ಮೀಸಲಾತಿ ಉದ್ಯೋಗ, ಶಿಕ್ಷಣ ಜೊತೆ ರಾಜಕೀಯದಲ್ಲಿ ಕೂಡ ಜಾರಿಗೆ ಬರಲಿ!!
Posted On December 7, 2021
ಗುಜರಾತ್ ಉಚ್ಚ ನ್ಯಾಯಾಲಯ ಮೀಸಲಾತಿ ವಿಷಯದಲ್ಲಿ ಬಹಳ ಪ್ರಮುಖವಾದ ತೀರ್ಪೊಂದನ್ನು ನೀಡಿದೆ. ಅದನ್ನು ಈಗ ಈಡೇರಿಸಲು ಹೋದರೆ ಅಲ್ಲಿನ ರಾಜ್ಯ ಸರಕಾರ ಸಾಕಷ್ಟು ವಿರೋಧವನ್ನು ಎದುರಿಸಬೇಕಾಗುತ್ತದೆ. ಅದೇ ಹೈಕೋರ್ಟ್ ಆದೇಶ ಅನುಷ್ಟಾನ ಮಾಡಲು ಹೋಗದಿದ್ದರೆ ಯಾರಾದರೂ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ದಾವೆ ಹೂಡಬಹುದು. ಆಗ ಮತ್ತೊಮ್ಮೆ ಸರಕಾರ ಇಕ್ಕಟ್ಟಿಗೆ ಸಿಲುಕುತ್ತದೆ. ಹಾಗಂತ ಇದು ನ್ಯಾಯಾಲಯದ ಆದೇಶ ಎಂದು ಹಾಗೆ ಜನರನ್ನು ಸಮಾಧಾನ ಮಾಡಲು ಆಗುವುದಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಮೀಸಲಾತಿ ಎನ್ನುವುದು ಬಹಳ ನಿರ್ಣಾಯಕ ಪದ. ಅದು ಜಾರಿಗೆ ಯಾಕೆ ಬಂತು ಮತ್ತು ಅದನ್ನು ಕಾಲಾಂತರದಲ್ಲಿ ರಾಜಕೀಯ ಕಾರಣಗಳಿಗಾಗಿ ಹೇಗೆ ಬಳಸಲಾಯಿತು ಮತ್ತು ಮುಂದುವರೆಸಲಾಯಿತು ಎನ್ನುವುದು ಕೂಡ ಎಲ್ಲಾ ರಾಜಕೀಯ ಪಕ್ಷಗಳು ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇವಲ ಒಂದು ಜಾತಿಯ ವೋಟ್ ಬ್ಯಾಂಕ್ ಗಾಗಿ ಆ ಜಾತಿಯಲ್ಲಿರುವ ಎಲ್ಲಾ ಜನರಿಗೂ ಏಕಪ್ರಕಾರವಾಗಿ ಸಮಾನವಾಗಿ ಮೀಸಲಾತಿ ಕೊಟ್ಟರೆ ಅದರಿಂದ ಬೇರೆ ಜಾತಿಯ ಅರ್ಹರಿಗೆ ಹೇಗೆ ತೊಂದರೆಯಾಗುತ್ತದೆ ಎನ್ನುವುದನ್ನು ಕೂಡ ನೋಡಬೇಕು. ಮೀಸಲಾತಿ ಎನ್ನುವುದು ಶಾಶ್ವತವಾಗಿ ಇರಬೇಕಾಗಿಲ್ಲ ಎಂದು ಸ್ವತ: ಅದನ್ನು ರಚಿಸಿದ ಸಂವಿಧಾನ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೆಚ್ಚೆಂದರೆ 20 ವರ್ಷ ಸಾಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇಪ್ಪತ್ತು ವರ್ಷ ಅವರ ಪ್ರಕಾರ ಸಾಕಾಗುವಷ್ಟು ಸಮಯ ಆಗಿದ್ದರೂ, 20 ಬೇಡಾ, ಐವತ್ತು ವರ್ಷವಾದರೂ ಇದ್ದರೆ ತೊಂದರೆ ಇರಲಿಲ್ಲ.
ಆದರೆ ಸ್ವಾತಂತ್ರ್ಯ ಬಂದು ಈಗ 75 ವರ್ಷ ಆಗುತ್ತಿರುವ ಈ ಹಂತದಲ್ಲಿ ಮೀಸಲಾತಿ ಅಗತ್ಯ ಇದೆಯಾ ಎನ್ನುವುದನ್ನು ನಾವು ನೋಡಬೇಕು. ಹಾಗಂತ ಮೀಸಲಾತಿಯನ್ನು ಸಾರಾಸಗಟಾಗಿ ತೆಗೆದುಬಿಡಬಾರದು. ಏಕೆಂದರೆ ಸಂವಿಧಾನ ರಚನೆ ಆದ ದಿನದಿಂದ ಯಾರಿಗೆ ಮೀಸಲಾತಿ ಕೊಡಲಾಗಿದೆಯೋ ಆ ಸಮುದಾಯದಲ್ಲಿ ಈಗಲೂ ಕಡುಬಡವರು ಇದ್ದಾರೆ. ಅರ್ಹತೆ ಇದ್ದರೂ ಸರಕಾರಿ ಉದ್ಯೋಗ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಸೀಟ್ ಅದು ಇದು ಸಿಗದೇ ತೊಂದರೆ ಅನುಭವಿಸುವವರು ಇರಬಹುದು ಮತ್ತು ಇರುತ್ತಾರೆ. ಅಂತವರಿಗೆ ಮೀಸಲಾತಿಯಿಂದ ವಂಚಿಸಬಾರದು. ಹಾಗಂತ ಚೆನ್ನಾಗಿ ಅನುಕೂಲಸ್ಥರಾಗಿ, ಮೀಸಲಾತಿಯ ಅಗತ್ಯ ಇಲ್ಲದವರು ಅದನ್ನು ಈಗಲೂ ಅನುಭವಿಸುತ್ತಿದ್ದಾರೆ. ಅಂತವರು ಅದನ್ನು ಬಿಟ್ಟುಕೊಡಬೇಕು. ಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಬಾರಿ ಅಡುಗೆ ಅನಿಲದ ಸಬ್ಸಿಡಿ ಬಿಟ್ಟುಕೊಡುವಂತೆ ಕರೆ ನೀಡಿದಾಗ ಅಸಂಖ್ಯಾತ ಜನ ಬಿಟ್ಟುಕೊಟ್ಟಿದ್ದರು. ಇಲ್ಲಿ ಕೂಡ ಹಾಗೆ ಆಗಲಿ. ಎಲ್ಲ ಸಮಾಜದಲ್ಲಿಯೂ ಬಡವರು ಇದ್ದಾರೆ, ಎಲ್ಲಾ ಸಮಾಜದಲ್ಲಿಯೂ ಮೀಸಲಾತಿ ಅನುಭವಿಸಿ ಉನ್ನತ ಸಾಧನೆ ಮಾಡಿ ಈಗ ತಕ್ಕಮಟ್ಟಿಗೆ ಶ್ರೀಮಂತರಾದವರು ಇದ್ದಾರೆ. ಈಗ ಅಂತವರು ಬೇರೆಯವರಿಗೆ ದಾರಿ ಮಾಡಿಕೊಡಬೇಕು. ಒಂದು ಅನುಕೂಲಸ್ಥ ಕುಟುಂಬದಲ್ಲಿ ಐದು ಜನ ಇದ್ದು, ಅವರೆಲ್ಲರೂ ಮೀಸಲಾತಿಗಾಗಿ ಹಾತೊರೆದರೆ ಆಗ ಅಲ್ಲಿ ಸಾಮಾಜಿಕ ಸಮತೋಲನವೂ ಮೇಲೆ ಕೆಳಗೆ ಆಗುತ್ತದೆ. ಒಂದು ವೇಳೆ ಯಾವುದೇ ಸರಕಾರ ಮೀಸಲಾತಿಯನ್ನು ಸ್ವಾತಂತ್ರ್ಯ ಸಮಯದಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಈಗಲೂ ಮುಂದುವರೆಸಲು ಬಯಸಿದರೆ ಆ ಪಕ್ಷ ಅಧಿಕಾರದಲ್ಲಿ ಇದ್ದಾಗ ಆ ಸಮುದಾಯಕ್ಕೆ ಏನೂ ಮಾಡಲಿಲ್ಲ ಎಂದು ಅರ್ಥವೇ? ಇನ್ನು ಒಂದು ಸಮುದಾಯ ತನ್ನ ಇಡೀ ತಲೆಮಾರಿಗೆ ಮೀಸಲಾತಿ ಸಿಕ್ಕಿದ ಬಳಿಕವೂ ಒಂದಿಷ್ಟು ಅಭಿವೃದ್ಧಿ ಸಾಧಿಸಲಿಲ್ಲ ಎಂದಾದರೆ ಅವರಿಗೆ ಬರಬೇಕಿದ್ದ ಸೌಲಭ್ಯವನ್ನು ಅವರಿಗೆ ಅವರ ಜನನಾಯಕರು ತಲುಪಿಸದೇ ತಾವೇ ತಿಂದು ತೇಗಿದ್ದಾರೆ ಎಂದು ನಾವು ಅಂದುಕೊಳ್ಳಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಸರಕಾರಗಳ ಸೌಲಭ್ಯಗಳು ಯಾಕೆ ಜನಸಾಮಾನ್ಯರಿಗೆ ತಲುಪುವುದಿಲ್ಲ ಎಂದರೆ ಅದು ಅರ್ಧ ದಾರಿಯಲ್ಲಿ ಸೋರಿಕೆಯಾಗುತ್ತದೆ ಅಥವಾ ಅದನ್ನು ಯಾರೋ ತಮ್ಮ ಸ್ವಾರ್ಥಕ್ಕೆ ಬಳಸುತ್ತಾರೆ.
ಆದ್ದರಿಂದ ಒಟ್ಟಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಎಲ್ಲ ಪಕ್ಷಗಳು ಒಟ್ಟಿಗೆ ಕುಳಿತು ಮುಕ್ತ ಮನಸ್ಸಿನಿಂದ ಯಾರೂ ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ನಿರ್ಧರಿಸಿ ಒಂದು ಅಂತಿಮ ನಿರ್ಧಾರಕ್ಕೆ ಬರಬೇಕು. ಇನ್ನು ಮೀಸಲಾತಿ ಹೇಗೆ ಬಿಪಿಎಲ್, ಎಪಿಎಲ್ ಕಾರ್ಡ್ ಇರುವಂತೆ ನೈಜ ಬಡವರಿಗೆ ಸಿಗಬೇಕು. ಹಾಗಂತ ಬಿಪಿಎಲ್ ಇದ್ದವರು ಎಲ್ಲರೂ ಬಡವರಲ್ಲ. ಕೆಲವರು ಸುಳ್ಳು ದಾಖಲೆ ತೋರಿಸಿ ಅದನ್ನು ಪಡೆದುಕೊಂಡಿರುತ್ತಾರೆ. ಇಲ್ಲಿ ಕೂಡ ಹಾಗೆ ಆಗದಂತೆ ನೋಡಬೇಕಾಗುತ್ತದೆ. ಇದನ್ನೇ ರಾಜಕೀಯಕ್ಕೂ ಅನ್ವಯಿಸಿದರೆ ಉತ್ತಮ. ಏನೆಂದರೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಜನಪ್ರತಿನಿಧಿ ಆಗಲು ಅವಕಾಶ ಎನ್ನುವುದು ನಿರ್ಧಾರವಾಗಲಿ. ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಕೇಂದ್ರ ಸಚಿವರ ತನಕ ಯಾವುದೇ ಪೋಸ್ಟ್ ನಲ್ಲಿ ಒಂದು ಕುಟುಂಬದ ಸದಸ್ಯ ಇರಲಿ, ಆಗ ಅವರ ಮಗ, ಸಹೋದರ, ಸಹೋದರಿ ಯಾರೂ ಕೂಡ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ನಿಯಮ ಬರಲಿ. ಆಗ ಒಂದು ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಜನ ಜನಪ್ರತಿನಿಧಿ ಆಗುವುದನ್ನು ತಡೆಯಬಹುದು. ಎಲ್ಲರಿಗೂ ಅವಕಾಶ ಸಿಕ್ಕಿದಂತೆ ಮಾಡಬಹುದು. ಇದನ್ನು ಕೂಡ ಸರ್ವಪಕ್ಷಗಳು ಕುಳಿತು ಚಿಂತಿಸಲಿ. ಒಂದು ವೇಳೆ ಮಗನಿಗೆ ಶಾಸಕ, ಸಂಸದ ಆಗಬೇಕಾದರೆ ಅವನ ತಂದೆ ಅಥವಾ ಸಹೋದರ ಆ ಸ್ಥಾನದ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಸ್ಪರ್ಧಿಸದೇ ಇರಲಿ. ಇದನ್ನು ಕೂಡ ನ್ಯಾಯಾಲಯವೇ ಹೇಳಬೇಕಾ ಅಥವಾ ಹೊಸ ರಾಜಕೀಯ ಮನ್ವಂತರಕ್ಕೆ ರಾಜಕಾರಣಿಗಳು ನಾಂದಿ ಹಾಡುತ್ತಾರಾ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply