ಬಿಜೆಪಿಗರೇ ತಾಳ್ಮೆ ಇರಲಿ, ದಿವಾಕರ್ ಮೇಯರ್ ಆಗಿ ಇರುವ ತನಕ ತಿನ್ನುವುದು ನಿಷಿದ್ಧ!!
![](https://tulunadunews.com/wp-content/uploads/2020/09/20200902_191950.jpg)
ತುಳುನಾಡು ನ್ಯೂಸ್ ಫಲಶ್ರುತಿ ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಪಟ್ಟಣ ಮತ್ತು ಯೋಜನಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕುಂಜತ್ತಬೈಲ್ ಸಹಿ ಹಾಕಿ ನೀಡಿದ್ದ ಎಲ್ಲಾ ಕಾಮಗಾರಿಗಳನ್ನು ಕೈಬಿಡಲಾಗಿದೆ ಅಂದರೆ ಮಂಜೂರು ಆದದ್ದನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತುಳುನಾಡು ನ್ಯೂಸ್ ನಲ್ಲಿ ನಾನು ” ಎತ್ತ ಸಾಗುತ್ತಿದೆ ಪಾಲಿಕೆ, ಕೇಳುವವರೇ ಇಲ್ವಾ” ಎಂದು ಕಳೆದ ವಾರ ಬರೆದಿದ್ದೆ. ಒಬ್ಬ ಜನಪ್ರತಿನಿಧಿಗೆ ತನ್ನ ಅಧಿಕಾರಾವಧಿಯಲ್ಲಿ ಗೋಲ್ ಮಾಲ್ ಆಗಬಾರದು ಎಂದು ಇದ್ದರೆ ಇಡೀ ಪ್ರಪಂಚ ಎದುರಾದರೂ ಅವರು ಅವ್ಯವಹಾರ ಆಗಲು ಬಿಡುವುದಿಲ್ಲ. ಆ ನಿಟ್ಟಿನಲ್ಲಿ ಮೇಯರ್ ದಿವಾಕರ ಪಾಂಡೇಶ್ವರ್ ಅವರನ್ನು ಮೆಚ್ಚಲೇಬೇಕು.ಅ
ಅವರುಗೆದ್ದ ನಂತರ ಫ್ಲೆಕ್ಸ್ ಎಲ್ಲಿ ಹಾಕುವುದು, ಎಷ್ಟು ಹಾಕುವುದು, ಹಾಕಿದ್ದು ಕಾಣುತ್ತದಾ ಎಂದು ಯೋಚಿಸುತ್ತಾ ಸಮಯ ವ್ಯಯ ಮಾಡಲಿಲ್ಲ. ನೇರವಾಗಿ ಕೆಲಸಕ್ಕೆ ಇಳಿದರು. ಪ್ರಚಾರ ಕಡಿಮೆ ಸಿಕ್ಕಿರಬಹುದು. ಆದರೆ ಫಲಾಪೇಕ್ಷೆ ಇಲ್ಲದವರಿಂದಲೇ ಸಿಕ್ಕಿದೆ. “ಜಾಹೀರಾತು ಕೊಡುತ್ತಾರೆ, ಹಿಂದೆ ಬಂದರೆ ಐನೂರು, ಸಾವಿರ ಕಿಸೆಗೆ ಹಾಕಿ ಕಳುಹಿಸುತ್ತಾರೆ” ಎನ್ನುವ ಕಾರಣಕ್ಕೆ ಕೆಲವರಿಗೆ ಬಹುಪರಾಕ್ ಸಿಕ್ಕಿದ ಹಾಗೆ ಇವರಿಗೆ ಸಿಗಲು ಸಾಧ್ಯವಿಲ್ಲ. ಇಲ್ಲದೇ ಹೋದರೆ ಐದು ಲಕ್ಷದ ಕಾಮಗಾರಿಯ ಗುದ್ದಲಿಪೂಜೆ ಕೂಡ ಹಾಕುವ “ವಾಣಿ”ಗಳು ಒಂದು ದೊಡ್ಡ ಭ್ರಷ್ಟಾಚಾರ ನಿಲ್ಲಿಸಿದ ಮೇಯರ್ ಅವರ ದಿಟ್ಟತನಕ್ಕೆ ಶಹಭಾಷ್ ಎನ್ನಲು ತಮ್ಮಲ್ಲಿ ಜಾಗ ಇಟ್ಟಿಲ್ಲ.
ಇನ್ನು ಭಾರತೀಯ ಜನತಾ ಪಾರ್ಟಿಯ ವಿಷಯಕ್ಕೆ ಬರೋಣ. ಪಾರ್ಟಿ ವಿದ್ ಡಿಫರೆನ್ಸ್. ಆದರೆ ಯಾವಾಗ? ಯಾವಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಪ್ಪಟ ಸಂಸ್ಕೃತಿ, ದೇಶಪ್ರೇಮ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಛಲ ಕಲಿಸುತ್ತಿತ್ತೋ ಆಗ ಅಲ್ಲಿಂದ ಬಂದವರು ಉಸಿರು ನಿಲ್ಲುವ ತನಕ ಎಂಜಿಲಿಗೆ ಕೈ ಹಾಕಲ್ಲ ಎಂದೇ ನಿರ್ಧರಿಸಿ ರಾಜಕೀಯಕ್ಕೆ ಬರುತ್ತಿದ್ದರು. ಈಗ ಶುದ್ಧ ಹಾಲಿಗೆ ನೀರು ಹೆಚ್ಚು ಬೆರೆತಂತೆ ಎಲ್ಲದರಲ್ಲಿಯೂ ಬದಲಾವಣೆ ಆಗಿದೆ. ಸಂಘದ ಗಣವೇಷವನ್ನು ವರ್ಷಕ್ಕೊಮ್ಮೆ, ಎರಡು ಸಲ ಹಿರಿಯರ ಎದುರಿಗೋ ಅಥವಾ ಫೇಸ್ ಬುಕ್ಕಿನಲ್ಲಿ ಹಾಕುವುದಕ್ಕೋ ತೆಗೆಯುವವರ ಸಂಖ್ಯೆ ಜಾಸ್ತಿಯಾಗಿದೆ ವಿನ: ಸಂಘದ ತತ್ವ, ಧ್ಯೇಯ ಹಲವರಲ್ಲಿ ಉಳಿದಿಲ್ಲ. ಅದರೊಂದಿಗೆ ಹಿಂದೆ
ಬಿಜೆಪಿಯಲ್ಲಿದ್ದವರಿಗೆ ಅಧಿಕಾರಕ್ಕೆ ಬರದಿದ್ದರೂ ಬೇಸರವಿಲ್ಲ, ಬರುವುದು ತಡವಾದರೂ ಪರವಾಗಿಲ್ಲ, ಭಾರತಾಂಬೆಯ ಹೆಸರಿನಲ್ಲಿ ದೇಶದ ಒಳಗಿನ ಊಟಿಕೋರರನ್ನು ಸಹಿಸಲ್ಲ ಎನ್ನುವ ಸಂಸ್ಕೃತಿ ಇತ್ತು. ಈಗ ಕೇಳಿದರೆ ನಾವು ಸನ್ಯಾಸಿಗಳಲ್ಲ ಎನ್ನುತ್ತಾರೆ.
ಇನ್ನು ಪಾಲಿಕೆಯ ವಿಷಯಕ್ಕೆ ಬರೋಣ. ಈ ಬಾರಿ ಬಹುತೇಕ ಯುವ ಮುಖಗಳು ಪ್ರಥಮ ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಬಂದಿದ್ದಾರೆ. ಇದರಲ್ಲಿ ಹೆಚ್ಚಿನವರಿಗೆ ಪಾಲಿಕೆಯ ಕಟ್ಟಡಕ್ಕೆ ಎಷ್ಟು ಫ್ಲೋರ್ಸ್ ಇದೆ ಎಂದು ಗೊತ್ತಾದದ್ದೇ ಮೊನ್ನೆ ಗೆದ್ದ ಬಳಿಕ. ಹಾಗಿರುವಾಗ ಹಣ ಹೇಗೆ ಮಾಡುವುದು ಎಂದು ಗೊತ್ತಾಗಲು ಅವರಿಗೆ ಇನ್ನೊಂದು ಆರೇಳು ತಿಂಗಳು ಬೇಕಾಗಬಹುದು. ಕೆಲವರು ಬೇಗ ಕಲಿತುಕೊಂಡಿದ್ದಾರೆ ಮತ್ತು ಮರಳಿಗೆ ಮೊಸರು ಅದ್ದಿ ಮುಖಕ್ಕೆ ಒರೆಸಿಕೊಂಡಿರುವುದು ಬೇರೆಯವರಿಗೆ ಗೊತ್ತಾಗಿಲ್ಲ ಎಂದು ಅಂದುಕೊಂಡಿದ್ದಾರೆ. ಅದು ಇರಲಿ, ಮುಂದಿನ ಬಾರಿ ಹೇಳೋಣ. ಪ್ರಥಮ ಬಾರಿ ಗೆದ್ದವರಿಗೆ ತಮ್ಮ ವಾರ್ಡ್ ಅಭಿವೃದ್ಧಿ ಮಾಡಬೇಕು, ತಮಗೂ, ಪಕ್ಷಕ್ಕೂ ಒಳ್ಳೆಯ ಹೆಸರು ತರಬೇಕು ಎಂದು ಇರುತ್ತದೆ. ಆದರೆ ಪಾಲಿಕೆಯ ಒಳಗಿರುವ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಭಾಂದವ್ಯ ಗೊತ್ತಿರುವುದಿಲ್ಲ. ಅಧಿಕಾರಿಗಳು ಏನು ಮಾಡುತ್ತಾರೆ ಎಂದರೆ ” ಮೇಡಂ/ಸರ್, ನೀವು ಇಲ್ಲೊಂದು ಸಹಿ ಹಾಕಿದರೆ ಸಾಕು, ಐದು ಲಕ್ಷದ ಕಾಮಗಾರಿ, ನಿಮ್ಮ 50 ಸಾವಿರ ಎಲ್ಲಿ ಮುಟ್ಟಿಸಬೇಕು ಎಂದು ಹೇಳಿ, ತಲುಪಿಸುತ್ತೇವೆ” ಎಂದು ಹೇಳಿಬಿಟ್ಟಿರುತ್ತಾರೆ. ಅಷ್ಟರಲ್ಲಿ ಕಾರ್ಪೋರೇಟರ್ ಬಾಯಲ್ಲಿ ಓಶಿಯನ್ ಪರ್ಲ್ ಗುಲಾಬ್ ಜಾಮೂನ್ ನೀರಾಗಿ ಹರಿಯುತ್ತದೆ. ಯಾರಿಗೂ ಗೊತ್ತಾಗಲ್ಲ ಎಂದು ಅಧಿಕಾರಿ ಹೇಳಿದ್ದು ಕಿವಿಯಲ್ಲಿ ಗುಂಯ್ ಗುಟ್ಟಿರುತ್ತದೆ. ನಂತರ ತಿನ್ನುವುದೇ ಕಾಯಕವಾಗುತ್ತದೆ.
ಈಗ ಶರತ್ ಕುಂಜತ್ತಬೈಲ್ ವಿಷಯಕ್ಕೆ ಬರೋಣ. ಇದು ಅವರ ಎರಡನೇ ಅವಧಿ. ಮೊದಲನೇ ಅವಧಿ ನಸೀಬು ಚೆನ್ನಾಗಿತ್ತು. ಶುದ್ಧ ಹಸ್ತ ಎಂದು ಬಿರುದು ಬಿಜೆಪಿಯೊಳಗೆ ಸಿಕ್ಕಿತ್ತು. ಅವರಿಗೆ ಅತ್ಯಂತ ಹೆಚ್ಚು ಗೋಲಮಾಲ್ ಆಗುವ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಕೊಟ್ಟರೆ ಶುದ್ಧಹಸ್ತದಿಂದಲೇ ನಡೆಸಿಕೊಂಡು ಹೋಗುತ್ತಾರೆ. ಪಾಲಿಕೆಯಲ್ಲಿ ಬಿಜೆಪಿಯ ಮಾನ ಉಳಿಸುತ್ತಾರೆ ಎನ್ನುವ ಕಾರಣಕ್ಕೆನೆ ಆ ಹೆಚ್ಚು ಮೇಯುವ ಹುಲ್ಲುಗಾವಲನ್ನು ಕೊಡಲಾಗಿತ್ತು. ಆದರೆ ಮೊದಲನೇ ಸ್ಥಾಯಿ ಸಮಿತಿ ಸಭೆ ಶುರುವಾಗುವ ಮೊದಲೇ ಹೀಗೆ ಭ್ರಷ್ಟಾಚಾರದ ಹೊಗೆ ಹೊರಗೆ ಬಂದಿದೆ. ಈಗ ಇಲ್ಲಿರುವ ಪ್ರಶ್ನೆ:ಕಾರ್ಪೋರೇಟರ್ ಶರತ್ ಕುಂಜತ್ತಬೈಲ್ ಗೊತ್ತಿಲ್ಲದೇ ಹೀಗೆ ಮಾಡಿದ್ರಾ? ಅವರಿಗೆ ಅಧಿಕಾರಿಗಳು ದಾರಿ ತಪ್ಪಿಸಿದ್ರಾ? ಹಣದ ಆಮಿಷ ತೋರಿಸಿ ಬಾವಿಗೆ ಬೀಳಿಸಿದ್ರಾ? ಗೊತ್ತಾಗಲ್ಲ ಎಂದು ಇವರು ಅಂದುಕೊಂಡ್ರಾ? ಯಾವುದು ಸತ್ಯ? ಆಂತರಿಕ ತನಿಖೆ ಶಾಸಕದ್ವಯರು ಮಾಡುತ್ತಾರೆ ಎಂದು ಅಂದುಕೊಂಡಿದ್ದೇನೆ. ಒಟ್ಟಿನಲ್ಲಿ ದಿವಾಕರ ಪಾಂಡೇಶ್ವರ್ ಮೇಯರ್ ಆಗಿ ಇರುವ ತನಕ ಯಾರೂ ತಿನ್ನುವ ಕೆಲಸಕ್ಕೆ ಕೈ ಹಾಕಬೇಡಿ, ನಿಮ್ಮ ಒಳ್ಳೆಯದ್ದಕ್ಕೆ ಹೇಳುತ್ತಿದ್ದೇನೆ!
Leave A Reply