ವಿಫಲ ನಿರ್ಧಾರಗಳು ಮತ್ತು ಅಸಮರ್ಪಕ ಆಡಳಿತ ಪೆಟ್ಟು ನೀಡುತ್ತವೆ!!

ಒಂದು ವರ್ಷದ ಮೊದಲು ಕೊರೊನಾ ನಮ್ಮನ್ನು ಅಪ್ಪಳಿಸಿದಾಗ ನಮ್ಮ ಸರಕಾರಕ್ಕೆ ಅನುಭವದ ಕೊರತೆ ಇತ್ತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಈ ಬಾರಿ ಎರಡನೇ ಅಲೆಯ ಹೊಡೆತವನ್ನು ಜನಸಾಮಾನ್ಯರು ಅನುಭವಿಸುತ್ತಿರುವಾಗ ಒಂದಂತೂ ನಿಜ, ಇದು ನಮ್ಮ ರಾಜ್ಯ ಸರಕಾರದ ಸ್ವಯಂಕೃತ ಅಪರಾಧ. ಈಗ ಇದನ್ನು ಹೇಗೆ ನಿಯಂತ್ರಿಸುವುದು ಎಂದು ತಿಳಿಯದೆ ಸರಕಾರ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಾ ಅರೆಬೆಂದ ನಿರ್ಣಯಗಳನ್ನು ಜಾರಿಗೆ ತರುತ್ತಿದೆ. ಗುರುವಾರ ಸಂಜೆಯಾಗುತ್ತಿದ್ದಂತೆ ರಾಜ್ಯದ ಉದ್ದಗಲಕ್ಕೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಒಂದಿಷ್ಟು ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. ಹೀಗೆ ಸಡನ್ನಾಗಿ ರಾಜ್ಯ ಸರಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ವ್ಯಾಪಾರಿಗಳು ಕೂಡ ದಂಗಾಗಿದ್ದಾರೆ. ಮೊದಲೇ ಮುನ್ಸೂಚನೆ ಕೊಡದೇ ಹೀಗೆ ಏಕಾಏಕಿ ಬಂದು ಅಂಗಡಿಗಳನ್ನು ಮುಚ್ಚಿಸುತ್ತಿರುವುದರ ಬಗ್ಗೆ ವ್ಯಾಪಾರಿ ವಲಯದಲ್ಲಿ ಆಕ್ರೋಶ ಇದ್ದರೆ ಇತ್ತ ಜನಸಾಮಾನ್ಯರು ಮದುವೆ ಸಹಿತ ಶುಭ ಸಮಾರಂಭಗಳಿಗೆ ಖರೀದಿ ಉತ್ಸಾಹದಲ್ಲಿ ಇದ್ದವರಿಗೆ ಸಡನ್ನಾಗಿ ಶಾಕ್ ಆಗಿದೆ. ಬಟ್ಟೆ ಅಂಗಡಿಯಿಂದ ಗ್ರಾಹಕರನ್ನು ಹೊರಗೆ ಕಳುಹಿಸಿ ಅಂಗಡಿ ಬಂದ್ ಮಾಡಲಾಗಿದೆ. ಇನ್ನು ಹೋಟೇಲುಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ ಎಂದು ಹೇಳಿರುವುದರಿಂದ ಅಲ್ಲಿ ಕೂಡ ಹೋಟೇಲುಗಳು ಅರ್ಧ ಬಂದ್ ಆಗಿದೆ. ಇದೆಲ್ಲ ಸಿಎಂ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ. ಸಿಎಂ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಹೇಳಿ ಹೀಗೆ ಮಾಡಿಸುವುದರಿಂದ ಜನರಿಗೆ ರಾಜ್ಯ ಸರಕಾರದ ಮೇಲೆ ಏಕಾಏಕಿ ಸಿಟ್ಟು, ಹತಾಶೆ ಮೂಡುತ್ತಿದೆ. ಯಾವಾಗ ಈ ಅಂಗಡಿಗಳ ಮಾಲೀಕರು ಸರಕಾರದ ವಿರುದ್ಧ ಮಾತನಾಡಲು ಶುರು ಮಾಡಿದರೋ ಆಗ ಸರಕಾರ ಮತ್ತೆ ಎಚ್ಚೆತ್ತುಕೊಂಡಿದೆ. ಯಾವ ಅಂಗಡಿಗಳನ್ನು ಮುಚ್ಚಬೇಕು ಎನ್ನುವ ಪರಿಷ್ಕೃತ ಆದೇಶ ನೀಡುವುದಾಗಿ ಹೇಳಿದೆ. ಹೀಗೆ ಎಡಬಿಡಂಗಿ ಆಟ ಆಡುತ್ತಿರುವ ರಾಜ್ಯ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಅವರು ಏನು ಮಾಡಿದರೂ ಅದು ಮುಂದಿನ ದಿನಗಳಲ್ಲಿ ರಿವರ್ಸ್ ಆಗಲಿದೆ. ಇನ್ನು ಪಾಲಿಕೆಯಲ್ಲಿ ಕೂಡ ಆಗುತ್ತಿರುವ ಅವಾಂತರಗಳನ್ನು ನೋಡಿದರೆ ಇದು ಕೂಡ ಪಾಲಿಕೆಯ ವಿರುದ್ಧ ಜನರ ಆಕ್ರೋಶ ಏಳುವಂತೆ ಮಾಡುತ್ತದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮೂರು ವಲಯಗಳನ್ನು ರಚನೆ ಮಾಡಲಾಗಿದೆ. ಒಂದು ಲಾಲ್ ಭಾಗ್ ನಲ್ಲಿರುವ ಕೇಂದ್ರ ಕಚೇರಿ ಹಾಗೂ ಕದ್ರಿ ಮತ್ತು ಸುರತ್ಕಲ್ ನಲ್ಲಿ ಉಪವಲಯ ಕಚೇರಿಗಳನ್ನು ತೆರೆಯಲಾಗಿದೆ. ಮೂರು ವಲಯಗಳಿಗೆ ಮೂರು ವಲಯ ಆಯುಕ್ತರನ್ನು ನೇಮಿಸಲಾಗಿದೆ. ಅದೇ ರೀತಿಯಲ್ಲಿ ಸಹಾಯಕ ನಗರ ಯೋಜನಾಧಿಕಾರಿ, ಕಂದಾಯ ಅಧಿಕಾರಿ, ಆರೋಗ್ಯ ಅಧೀಕ್ಷಕರನ್ನು ನೇಮಿಸಲಾಗಿದೆ. ಒಂದೊಂದು ವಲಯದ ಅಡಿಯಲ್ಲಿ ಇಪ್ಪತ್ತು ವಾರ್ಡ್ ಗಳನ್ನು ನಿಗದಿಗೊಳಿಸಲಾಗಿದೆ. ಉದಾಹರಣೆಗೆ ಕದ್ರಿ ವಲಯ ಕಚೇರಿಯ ಅಧೀನದಲ್ಲಿ ಆ ಭಾಗದ ಸುತ್ತಮುತ್ತಲಿನ ಇಪ್ಪತ್ತು ವಾರ್ಡ್ ಗಳು ಬರುತ್ತದೆ. ಹಾಗೆ ಸುರತ್ಕಲ್ ಉಪಕಚೇರಿಯ ಅಡಿಯಲ್ಲಿ ಆ ಭಾಗದ ಸುತ್ತಮುತ್ತಲಿನ ಇಪ್ಪತ್ತು ವಾರ್ಡುಗಳನ್ನು ಸೀಮಿತಗೊಳಿಸಲಾಗಿದೆ. ಇದರ ಉದ್ದೇಶ ಏನೆಂದರೆ ಜನರು ಪ್ರತಿಯೊಂದಕ್ಕೂ ಲಾಲ್ ಭಾಗಿಗೆ ಬರುವುದನ್ನು ತಪ್ಪಿಸಿ, ಅವರು ತಮ್ಮ ವಾರ್ಡಿನ ಸಮೀಪದಲ್ಲಿರುವ ವಲಯ ಕಚೇರಿಗಳಲ್ಲಿಯೇ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕು ಎನ್ನುವುದೇ ಆಗಿದೆ. ಇಲ್ಲದಿದ್ದರೆ ಮುಕ್ಕದ ಒಬ್ಬ ವ್ಯಕ್ತಿಗೆ ಲಾಲ್ ಭಾಗಿಗೆ ಬಂದು ಕೆಲಸ ಮಾಡಿಸಲು ಸಮಯ, ಶ್ರಮ ಮತ್ತು ಅನಗತ್ಯ ಖರ್ಚು ಕೂಡ ಆಗುತ್ತದೆ. ಆದರೆ ಈಗ ಸಮಸ್ಯೆ ಏನೆಂದರೆ ಯಾವ ವಲಯಗಳಿಗೆ ಯಾವ ಅಧಿಕಾರಿಗಳನ್ನು ನೇಮಿಸಲಾಗಿದೆಯೋ ಆ ಅಧಿಕಾರಿ ತಮ್ಮ ನಿಗದಿತ ಸಮಯದಲ್ಲಿ ನಿಗದಿಗೊಳಿಸಿದ ಕಚೇರಿಯಲ್ಲಿಯೇ ಉಪಸ್ಥಿತರಿರಬೇಕು. ಅವರಿಗೆ ಅಲ್ಲಿಯೇ ಬೇಕಾದಷ್ಟು ಕೆಲಸ ಇರುತ್ತದೆ. ಬೆಳಿಗ್ಗೆ ಫೀಲ್ಡ್ ಕೆಲಸ ಇದ್ದರೂ ಮೂರು ಗಂಟೆಯ ಬಳಿಕ ಅವರು ಕಚೇರಿಯಲ್ಲಿ ಕುಳಿತುಕೊಂಡಿರಬೇಕು. ಆದರೆ ಈಗ ಏನಾಗುತ್ತಿದೆ ಎಂದರೆ ಈಗ ವಲಯ ಕಚೇರಿಗಳಲ್ಲಿ ಪ್ರಥಮ ದರ್ಜೆ, ದ್ವೀತಿಯ ದರ್ಜೆ, ಅಧೀಕ್ಷಕರು, ಕಂದಾಯ ಅಧಿಕಾರಿ ಹಾಗೂ ಕಂದಾಯ ಉಪಅಧಿಕಾರಿ ಮಾತ್ರ ಹೋಗುತ್ತಾರೆ. ಉಳಿದ ಅಧಿಕಾರಿಗಳು ಕೇಂದ್ರ ಕಚೇರಿಯಲ್ಲಿಯೇ ಝಂಡಾ ಊರಿಬಿಟ್ಟಿರುತ್ತಾರೆ. ನಾವೇನಾದರೂ ಕದ್ರಿ ಭಾಗದವರಾದರೆ ಕದ್ರಿ ಉಪವಲಯದ ಕಚೇರಿಗೆ ಹೋದರೆ ಅಲ್ಲಿ ಬೇಕಾಗಿರುವ ಅಧಿಕಾರಿ ಸಿಗುವುದಿಲ್ಲ. ಕೇಳಿದರೆ ಅವರು ಲಾಲ್ ಭಾಗಿನಲ್ಲಿ ಇದ್ದಾರೆ ಎಂದು ಉಪವಲಯದ ಸಿಬ್ಬಂದಿಗಳು ಹೇಳುತ್ತಾರೆ. ಫೋನ್ ನಂಬರ್ ಕೇಳಿ ತೆಗೆದುಕೊಂಡು ಕರೆ ಮಾಡಿದರೆ ಬನ್ನಿ ಪಾಲಿಕೆಯಲ್ಲಿ ಇದ್ದೇನೆ, ಫೈಲ್ ಮತ್ತು ದಾಖಲೆ ತೆಗೆದುಕೊಂಡು ಬನ್ನಿ ಎಂದು ಉತ್ತರ ಬರುತ್ತದೆ. ಇದರಿಂದ ಏನು ಉದ್ದೇಶ ಸಾಧನೆ ಮಾಡಿದಂತೆ ಆಯಿತು ಎಂದು ಅವರೇ ಹೇಳಬೇಕು. ಪರಿಸ್ಥಿತಿ ಎಲ್ಲಿಯ ತನಕ ಎಂದರೆ ಒಂದು ತಿಂಗಳಿನಿಂದ ಎಟಿಪಿಒ ಕದ್ರಿ ವಲಯ ಕಚೇರಿಗೆ ಹೋಗಿಯೇ ಇಲ್ಲ. ಹಾಗಾದರೆ ಈ ವಲಯ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಿಸುವುದೇ ಒಳ್ಳೆಯದು. ಸುಮ್ಮನೆ ನಮ್ಮ ತೆರಿಗೆಯ ಹಣ ವೇಸ್ಟ್. ಜನರಿಗೆ ಉಪಯೋಗವಾಗಲಿ ಎಂದು ಜನರ ಹಣದಿಂದಲೇ ಸಂಬಳ ಪಡೆದುಕೊಳ್ಳುವ ಅಧಿಕಾರಿಗಳು ಜನರಿಗೆ ಅನುಕೂಲವಾಗಲಿ ಎನ್ನುವುದರ ವಿರುದ್ಧವಾಗಿ ವರ್ತಿಸಿದರೆ ಅದಕ್ಕೆ ಯಾರನ್ನು ಜವಾಬ್ದಾರಿ ಮಾಡುವುದು. ಸಂಶಯವೇ ಇಲ್ಲ, ಮೇಯರ್ ಪ್ರೇಮಾನಂದ ಶೆಟ್ಟಿಯವರು ಹಾಗೂ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಅವರು ಇದರ ಜವಾಬ್ದಾರಿ ತೆಗೆದುಕೊಳ್ಳಲೇಬೇಕು. ಅವರು ಕಟ್ಟುನಿಟ್ಟಾಗಿ ಇಂತಹ ಅಧಿಕಾರಿ ಇಂತಹ ಸಮಯದಲ್ಲಿ ಇಂತಹ ವಲಯ ಕಚೇರಿಯಲ್ಲಿ ಜನರ ಸೇವೆಯಲ್ಲಿ ಇದ್ದಾರಾ ಎಂದು ಖಚಿತಪಡಿಸಿಕೊಳ್ಳಬೇಕು. ಅವರು ಹೇಳಿದಂತೆ ನಡೆದುಕೊಳ್ಳದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
Leave A Reply