದ ಕುರ್ಚಿಯ ಬಿಡದ ಪಾಪಿಗಳಿಗೆ ನೀನು ಬರಿಯ ಒಂದು ಮತವಷ್ಟೇ! ನಿನ್ನ ಹೊರುವ, ಹೆರುವ ಆನಂದ ಒಡಲಿಗೆ ಸಾವಿರ ದೀಪಗಳ ದೀವಳಿಗೆ! ತುಂಟ ನಗು, ಓರೆ ನೋಟ, ಚಂದ್ರಮನೇ ಧರೆಗಿಳಿದ ಹೆಗ್ಗಳಿಕೆ.
ನೀ ಧರಿಸಿದ್ದ ಖಾಕಿ ಚೆಡ್ಡಿ ಬಿಳಿಯ ಶರ್ಟು, ಮಗು ನನ್ನ ಕಣ್ಣಿಗೆ ಹಬ್ಬ ಬಾಯ್ತುಂಬಾ ಭಾರತಿಗೆ ಜೈ ಎನ್ನುವ ನಿನ್ನ ಕಂಡರೆ ಭಗತ್ ಸಿಂಗನದೆ ಬಿಂಬ!
ನಾ ಕೊಟ್ಟ ಸಂಸ್ಕಾರದ ಬಗ್ಗೆ ಹೆಮ್ಮೆಯಿತ್ತು ನನಗೆ, ದೇಶ ಧರ್ಮಗಳಿಗೆ ನೀ ನನ್ನ ಕೊಡುಗೆ! ಅಗೋ! ಅದೇ ಮುಳುವಾಯ್ತು. ನೀನು ನಡು ರಸ್ತೆಯಲ್ಲಿ ಹೆಣವಾದೆ “ದೇಶಭಕ್ತಿ”ಯ ಅಪರಾಧಕೆ.
ರಕ್ತಕ್ಕೆ ಭೇದವೆಲ್ಲಿ ಮಗು ಯಾರು ಮುಸ್ಲಿಂ? ಯಾರು ಹಿಂದೂ? ಯಾರು ಧೂರ್ತ? ಯಾರು ಸಂತ? ಅದು ನೀರಂತೆ ರಸ್ತೆಯಲ್ಲಿ ಚೆಲ್ಲಿದಾಗಲೇ ಗೊತ್ತು, ಅದಕೂ ಕೇಸರಿ, ಬಿಳಿ, ಹಸಿರುಗಳ ಬಣ್ಣವಿದೆಯಂತೆ!
ಅಂಗಾತ ಬಿದ್ದ ನಿನ್ನ ಶವದ ಸುತ್ತ ನಾಯಿ, ನರಿ, ಹದ್ದುಗಳಂತೆ ಕಾಯುತ್ತಿದ್ದವು ಅಧಿಕಾರದ ಪಡಸಾಲೆಯಲ್ಲಿ ಶತಪಥ ಹಾಕುತ್ತಿದ್ದ ರಕ್ಕಸ ವಂಶದ ಪೀಳಿಗೆಯುಹದ್ದಾದರೂ ಬೇಕು ಮಗು ಕುಕ್ಕಿ ತಿಂದು ಸುಮ್ಮನೇ ಹಾರಿಬಿಡುತ್ತಿತ್ತು. ಇವ ಕೆರೆಯುತ್ತಾನೆ, ಕೊರೆಯುತ್ತಾನೆ ನಿನ್ನ ಕೊಂದವರ ಹೊತ್ತು ಸಂಭ್ರಮಿಸುತ್ತಾನೆ!ನನ್ನ ಕಣ್ಣೀರು ಬತ್ತಿ ಹೋಗಿದೆ. ಎಲ್ಲಿ ಕಂಡಲ್ಲಿ ನೀನೆ, ಕಿವಿಯಿಟ್ಟಲ್ಲಿ ನಿನ್ನದೇ ದನಿ ಹೃದಯ ಬೆಂದಿದೆ, ಮನಸು ಕದಡಿದೆ ಒಂದೊಂದು ಉಸಿರು ಇಂದು ಬಸಿರ ಶಾಪವಾಗಿದೆ!
ಈ ಕವನದಲ್ಲಿಯೇ ತಾಯಿಯೊಬ್ಬಳ ಅಂತರಾಳದ ಭಾವನೆಗಳಿವೆ. ಆಕೆಯ ನೋವುಗಳಿಗೆ ಸಾಹಿತ್ಯ ಸೇತುವೆಯಾಗಿದೆ. ಆಕೆಯ ಬರಿದಾದ ಒಡಲಲ್ಲಿ ನೋವು, ಸಂಕಟಗಳು ಹೆಪ್ಪುಗಟ್ಟಿವೆ. ಇಡೀ ಕವನವನ್ನು ಓದಿ ಚಕ್ರವರ್ತಿ ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು. ಚಂದನ್ ಎನ್ನುವ ಹೆಸರಿನ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆತನ ಪಕ್ಕದಲ್ಲಿಯೇ ಒಂದು ಗುಂಪು “ಪಾಕಿಸ್ತಾನ್ ಜಿಂದಾಬಾದ್, ಭಾರತ್ ಮುರ್ದಾಬಾದ್” ಎನ್ನುವ ಘೋಷಣೆಯನ್ನು ಮಾಡುತ್ತಾ ಹೋಯಿತು. ಅದನ್ನು ನೋಡಿದ ಚಂದನ್ ಗೆ ದೇಶಭಕ್ತಿ ಉಕ್ಕಿ ಬಂತು. ಅವರಿಗಿಂತ ಗಟ್ಟಿಯಾಗಿ “ಭಾರತ್ ಮಾತಾ ಕೀ ಜೈ” ಎಂದು ಘೋಷಣೆ ಕೂಗುತ್ತಾ ನಿಂತ. ಒಂದು ಗುಂಡು ಬಂದು ಸೀದಾ ದೇಹ ಹೊಕ್ಕಿತು. ಚಂದನ್ ಹೆಣವಾಗಿ ಹೋದ.
ಚಕ್ರವರ್ತಿಯವರಿಗೆ ಹಡೆದವ್ವನ ಶಾಪ ಪುಸ್ತಕದ ಡಿಸೈನ್ ಮಾಡುತ್ತಿದ್ದ ಹುಡುಗ ಫೋನ್ ಮಾಡಿ “ಅಣ್ಣಾ, ಪುಸ್ತಕ ಸ್ವಲ್ಪ ದೊಡ್ಡದಾಗಿ ಬರಬೇಕಿತ್ತು” ಎಂದನಂತೆ. ಇನ್ನೊಂದು ಐದು ವರ್ಷ ಸಿದ್ಧರಾಮಯ್ಯನವರಿಗೆ ಅಧಿಕಾರ ಕೊಟ್ಟರೆ ದೊಡ್ಡ ಪುಸ್ತಕವನ್ನೇ ತರಬೇಕಾಗುತ್ತದೆ ಎಂದು ಹೇಳಿದರಂತೆ ಚಕ್ರವರ್ತಿ. ಅದರ ಅರ್ಥ ಜನರಿಗೆ ಖಂಡಿತವಾಗಿ ಆಗಿರುತ್ತದೆ. ಇನ್ನು ಕಳ್ಳರನ್ನು ಹಿಡಿಯಲು ಹೋದ ಎಸ್ ಐ ಜಗದೀಶ್, ಅನುಮಾನಾಸ್ಪದವಾಗಿ ಸತ್ತು ಹೋದ ಮಲ್ಲಿಕಾರ್ಜುನ ಬಂಡೆಯವರ ಕೊಲೆಗಳನ್ನು ನೋಡುವಾಗ, ಕಾಂಗ್ರೆಸ್ ಸರಕಾರದ ಭ್ರಷ್ಟತೆಯನ್ನು ನೋಡಲಾಗದೇ ಈ ಪ್ರಪಂಚದಿಂದಲೇ ಎದ್ದು ಹೋದ ಡಿಕೆ ರವಿ, ತನ್ನ ಮೇಲೆ ನಡೆದ ದೌರ್ಜನ್ಯ, ಒತ್ತಡವನ್ನು ಕ್ಯಾಮೆರಾದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟು ನಂತರ ನಿಗೂಢವಾಗಿ ಸತ್ತು ಹೋದ ಡಿವೈಎಸ್ ಪಿ ಗಣಪತಿಯವರ ಶವಗಳನ್ನು ನೋಡಿದಾಗ ಪೊಲೀಸ್ ಅಧಿಕಾರಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ನಮ್ಮ ರಾಜ್ಯ ಎಷ್ಟು ಸೇಫ್ ಎನ್ನುವುದು ಗೊತ್ತಾಗುತ್ತದೆ. ಗಣಪತಿ ಸತ್ತು ಹೋದ ಕೆಲವೇ ಸಮಯದಲ್ಲಿ ಅದೊಂದು ಸಹಜ ಸಾವು ಎಂದು ಸಿಎಂ ಹೇಳುತ್ತಾರೆ ಎಂದರೆ ಅವರು ಮೊದಲೇ ಸಹಜ ಸಾವು ಎನ್ನುವಂತಹ ಸರ್ಟಿಫಿಕೇಟ್ ಸಿದ್ಧವಾಗಿಟ್ಟುಕೊಳ್ಳುತ್ತಾರೆ ಎನ್ನುವುದು ಗ್ಯಾರಂಟಿಯಲ್ಲವೇ ಎಂದು ಹೇಳಿದರು ಚಕ್ರವರ್ತಿ ಸೂಲಿಬೆಲೆ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಿಬಿಐಗೆ ಅತೀ ಹೆಚ್ಚು ಕೇಸು ಹೋದದ್ದು ಕರ್ನಾಟಕದಿಂದ ಎನ್ನುವುದನ್ನೇ ನೋಡುವುದಾದರೆ ನಮ್ಮ ರಾಜ್ಯದಲ್ಲಿರುವ ಪೊಲೀಸರ ಮೇಲೆ ಸರಕಾರಕ್ಕೆ ಭರವಸೆ ಇಲ್ಲದಿರುವುದು ಸ್ಪಷ್ಟ. ಈ ನಡುವೆಯೂ ನಮ್ಮ ಪೊಲೀಸರು ದೀಪಕ್ ರಾವ್ ಹತ್ಯೆಯ ಆರೋಪಿಗಳನ್ನು ಕೂಡಲೇ ಹಿಡಿದರೂ ಅದಕ್ಕೆ ಕೆಲವು ದಿನಗಳ ಒಳಗೆ ಸರಕಾರ ಏನೂ ನಡೆದಿಲ್ಲ ಎನ್ನುವಂತೆ ಮುಗ್ಧ ಅಲ್ಪಸಂಖ್ಯಾತರ ಮೇಲೆ ಏನಾದರೂ ಪ್ರಕರಣ ಇದ್ದರೆ ಹಿಂದಕ್ಕೆ ಪಡೆಯಬೇಕು ಎಂದು ಹೇಳಿ ಅಲ್ಪಸಂಖ್ಯಾತರಲ್ಲಿಯೇ ಒಂದು ಹೊಸ ವರ್ಗವನ್ನು ಸೃಷ್ಟಿಸಿದ್ದಾರೆ. ಇನ್ನು ಜೈಲಿನ ಒಳಗಿರುವವರು ಮುಗ್ಧ ಅಲ್ಪಸಂಖ್ಯಾತರು, ಹೊರಗಿನವರು ಬರಿ ಅಲ್ಪಸಂಖ್ಯಾತರು ಎನ್ನುವ ಹೊಸ ಡಿವಿಝನ್ ಶುರುವಾಗಲಿದೆ ಎಂದು ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು. ದೀಪಕ್ ರಾವ್ ಹಂತಕರು ನಿಜವಾಗಿ ಯಾರೋ ಬೇರೆಯವರನ್ನು ಕೊಲ್ಲಲು ಹೋಗಿದ್ದರು. ಆದರೆ ಮಿಸ್ ಆಗಿ ದಾರಿಯಲ್ಲಿ ಸಿಕ್ಕಿದ ದೀಪಕ್ ರಾವ್ ನನ್ನು ಕೊಂದಿದ್ದಾರೆ. ಆದ್ದರಿಂದ ಕೊಂದವರದ್ದು ತಪ್ಪಿಲ್ಲ, ಅವರು ಮುಗ್ಧರು ಎಂದು ಸಿದ್ಧರಾಮಯ್ಯ ಹೇಳುವಂತಹ ಸಾಧ್ಯತೆ ಇದೆ ಎಂದು ಹೇಳಿ ಚಕ್ರವರ್ತಿ ಮಾತು ಮುಂದುವರೆಸಿದರು…
Leave A Reply