ತಣ್ಣೀರುಬಾವಿಯ ತೂಗುಸೇತುವೆಯಲ್ಲಿ ನಡೆದಾಡುವ ಕನಸು ಬಿದ್ದ ಘಳಿಗೆ!!
![](https://tulunadunews.com/wp-content/uploads/2018/05/34442020125_e34a53257d_b.jpg)
ಅಭ್ಯರ್ಥಿಗಳು ಅಥವಾ ಗೆದ್ದು ಅಧಿಕಾರಕ್ಕೆ ಬಂದು ಮತ್ತೆ ಚುನಾವಣೆಗೆ ನಿಲ್ಲುವ ಜನಪ್ರತಿನಿಧಿಗಳು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಅಂಗೈಯಲ್ಲಿಯೇ ಸ್ವರ್ಗ ತೋರಿಸಲು ಹೋಗಬಾರದು. ತಾವು ಮುಂದಿನ ಬಾರಿ ಗೆದ್ದರೆ ಏನೇನೋ ಕನಸು ಕಂಡಿದ್ದೇವೆ, ಅದನ್ನು ಈಡೇರಿಸುತ್ತೇವೆ ಎಂದು ಭರವಸೆ ಕೊಟ್ಟಲ್ಲಿ ಅವರು ಗೆದ್ದ ಬಳಿಕವೂ ಜಾರಿಗೆ ಬರದೆ ಇದ್ದರೆ ಅದರಿಂದ ಆಗುವ ಡ್ಯಾಮೇಜ್ ಅಷ್ಟಿಷ್ಟಲ್ಲ. ಒಂದು ವೇಳೆ ಒಬ್ಬ ಜನಪ್ರತಿನಿಧಿ ತನ್ನ ಅಧಿಕಾರಾವಧಿಯಲ್ಲಿ ಒಂದು ಪ್ರಾಜೆಕ್ಟ್ ಶುರು ಮಾಡಿ ಅದು ಕಂಪ್ಲೀಟ್ ಆಗುವ ಮೊದಲೇ ಚುನಾವಣೆ ಬಂದರೆ ಆಗ ಅದನ್ನು ಪೂರ್ಣಗೊಳಿಸುವ ಹೊಣೆ ನಂತರ ಬಂದ ಶಾಸಕರ ಮೇಲೆ ಇರುತ್ತದೆ. ಒಂದು ವೇಳೆ ನಂತರದ ಶಾಸಕರು ಅದನ್ನು ಮುಂದುವರೆಸದೆ ಹಾಗೆ ಬಿಟ್ಟರೆ ಅಲ್ಲಿಯ ತನಕ ಖರ್ಚು ಮಾಡಿದ ನಮ್ಮ ತೆರಿಗೆಯ ಹಣ ವ್ಯರ್ಥವಲ್ಲವೇ?
ಒಂದು ಕೋಟಿ ಎಲ್ಲಿಗೆ ಹೋಯಿತು…
ಉದಾಹರಣೆಗೆ ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ಹಿಂದಿನ ಶಾಸಕ ಎನ್ ಯೋಗೀಶ್ ಭಟ್ ಅವರು ತೂಗು ಸೇತುವೆಯ ಕನಸು ಕಂಡಿದ್ದರು. ತುಂಬಾ ಪ್ರಯತ್ನದ ಬಳಿಕ ಅದು ಅನುಷ್ಟಾನಗೊಳಿಸಲು ಮುಹೂರ್ತ ಕೂಡಿ ಬಂದಿತ್ತು. ಸುಮಾರು 12 ಕೋಟಿಯ ಪ್ರಾಜೆಕ್ಟ್ ಅದು. ಪ್ರಾರಂಭಿಕ ಹಂತದಲ್ಲಿ ರಾಜ್ಯ ಸರಕಾರ ಅದಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿತು. ಆ ಪ್ರಕಾರ ತೂಗು ಸೇತುವೆಗೆ ಶಿಲಾನ್ಯಾಸ ಮಾಡಿ ಅಡಿಪಾಯ ಹಾಕುವ ಕೆಲಸ ಶುರುವಾಯಿತು. ಮಂಗಳೂರಿನ ನಾಗರಿಕರು ಬೋಳಾರದಿಂದ ತಣ್ಣೀರುಬಾವಿಯ ತನಕ ತೂಗು ಸೇತುವೆಯಲ್ಲಿ ನಡೆದಾಡುವ ಕನಸು ಕಂಡರು. ಮಾಧ್ಯಮಗಳಲ್ಲಿ ಕೂಡ ಈ ಯೋಜನೆಗೆ ಪ್ರಶಂಸನೀಯ ಮಾತುಗಳು ಕೇಳಿ ಬಂದವು. ತೂಗು ಸೇತುವೆಗೆ ಇನ್ನೇನು ವೇಗ ಸಿಗುತ್ತೆ ಎನ್ನುವಾಗ ರಾಜ್ಯದಲ್ಲಿ ಬಿಜೆಪಿ ವಿರುದ್ಧವಾಗಿ ಬೀಸಿದ ಸುಂಟರಗಾಳಿಗೆ ಯೋಗೀಶ್ ಭಟ್ಟರಂತಹ ಶಾಸಕರು ಕೂಡ ತರಗೆಲೆಯಂತೆ ಹಾರಿ ಹೋಗಬೇಕಾಯಿತು. ಅವರ ನಂತರ ತೂಗು ಸೇತುವೆ ಇವತ್ತಿಗೂ ಐದು ವರ್ಷಗಳ ಬಳಿಕ ಹಾಗೆ ಕನಸಿನ ಯೋಜನೆಯಂತೆ ಕನಸಿನಲ್ಲಿಯೇ ಉಳಿದುಬಿಟ್ಟಿದೆ. ಅದು ಯಾಕೆ ಮುಂದುವರೆಯಲಿಲ್ಲ. ಯಾರಿಗೂ ಗೊತ್ತಿಲ್ಲ. ಎಲ್ಲವೂ ತಯಾರಾಗಿ ಒಂದು ಕೋಟಿ ಕೂಡ ಬಿಡುಗಡೆಗೊಂಡ ಪ್ರಾಜೆಕ್ಟ್ ಯಾಕೆ ಮುಂದುವರೆಯಲಿಲ್ಲ ಎನ್ನುವ ದೊಡ್ಡ ಪ್ರಶ್ನಾರ್ತಕ ಚಿನ್ನೆ ಉಳಿದಿದೆ. ಅದನ್ನು ಯೋಗೀಶ್ ಭಟ್ಟರು ಪ್ರಾರಂಭಿಸಿದ್ದರು ಎನ್ನುವ ಕಾರಣಕ್ಕೆ ನಂತರ ಬಂದವರು ಅದನ್ನು ಮುಂದುವರೆಸಿಕೊಂಡು ಹೋಗಿಲ್ಲವೇ ಎನ್ನುವುದಕ್ಕೆ ಉತ್ತರ ಸಿಗುತ್ತಿಲ್ಲ. ನಮಗೆ ಅದನ್ನು ಯೋಗೀಶ್ ಭಟ್ಟರೇ ಶಂಕುಸ್ಥಾಪನೆ ಮಾಡಿದ್ದು ಅವರೇ ಉದ್ಘಾಟನೆ ಮಾಡಬೇಕು ಎನ್ನುವ ಹಟ ಇಲ್ಲ. ಆದರೆ ಅವರು ಬಿತ್ತಿದ ಕನಸನ್ನು ನಾವು ಮಂಗಳೂರಿನ ನಾಗರಿಕರು ಪ್ರೀತಿಯಿಂದ ಕಾಯುತ್ತಿದ್ದೇವಲ್ಲ. ಹಾಗಾದರೆ ಅದು ಅಲ್ಲಿಗೆ ಮುಗಿಯುತ್ತಾ? ಹೋಗಲಿ, ಈ ಭಾವನೆ ಅದು ಇದು ಮತ್ತಿನ ವಿಷಯ. ನಮ್ಮ ಒಂದು ಕೋಟಿಯ ವಿಷಯ ಹೇಳಿ ಸ್ವಾಮಿ.
ಬಸ್ ಸ್ಟೇಂಡ್ ಕನಸು….
ರಾಜ್ಯ ಸರಕಾರ ತೂಗು ಸೇತುವೆ ಮಾಡಿ ಹೋಗಿ ಎಂದು ಒಂದು ಕೋಟಿ ಬಿಡುಗಡೆ ಮಾಡಿತ್ತಲ್ಲ, ಆ ಹಣದಿಂದ ಪೌಂಡೇಶನ್ ಕೆಲಸ ನಡೆದಿತ್ತಲ್ಲ. ಅದನ್ನು ಹಾಗೆ ಬಿಟ್ಟಿರುವುದರಿಂದ ನಮ್ಮ ಕೋಟಿ ರೂಪಾಯಿ ಹಾಗೆ ನೀರಿನಲ್ಲಿ ಹೋಮ ಮಾಡಿದಂತೆ ಆಗಿಲ್ಲವೇ. ನಮ್ಮ ನಿಮ್ಮ ತೆರಿಗೆಯ ಹಣಕ್ಕೆ ಬೆಲೆ ಇಲ್ಲವೇ? ಒಂದು ಕೋಟಿ ಎಂದರೆ ಚಿಕ್ಕ ಮೊತ್ತವಲ್ಲ. ಅದನ್ನು ಸಂಪಾದಿಸಲು ಒಬ್ಬ ಮಧ್ಯಮ ವರ್ಗದ ವ್ಯಕ್ತಿಗೆ ಸಾಧ್ಯವಾ? ಹಾಗಿರುವಾಗ ನಮ್ಮ ರಾಜಕಾರಣಿಗಳು ಯಾರದ್ದೋ ಯೋಜನೆ ನಾವು ಯಾಕೆ ಮುಂದುವರೆಸಿಕೊಂಡು ಹೋಗುವುದು ಎಂದು ಕೈ ಬಿಟ್ಟರೆ ನಷ್ಟ ಅವರಿಗೆ ಅಲ್ಲ. ನಮಗೆ. ಇನ್ನು ಮಂಗಳ ಕಾರ್ನಿಶ್ ಯೋಜನೆ. ಮಂಗಳೂರು ನಗರದ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಯೋಜಿಸಿದಂತಹ ಉತ್ತಮ ಯೋಚನೆ. ನೇತ್ರಾವತಿ-ಗುರುಪುರ ನದಿ ತೀರದಲ್ಲಿ ಹೆದ್ದಾರಿ ಶೈಲಿಯಲ್ಲಿ ರೂಪರೇಶೆ ಸಿದ್ಧಪಡಿಸಿಕೊಂಡ ಯೋಜನೆ. ಇದು ಅನುಷ್ಟಾನಕ್ಕೆ ಬಂದರೆ ಮಂಗಳೂರಿಗೆ ಬಹಳ ಉಪಯೋಗವಿತ್ತು. ಆದರೆ ಈ ಬಗ್ಗೆ ಯಾವುದೇ ಸುಳಿವಿಲ್ಲ. ಆದ್ದರಿಂದ ಯಾವುದೇ ಶಾಸಕ ತನ್ನ ಐದು ವರ್ಷಗಳ ಅವಧಿಯಲ್ಲಿ ಮಾಡಬಹುದಾದಂತಹ ಯೋಜನೆಗಳನ್ನು ಮಾತ್ರ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಶಾಸಕರು ಅದನ್ನು ಮುಂದುವರೆಸಿಕೊಂಡು ಹೋಗಬೇಕು ಅಥವಾ ಕನಿಷ್ಟ ಹಿಂದಿನ ಶಾಸಕ ತಮ್ಮ ಅವಧಿಯಲ್ಲಿ ಅರ್ಧಕ್ಕೆ ನಿಲ್ಲಿಸಿದ ಕೆಲಸಗಳನ್ನು ಮಾಡುವಂತೆ ಒತ್ತಡ ಹಾಕಬೇಕು. ಇದ್ಯಾವುದೂ ಆಗದಿದ್ದರೆ ನಾವು ಪ್ರಶ್ನಿಸುವ ಕೆಲಸವಾದರೂ ಮಾಡಬೇಕು. ಈಗ ಏನಾಗುತ್ತಿದೆ ಎಂದರೆ ಹಿಂದಿನ ಶಾಸಕರು ತಮ್ಮ ಯೋಜನೆಗಳನ್ನು ಯಾಕೆ ಅರ್ಧಕ್ಕೆ ಬಿಟ್ಟಿರಿ ಎಂದು ಕೇಳುವುದಿಲ್ಲ. ಈಗಿನವರು ಅದು ಹಿಂದಿನ ಶಾಸಕರದ್ದು ಎಂದು ಮಾಡಲು ಹೋಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಕೋಟಿ ಕೋಟಿ ಹಣ ತಣ್ಣೀರುಬಾವಿಯಲ್ಲಿ ಹರಿದು ಹೋಗುತ್ತಿದೆ. ಅಲ್ಲಿ ಪಂಪ್ ವೆಲ್ ನಲ್ಲಿ ಸುಸಜ್ಜಿತ ಬಸ್ ಸ್ಟೇಂಡ್ ಆಗಲು ಬಂದ ಹಣವನ್ನು ಪಂಪ್ ವೆಲ್ ರಸ್ತೆಯೊಂದಕ್ಕೆ ಖರ್ಚು ಮಾಡಲಾಗಿದೆ. ಹಾಗಾದರೆ ಬಸ್ ಸ್ಟೇಂಡ್ ಮಾಡಲು ನಮ್ಮ ಶಾಸಕರುಗಳಿಗೆ ಮನಸ್ಸಿಲ್ಲ ಎಂದು ಆಯಿತಲ್ಲ, ಹಾಗಾದರೆ ಸುಸಜ್ಜಿತ ಬಸ್ ನಿಲ್ದಾಣದ ಕನಸು ತೋರಿಸುವುದು ಯಾಕೆ? ಎಲ್ಲವೂ ಹೀಗೆ. ಮನೆಯ ಆಸೆ ತೋರಿಸುವುದು…. ಬಿಡಿ ಜನರಿಗೆ ಎಲ್ಲವೂ ಅರ್ಥವಾಗುತ್ತದೆ…
Leave A Reply