• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವಾರ್ಡ್ ಕಮಿಟಿಯ ಸದಸ್ಯರು ಪಕ್ಕದ ಮನೆಯವರಿಂದ ಯಾಕೆ ಸಹಿ ಹಾಕಿಸಬೇಕು!!

Hanumantha Kamath Posted On November 8, 2021
0


0
Shares
  • Share On Facebook
  • Tweet It

ಕೊನೆಗೂ ಅತ್ತು ಕರೆದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಯಾಗಿದೆ. ಪ್ರತಿ ವಾರ್ಡಿನ ವಾರ್ಡ್ ಕಮಿಟಿ ಸದಸ್ಯರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಯಾರ ಹೆಸರಿಗೆಲ್ಲಾ ಆಕ್ಷೇಪಣೆ ಬಂದಿತ್ತೋ ಅಂತಹ ಹೆಸರುಗಳನ್ನು ಕೈಬಿಡಲಾಗಿದೆ. ಆಕ್ಷೇಪಣೆ ಯಾಕೆ ಬರುತ್ತೆ ಎಂದರೆ ಕೆಲವರು ಪಕ್ಷದ ಕಾರ್ಯಕರ್ತರಾಗಿರುತ್ತಾರೆ. ಪಟ್ಟಿಯಲ್ಲಿ ಶಿಫಾರಸ್ಸು ಬಳಸಿ ನುಗ್ಗಿರುತ್ತಾರೆ ಅಥವಾ ನುಗ್ಗಿಸಲಾಗಿರುತ್ತದೆ. ಯಾವುದೇ ಪಕ್ಷದ ಕಾರ್ಯಕರ್ತನಾದವರು ಈ ಕಮಿಟಿಯಲ್ಲಿ ಇರಬಾರದಾಗಿರುವುದರಿಂದ ಅಂತವರ ವಿರುದ್ಧ ಬಂದ ಆಕ್ಷೇಪಗಳನ್ನು ಪರಿಗಣಿಸಿ ಆತ ಅಥವಾ ಆಕೆ ಇಂತಿಂತಹ ಪಕ್ಷದ ಕಾರ್ಯಕರ್ತರು ಹೌದು ಎಂದು ಸಾಬೀತಾದ ನಂತರ ಅಂತವರನ್ನು ಡ್ರಾಪ್ ಮಾಡಲಾಗಿದೆ. ಆದರೆ ಈಗ ಆಗಿರುವ ಹೊಸ ಡೆವಲಪಮೆಂಟ್ ಎಂದರೆ ವಾರ್ಡ್ ಕಮಿಟಿಯ ಸದಸ್ಯರ ಪಟ್ಟಿಯನ್ನು ಆಯಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಇವರ ಮೇಲೆ ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯಾ ಎಂದು ನೋಡಿ ನಮಗೆ ವರದಿ ಕಳುಹಿಸಿ ಎಂದು ಮಹಾನಗರ ಪಾಲಿಕೆ ಕಡೆಯಿಂದ ಪೊಲೀಸ್ ಠಾಣೆಗೆ ಕೆಲಸವೊಂದು ಹೋಗಿದೆ. ಈ ಪೊಲೀಸರೋ ಪಾಲಿಕೆಯವರಿಗಿಂತ ಅತೀ ಬುದ್ಧಿವಂತರು. ಅವರು ಒಂದು ಫಾರಂ ಸಿದ್ಧಪಡಿಸಿ, ವಾರ್ಡ್ ಕಮಿಟಿ ಸದಸ್ಯರನ್ನು ಠಾಣೆಗೆ ಕರೆಯಿಸಿ ಆ ಫಾರಂ ಅನ್ನು ಅವರ ಕೈಯಲ್ಲಿ ಕೊಟ್ಟು ನಿಮ್ಮ ನೆರೆಹೊರೆಯವರಿಂದ ಈ ವ್ಯಕ್ತಿ ಯಾವುದೇ ಕ್ರಿಮಿನಲ್ ಕೇಸ್ ಎದುರಿಸುತ್ತಿಲ್ಲ ಎಂದು ಸಾಕ್ಷಿ ರೀತಿಯಲ್ಲಿ ರುಜುವಾತು ಹಾಕಿಸಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ.

ಈಗ ಆ ಸದಸ್ಯರು ಆ ಫಾರಂ ಹಿಡಿದು ನೆರೆಹೊರೆಯವರ ಬಳಿ ಸಹಿ ಹಾಕಿಸಲು ಅಲೆದಾಡಬೇಕು. ಈ ನಗರ ಪ್ರದೇಶಗಳೇ ಒಂದು ತರಹ ವಿಚಿತ್ರ. ಹತ್ತತ್ತಿರ ಮನೆಗಳು ಇದ್ದರೂ ಒಬ್ಬರ ಪರಿಚಯ ಇನ್ನೊಬ್ಬರಿಗೆ ಇರಲ್ಲ. ಪಕ್ಕದ ಮನೆಯಲ್ಲಿ ಯಾರು ಇದ್ದಾರೆ, ಅವರು ಏನು ಕೆಲಸ ಮಾಡುತ್ತಾರೆ, ಅವರಿಗೆ ಎಷ್ಟು ಮಕ್ಕಳು ಎಂದು ಗೊತ್ತಿಲ್ಲದೇ ಇರುವಾಗ ಪಕ್ಕದ ಮನೆಯವನ ಮೇಲೆ ಕ್ರಿಮಿನಲ್ ಕೇಸು ಇದೆಯಾ ಇಲ್ವಾ ಎಂದು ಯಾರಿಗೆ ಗೊತ್ತಿರುತ್ತದೆ. ಈ ಹೊಸ ನಿಯಮ ಜಾರಿಗೆ ತರುವ ಮೂಲಕ ಪಾಲಿಕೆ ಅಥವಾ ಪೊಲೀಸರು ಸುಮ್ಮನೆ ಯಾರ್ಯಾರಿಗೆ ಯಾಕೆ ಬಿಸಿತುಪ್ಪ ಮಾಡುತ್ತೀರಿ. ಒಂದು ವೇಳೆ ಪಕ್ಕದ ಮನೆಯವನು ಸಹಿ ಹಾಕಲು ಕೇಳಿದಾಗ ನಿಮ್ಮ ಮೇಲೆ ಕ್ರಿಮಿನಲ್ ಕೇಸು ಇದೆಯಾ ಇಲ್ವಾ ಎಂದು ನನಗೆ ಗೊತ್ತಿಲ್ಲವಲ್ಲ, ನಾನ್ಯಾಕೆ ಸಹಿ ಹಾಕಲಿ ಎಂದು ಯಾರಾದರೂ ವ್ಯಕ್ತಿ ಹೇಳುತ್ತಾರಾ? ಒಂದು ವೇಳೆ ದಾಕ್ಷಿಣ್ಯಕ್ಕೆ ಸಹಿ ಹಾಕಿ ನಂತರ ಯಾಕೆ ಪರಿತಪಿಸುವುದು. ಅದರ ಬದಲು ಪೊಲೀಸರೇ ಯಾವ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಇದೆಯೆಂದು ಪತ್ತೆ ಹಚ್ಚಬಲ್ಲ ಎಲ್ಲಾ ವ್ಯವಸ್ಥೆ ಇರುವಾಗ ಅಕ್ಕಪಕ್ಕದ ಮನೆಯವರಿಗೆ ಯಾಕೆ ಉಪಟಳ ಕೊಡುವುದು. ಈಗ ನೀವು ಪಾಸ್ ಪೋರ್ಟ್ ಮಾಡಿಸಲು ಮುಂದಾಗುವಾಗ ಪೊಲೀಸ್ ವೆರಿಫಿಕೇಶನ್ ಎಂದು ಇರುತ್ತದೆ. ಆ ವ್ಯಕ್ತಿಯ ಹೆಸರು, ದಾಖಲೆಯನ್ನು ಪೊಲೀಸರು ತಮ್ಮ ಸಾಫ್ಟವೇರ್ ನಲ್ಲಿ ಹಾಕಿದರೆ ಎಲ್ಲ ವಿವರ ಅಲ್ಲಿಯೇ ಲಭ್ಯವಾಗುತ್ತದೆ. ಅದರ ಆಧಾರದ ಮೇಲೆ ಪಾಸ್ ಪೋರ್ಟ್ ಆ ಅರ್ಜಿದಾರನಿಗೆ ಸಿಗದೇ ಇರುವ ಹಾಗೆ ಕೂಡ ಮಾಡಬಹುದು. ಹೀಗಿರುವಾಗ ಇದೆಲ್ಲ ರಗಳೆ ಯಾಕೆ?

ಅಷ್ಟಕ್ಕೆ ವಾರ್ಡ್ ಕಮಿಟಿ ಎಂದರೆ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ವ್ಯವಹಾರಗಳ ಬಗ್ಗೆ ನೋಡಿಕೊಳ್ಳುವಷ್ಟು ದೊಡ್ಡ ಹುದ್ದೆ ಅಲ್ಲ. ಒಬ್ಬ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿದ್ದಾನೆ ಎಂದರೆ ಆತ ನಾಮಿನೇಶನ್ ಸಲ್ಲಿಸುವ ಫಾರಂನಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಪಡೆಯುವಂತಹ ಅಪರಾಧವನ್ನು ಮಾಡಿದ್ದಾನೆ ಎಂದರೆ ಚುನಾವಣಾ ಆಯೋಗ ಅವನ ಅಭ್ಯರ್ಥಿತನವನ್ನು ರಿಜೆಕ್ಟ್ ಮಾಡುತ್ತದೆ. ಒಂದು ವೇಳೆ ಆತನಿಗೆ ಕೆಳಗಿನ ನ್ಯಾಯಾಲಯ ಶಿಕ್ಷೆ ಘೋಷಿಸಿ ಆತ ಮೇಲ್ಮನವಿ ಸಲ್ಲಿಸಿದ್ದರೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅದು ಬಿಟ್ಟು ಬೇರೆ ಯಾವ ಸಣ್ಣಪುಟ್ಟ ಕೇಸು ಇದ್ದರೂ ಎಲ್ಲಾ ಸಂದರ್ಭದಲ್ಲಿ ಆತನಿಗೆ ಸ್ಪರ್ಧಿಸಲು ಅವಕಾಶ ಇದೆ. ಚುನಾವಣೆಯ ವಿಷಯದಲ್ಲಿಯೇ ಹೀಗಿರುವಾಗ ಯಕಶ್ಚಿತ ವಾರ್ಡ್ ಕಮಿಟಿಯ ಸದಸ್ಯರು ಯಾಕೆ ಬೇರೆಯವರಿಂದ ಸಹಿ ಪಡೆದುಕೊಂಡು ಬರಬೇಕು. ಯಾಕೋ ಒಂದು ಜವಾಬ್ದಾರಿ ತೆಗೆದುಕೊಳ್ಳಲು ಒಬ್ಬ ಸಭ್ಯ ನಾಗರಿಕ ಸ್ವ ಇಚ್ಚೆಯಿಂದ ಮುಂದೆ ಬರುವಾಗ ಅವನಿಗೆ ಏನೇನೋ ಹೇಳಿ ಈಗಲೇ ಭಯ ಉಂಟು ಮಾಡಿದರೆ ಆತ ಮುಂದೆ ನಿರ್ಭಿತಿಯಿಂದ ವಾರ್ಡ್ ಸಮಿತಿಯಲ್ಲಿ ಕೆಲಸ ಮಾಡಲು ಇದೆಯಾ? ಈ ನಿಯಮವನ್ನು ತೆಗೆದು ಹಾಕಿದರೆ ತುಂಬಾ ಒಳ್ಳೆಯದು. ಒಟ್ಟಿನಲ್ಲಿ ವಾರ್ಡ್ ಕಮಿಟಿ ಎನ್ನುವುದು ಯಾವಾಗಲೋ ಆಗಬೇಕಿತ್ತು. ಈಗಲಾದರೂ ಆಯಿತಲ್ಲ ಎನ್ನುವುದೇ ಸಮಾಧಾನಕರ ವಿಷಯ. ಕಮಿಟಿಯಲ್ಲಿ ಇರುವವರು ತಮಗೆ ಸಿಕ್ಕಿದ ಈ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿ ಎನ್ನುವುದು ನನ್ನ ಆಶಯವೂ ಆಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೆಚ್ಚೆಚ್ಚು ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಅವೆಲ್ಲಾ ಭ್ರಷ್ಟಾಚಾರದ ಯಾವುದೇ ಲವಶೇಷವೂ ಇಲ್ಲದೆ ನಡೆದು ನಗರದ ಸರ್ವತೋಮುಖ ಬೆಳವಣಿಗೆ ಸಹಾಯ ಆಗಲಿ ಎನ್ನುವುದು ನಮ್ಮೆಲ್ಲರ ಆಶಯ. ಇನ್ನು ಯಾರು ವಾರ್ಡ್ ಕಮಿಟಿಯಲ್ಲಿ ಇಲ್ಲವೋ ಅವರು ಹೊರಗೆ ನಿಂತು ಕೂಡ ವಾರ್ಡ್ ಕಮಿಟಿಯನ್ನು ಬೆಂಬಲಿಸಬಹುದು. ತಮ್ಮ ವಾರ್ಡಿನ ಯಾವುದಾದರೂ ಭಾಗದಲ್ಲಿ ಏನಾದರೂ ಲೋಪದೋಷ ಇದ್ದರೆ ಸಮಿತಿಯಲ್ಲಿ ಇಟ್ಟು ಆ ಮೂಲಕ ಕಾರ್ಪೋರೇಟರ್ ಗಮನಕ್ಕೆ ತಂದು ಕೆಲಸ ಮಾಡಿಸಬಹುದು. ಎಲ್ಲರೂ ಸೇರಿ ಮಂಗಳೂರು ಕಟ್ಟೋಣ!!

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search