• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡಿಸಿಗೆ ಬೈಯುವ ಮೊದಲು ನೀವೆಷ್ಟು ನಿಯಮ ಪಾಲಿಸಿದ್ದೀರಿ ಸಿಎಂ!!

Hanumantha Kamath Posted On August 17, 2021


  • Share On Facebook
  • Tweet It

ಯಡ್ಡಿಜಿ ಹೀಗೆ ಅಧಿಕಾರಿಗಳನ್ನು ನಿಲ್ಲಿಸಿ ಜೋರು ಮಾಡಿದ್ದನ್ನು ತಮ್ಮ ಜೀವಮಾನದ ಮೊದಲ ಮತದಾನ ಮಾಡಿದ ಹೊಸ ಪೀಳಿಗೆ ನೋಡಿರಲಿಲ್ಲ. ಯಾಕೆಂದರೆ ತಮ್ಮ ಜೀವಮಾನದಲ್ಲಿ ಕೊನೆಯ ಬಾರಿ ಮುಖ್ಯಮಂತ್ರಿಯಾಗುವಾಗ ಯಡ್ಡಿಜಿ ಗುರಿ ಇದ್ದದ್ದು ಒಂದು ಸಲ ಸಿಎಂ ಆಗಬೇಕು ಎನ್ನುವುದು ಮಾತ್ರ. ಆದ್ದರಿಂದ ಈ ಪ್ರಗತಿ ಪರಿಶೀಲನೆ, ಸಭೆಗಳಲ್ಲಿ ಅವರದ್ದು ಘನ ಉಪಸ್ಥಿತಿ ಮಾತ್ರವೇ ವಿನ: ಅದರಲ್ಲಿ ಸೂಚನೆ, ಆದೇಶ ಅಂತದ್ದು ಏನು ಇತ್ತೀಚೆಗೆ ಇರುತ್ತಿರಲಿಲ್ಲ. ಆದರೆ ಜೀವಮಾನದಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿಯವರಿಗೆ ತಮ್ಮ ಪವರ್ ತೋರಿಸಬೇಕೆಂಬ ಹುಮ್ಮಸ್ಸು ಇತ್ತು. ತಮ್ಮ ಸರಕಾರದ ವೇಗ ಮತ್ತು ಸ್ಪಿರಿಟ್ ವೇದಿಕೆಯಲ್ಲಿ ಇದ್ದವರಿಗೂ, ಎದುರಿಗೆ ಕುಳಿತ ಮೊದಲ ಅವಧಿಯ ಶಾಸಕರಿಗೂ, ವಿಪಕ್ಷಗಳ ಶಾಸಕರಿಗೂ, ಅಧಿಕಾರಿಗಳಿಗೂ ತೋರಿಸಬೇಕೆಂಬ ಛಲ ಇತ್ತು. ಅದನ್ನು ಬಸು ತೋರಿಸಿಬಿಟ್ಟರು.

ಒಬ್ಬ ಮಂತ್ರಿ ಅಥವಾ ಸಿಎಂ ಅಧಿಕಾರಿಗಳನ್ನು ಲೆಫ್ಟ್, ರೈಟ್ ಮಾಡಿರುವುದು ಇದು ಪ್ರಥಮವೇನಲ್ಲ. ಕೊನೆಯದ್ದು ಅಲ್ಲ. ಬಿಸಿ ಮುಟ್ಟಿಸದಿದ್ದರೆ ಅಧಿಕಾರಿಗಳೂ ಕೆಲಸ ಮಾಡುವುದು ಕಡಿಮೆ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿಎಂ ಸಭೆಯಲ್ಲಿ ಅವರು ಮೊದಲು ಡಿಸಿಯವರನ್ನು ಝಾಡಿಸಿದರು. ಅದನ್ನು ಕೆಲವು ಕಾರಣಗಳಿಗೆ ತಪ್ಪು ಎಂದೇ ಹೇಳುತ್ತೇನೆ. ಮೊದಲನೇಯದಾಗಿ ಇತ್ತೀಚಿನ ವರ್ಷಗಳಲ್ಲಿ ದಕ ಜಿಲ್ಲೆಗೆ ಯಾರಾದರೂ ಕ್ರಿಯಾಶೀಲ ಡಿಸಿ ಬಂದಿದ್ದಾರೆ ಎಂದರೆ ಅದು ಡಾ.ರಾಜೇಂದ್ರ ಕೆವಿ. ಇಡೀ ರಾಜ್ಯದಲ್ಲಿ ದಿನಕ್ಕೆ ಸರಾಸರಿ 8000 ಕೋವಿಡ್ ಟೆಸ್ಟ್ ಎಲ್ಲಿಯಾದರೂ ಮಾಡುತ್ತಾರೆ ಎಂದರೆ ಅದು ಈ ಜಿಲ್ಲೆಯಲ್ಲಿ ಮಾತ್ರ. ನಿಮಗೆ ಅನಿಸಬಹುದು. ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆ ಇದೆ. ಇಲ್ಲಿ ಮಾತ್ರ ಜಾಸ್ತಿ ಯಾಕಿದೆ? ಯಾಕೆ ಎಂದರೆ ಇಲ್ಲಿ ಮಾತ್ರ ಈ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಯುತ್ತಿರುವುದು. ಗ್ರಾಮ ಗ್ರಾಮಗಳಲ್ಲಿ ಕೂಡ ಟಾರ್ಗೆಟ್ ನೀಡಿ ಟೆಸ್ಟಿಂಗ್ ಮಾಡಿಸಲಾಗುತ್ತಿದೆ. ಇನ್ನು ಇದು ಕೇರಳದ ಹೆಗಲಿಗೆ ತಾಗಿಯೇ ಇರುವ ಜಿಲ್ಲೆ. ಅಲ್ಲಿಂದ ನೇರವಾಗಿ ಬರುವ ರೋಗಿಗಳು ಇಲ್ಲಿ ಬಂದು ಮಲಗಿದರೆ ಅವರಿಗೆ ಕೊರೊನಾ ಪಾಸಿಟಿವ್ ಆದರೆ ಅದರ ಲೆಕ್ಕ ಕೂಡ ಸಿಗುವುದು ನಮಗೆ. ಆದ್ದರಿಂದ ಡಿಸಿ ನಿತ್ಯ ಹಲವಾರು ಸಭೆಗಳನ್ನು ಮಾಡುತ್ತಾ ಈ ಸಾಂಕ್ರಾಮಿಕ ರೋಗದ ನಿಯಂತ್ರಣದಲ್ಲಿ ಯೋಗ್ಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಎರಡನೇಯದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಅವರನ್ನು ಸಿಎಂ ಜೋರು ಮಾಡಿದ ರೀತಿ. ಅವರು ಹೇಳಿದ ವಿಷಯಕ್ಕಿಂತ ಹೇಳಿದ ರೀತಿಯ ಬಗ್ಗೆ ನನ್ನ ಆಕ್ಷೇಪ ಇದೆ. ಉತ್ತರ ಕರ್ನಾಟಕಕ್ಕೆ ಹೋದ ಹಾಗೆ ಅಲ್ಲಿ ಯಾರನ್ನು ಬೇಕಾದರೂ ಏಕ ವಚನದಲ್ಲಿ ಮಾತನಾಡಿಸುವ ಪರಿಪಾಠ ಇರಬಹುದು. ಆದರೆ ಇಲ್ಲಿ ಹಾಗೆ ಇಲ್ಲ. ಇಲ್ಲಿ ನಾವು ಎಷ್ಟೋ ಸಂದರ್ಭದಲ್ಲಿ ಚಿಕ್ಕ ಮಕ್ಕಳನ್ನು ಕೂಡ ಬಹುವಚನ ಕೊಟ್ಟು ಮಾತನಾಡಿಸುತ್ತೇವೆ. ಹೇಳುವ ವಿಷಯವನ್ನು ಜಂಟಲ್ ಮೆನ್ ಶೈಲಿಯಲ್ಲಿ ಹೇಳಿದರೆ ಸಿಎಂ ಬಗ್ಗೆನೂ ಗೌರವ ಹೆಚ್ಚಾಗುತ್ತಿತ್ತು. ಆದರೆ ಇದು ಅನಾಗರಿಕ ಸಂಸ್ಕೃತಿಯಂತೆ ಬೈದು ಅದು ವೈರಲ್ ಆಗಿ ಏನಾಯಿತು? ಕಾಂಗ್ರೆಸ್ ಅಧಿಕಾರದಲ್ಲಿದ್ದು ಸಿದ್ದು ಹೀಗೆ ಬೈದಿದ್ದರೆ ಇದೇ ಭಾರತೀಯ ಜನತಾ ಪಾರ್ಟಿಯ ಸೋಶಿಯಲ್ ಮೀಡಿಯಾ ಸೆಲ್ ಸಿದ್ಧುವನ್ನು ಅನಾಗರಿಕ ಎಂದು ಟೀಕಿಸುತ್ತಿರಲಿಲ್ಲವೇ?

ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಜಿಲ್ಲಾ ವೈದ್ಯಾಧಿಕಾರಿಗಳು, ಡಿಸಿ ಕಡೆಯಿಂದ ಲೋಪವಾಗಿರಬಹುದು. ಆದರೆ ಹೇಳುವ ಶೈಲಿ. ಅದೇ ಡಿಸಿಯವರು ” ನೀವು ಕೊರೊನಾ ಮುನ್ನೆಚ್ಚರಿಕೆಯ ಬಗ್ಗೆ ಇಷ್ಟು ಮಾತನಾಡುತ್ತಿರಲಿಲ್ಲ. ನೀವು ವಿಮಾನ ನಿಲ್ದಾಣದಿಂದ ಈ ಸಭೆಗೆ ಬರುವ ತನಕ ಎಲ್ಲಿ ಸಾಮಾಜಿಕ ಅಂತರ ಇತ್ತು. ಎಷ್ಟು ಜನ ಮಾಸ್ಕ್ ಧರಿಸಿದ್ದರು. ನೀವು ನಿಯಮ ಉಲ್ಲಂಘಿಸಿದ್ದಿರಿ. ದಂಡ ಕಟ್ಟಲು ಸಿದ್ಧರಾಗಿರಿ” ಎಂದು ತಿರುಗಿ ಹೇಳಿದ್ದರೆ ಸಿಎಂಗೆ ತೋರಿಸಲು ಮುಖ ಇತ್ತಾ? ಐಎಎಸ್ ಗಳು ರಾಜ್ಯದಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ ಅವರು ಕೇಂದ್ರದ ಅಡಿಯಲ್ಲಿ ಬರುತ್ತಾರೆ. ಅವರಿಗೆ ಸಚಿವರು, ಸಿಎಂ ಪ್ರಶ್ನಿಸಲೇಬಾರದು ಎಂದೆನಿಲ್ಲ. ಆದರೆ ಚಾಟಿ ಹಿಡಿಯುವವ ಮೊದಲು ತಾವು ಎಷ್ಟು ನಿಯಮ ಪಾಲಿಸಿದ್ದೇವೆ ಎಂದು ಕೂಡ ನೋಡಬೇಕಲ್ಲ.
ಬಸು ಅವರಿಗೆ ಇದೇ ಧಮ್ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ಆದಾಗ ಎಲ್ಲಿ ಹೋಗಿತ್ತು? ಇನ್ನು ಡಿಸಿ ವಿರುದ್ಧ ಪಿಟ್ಟಿಂಗ್ ಇಟ್ಟ ಖಾದರ್ ಹೇಳಿದ್ದು ಎಷ್ಟು ಸರಿ ಇದೆ ಎಂದು ತಾವು ನೋಡಿದ್ದೀರಾ ಸಿಎಂ. ಏನೋ ನೀವು ಬರುತ್ತಿರಿ ಎಂದು ಅರ್ಧ ಗಂಟೆ ರೋಡ್ ಬ್ಲಾಕ್ ಮಾಡಿ ಜನ ಕಾದರಲ್ಲ, ಅದು ಇದೇ ಮಂಗಳೂರಿನ ಜನ. ಆಗಲೇ ನನಗೆ ಝೀರೋ ಟ್ರಾಫಿಕ್ ಬೇಡಾ ಎನ್ನಬಹುದಿತ್ತಲ್ಲ. ಸಾಮಾನ್ಯವಾಗಿ ಪ್ರಗತಿ ಪರಿಶೀಲನೆ ಎಂದರೆ ನಾಟಕವೇ ಆಗಿರುತ್ತದೆ. ಅಧಿಕಾರಿಗಳು ಹೇಳಿದ್ದನ್ನು ಕೇಳಿ ನಂತರ ಮಾಧ್ಯಮದೆದುರು ಓದುವುದೇ ಸಂಪ್ರದಾಯವಾಗುತ್ತಿತ್ತು. ಆ ನಿಟ್ಟಿನಲ್ಲಿ ಬಸು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇರಲಿ, ಇದು ಉಳಿದ ಅಧಿಕಾರಿಗಳಿಗೂ ಪಾಠವಾಗಲಿ. ಇನ್ನು ಅಧಿಕಾರಿಗಳು ಹೇಳಿದ್ದನ್ನೇ ನಂಬುವ ಕೆಲವು ಅತೀ ಬುದ್ಧಿವಂತ ಜನಪ್ರತಿನಿಧಿಗಳಿಗೂ ಮನಸ್ಸಿಗೆ ಇದು ಹೋಗಲಿ!

  • Share On Facebook
  • Tweet It


- Advertisement -


Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
Hanumantha Kamath February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
Leave A Reply

  • Recent Posts

    • ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
  • Popular Posts

    • 1
      ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • 2
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 3
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search