• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಡೀಲಿನ ಡಿಸಿ ಕಚೇರಿಗೆ ಬೆಳ್ಳಿಯ ಹೊದಿಕೆ ಹಾಕಲು ಇದೆಯಾ!

Hanumantha Kamath Posted On February 14, 2022


  • Share On Facebook
  • Tweet It

ಸರಕಾರಿ ಯೋಜನೆಗಳಲ್ಲಿ ಕೋಟಿಗಳಿಗೆ ಲೆಕ್ಕವೇ ಇಲ್ವಾ ಎಂದು ಅನಿಸುತ್ತದೆ. ಅದಕ್ಕೆ ತಾಜಾ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಪಡೀಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ಸಂಕೀರ್ಣ. ಈಗ ಮಂಗಳೂರಿನ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ನಗರದ ಹೊರವಲಯಕ್ಕೆ ಶಿಫ್ಟ್ ಮಾಡಬೇಕೆನ್ನುವುದು ದಶಕದ ಹಿಂದಿನ ಉದ್ದೇಶ. ಅದರೊಂದಿಗೆ ಈಗ ಬಿಡಿಬಿಡಿಯಾಗಿ ಅಲ್ಲಲ್ಲಿ ಹಂಚಿಹೋಗಿರುವ ಸರಕಾರಿ ಕಚೇರಿ ಒಂದೇ ಸಂಕೀರ್ಣದಲ್ಲಿ ತಂದರೆ ನಾಗರಿಕರಿಗೂ ಸುಲಭ ಮತ್ತು ನಗರದ ಒಳಗೆ ಜನದಟ್ಟಣೆಯನ್ನು ನಿಯಂತ್ರಣಕ್ಕೆ ತಂದಂತಾಗುತ್ತದೆ ಎನ್ನುವುದು ಗುರಿಯಾಗಿತ್ತು. ಅದಕ್ಕಾಗಿ ಪಡೀಲ್ ನಲ್ಲಿ ಸ್ಥಳ ಗುರುತಿಸಿ ಆಗಿತ್ತು. ಅದರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಯೂ ಆಗಿತ್ತು. ಒಂದು ಡಿಪಿಆರ್ ತಯಾರಿಸುವಾಗಲೇ ಒಂದು ಯೋಜನೆ ಅನುಷ್ಟಾನಕ್ಕೆ ತರಲು ಇಷ್ಟು ಅನುದಾನ ಬೇಕಾಗುತ್ತದೆ ಎನ್ನುವುದನ್ನು ಅದರಲ್ಲಿಯೇ ನಮೂದಿಸಬೇಕು. ಆ ಯೋಜನೆಗೆ ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯ ಬೇಕು ಎಂದಾಗ ಕಾಲಕ್ರಮೇಣ ಕಚ್ಚಾಪದಾರ್ಥಗಳ ಬೆಲೆಯನ್ನು ಆದರಿಸಿ ಒಂದಿಷ್ಟು ಹೆಚ್ಚುವರಿ ಮೊತ್ತವನ್ನು ದಾಖಲಿಸುವುದು ಸಂಪ್ರದಾಯ. ಆದರೆ ಒಂದು ಯೋಜನೆ 2-3 ವರ್ಷಗಳಿಂದ ಮಾತ್ರ ಅನುಷ್ಟಾನಕ್ಕೆ ಬರುತ್ತಿದ್ದು. ಅದರ ಡಿಪಿಆರ್ ನಲ್ಲಿ 55 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದ್ದು ಈಗ 70% ಕಾಮಗಾರಿ ಮುಗಿದಿರುವಾಗ ಈಗ ಮತ್ತೆ 29 ಕೋಟಿ ಅಂದರೆ ಮೂಲಮೊತ್ತದ ಅರ್ಧಕ್ಕಿಂತ ಹೆಚ್ಚು ಹಣ ಬೇಕು ಎಂದು ಗುತ್ತಿಗೆದಾರರು, ಇಂಜಿನಿಯರ್ಸ್ ಲೆಕ್ಕ ಹಾಕಿ ಕುಳಿತಿದ್ದಾರೆ ಎಂದರೆ ಇದರಿಂದ ಯಾರಿಗಾದರೂ ಸಂಶಯ ಬರುವುದು ನೂರಕ್ಕೆ ನೂರರಷ್ಟು ನಿಜ.

ಅದನ್ನು ಪರಿಶೀಲಿಸಲು ದಕ್ಷಿಣ ಕನ್ನಡ ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅಲ್ಲಿ ಭೇಟಿ ನೀಡಿದ್ದಾರೆ. ಇಲ್ಲಿ ಅಧಿಕಾರಿಗಳ, ಇಂಜಿನಿಯರ್ಸ್, ಗುತ್ತಿಗೆದಾರರ ಮೈತ್ರಿ ಹೇಗಿರುತ್ತೆ ಎಂದರೆ ಈಗ 70% ಮುಗಿದಿರುವ ಕಾಮಗಾರಿಯನ್ನು ಯಾವ ಕಾರಣಕ್ಕೂ ನಿಲ್ಲಿಸಲು ಸರಕಾರ ಮುಂದಾಗುವುದಿಲ್ಲ. ಯಾಕೆಂದರೆ ಇದು ಸರಕಾರದ ಮಾನ ಮರ್ಯಾದೆಯ ಪ್ರಶ್ನೆ. ಒಂದು ವೇಳೆ ಇನ್ನಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿತು ಎಂದೇ ಇಟ್ಟುಕೊಳ್ಳೋಣ, ಆ ಯೋಜನೆ ಅಲ್ಲಿಗೆ ನಿಂತು ಬಿಡುತ್ತದೆ. ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣ ದೆವ್ವದ ಬಂಗ್ಲೆ ಆಗುತ್ತದೆ. ಅದನ್ನು ಮಾಧ್ಯಮಗಳು ಒಮ್ಮೆ ತೋರಿಸಲು ಶುರು ಮಾಡಿದವು ಎಂದೇ ಇಟ್ಟುಕೊಳ್ಳೋಣ, ನಂತರ ವಿಪಕ್ಷಗಳಿಗೆ ಒಂದು ವೇಳೆ ಬೆನ್ನು ಮೂಳೆ ಇದ್ದರೆ ಅವರು ಅದನ್ನು ಹಿಡಿದೇ ಆಡಳಿತ ಪಕ್ಷದ ಮಾನ ಹರಾಜು ಹಾಕಬಹುದು. ಇನ್ನು ಈಗಾಗಲೇ ವ್ಯಯಿಸಿರುವ 55 ಕೋಟಿ ರೂಪಾಯಿ ಕೂಡ ನದಿಯಲ್ಲಿ ಹುಣಸೇ ಹಣ್ಣು ತೊಳೆದಂತೆ ಆಗುತ್ತದೆ. ಈ ಎಲ್ಲಾ ಕಾರಣಗಳಿಂದ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲು ಸರಕಾರ ಹೋಗುವುದಿಲ್ಲ. ಇದು ಅಧಿಕಾರಿಗಳಿಗೆ ಗೊತ್ತಿದೆ. ಅದಕ್ಕಾಗಿ ಅವರು ಹೊಸ ಹೊಸ ರೀತಿಯ ವರಸೆಗಳನ್ನು ಹಾಕುತ್ತಾ ಹೋಗುತ್ತಾರೆ. ಇಲ್ಲಿ ಈಗ ಹೊಸದಾಗಿ 29 ಕೋಟಿ ರೂಪಾಯಿಗಳು ಯಾಕೆ ಎನ್ನುವ ಸತ್ಯವನ್ನು ಸುನೀಲ್ ಕುಮಾರ್ ಪತ್ತೆ ಹಚ್ಚಬೇಕು. ಅದು ಬಿಟ್ಟು ಅವರು ಸಿಎಂ ಜೊತೆ ಮಾತನಾಡಿ ಏಕಾಏಕಿ ಹಣ ಬಿಡುಗಡೆಗೊಳಿಸಿದರೆ ಜನರಿಗೆ ಆಶ್ಚರ್ಯವೂ ಆಗಬಹುದು. ಇಲ್ಲಿ ಒಂದಂತೂ ಸತ್ಯ. ಕಾಂಗ್ರೆಸ್ ಬರಲಿ, ಭಾರತೀಯ ಜನತಾ ಪಾರ್ಟಿ ಅಥವಾ ಜಾತ್ಯತೀತ ಜನತಾದಳ ಯಾರೇ ಬರಲಿ, “ಆ” ಒಂದು ವಿಷಯದಲ್ಲಿ ಎಲ್ಲರೂ ಒಂದೇ ಎನ್ನುವುದು ಜನರಿಗೆ ಗೊತ್ತಾಗುತ್ತಿದೆ. ಇಲ್ಲದಿದ್ದರೆ ಸರಿಯಾಗಿ ಕೆಲಸ ಮಾಡಿದ್ದರೆ 55 ಕೋಟಿಯೊಳಗೆ ಮುಗಿಸುವಂತದ್ದು ಈಗ ಹತ್ತಹತ್ತಿರ ತೊಂಭತ್ತು ಕೋಟಿಗೆ ಹೋಗುತ್ತಾ ಎನ್ನುವುದು ಉಳಿದಿರುವ ಪ್ರಶ್ನೆ.

ಮಂಗಳೂರಿಗೆ ಸರಿಯಾಗಿ ಬಸ್ ನಿಲ್ದಾಣವಿಲ್ಲ. ಅದಕ್ಕೆ ಇವರಿಗೆ ಹಣ ಹುಟ್ಟುತ್ತಿಲ್ಲ. ಅದಕ್ಕೆ ಬದಲಾಗಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ 85 ಕೋಟಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ. ಮಂಗಳೂರಿಗೆ ಬೇರೆ ಜಿಲ್ಲೆಯಿಂದ ಬರುವ ನಾಗರಿಕ ಇಲ್ಲಿನ ಬಸ್ ನಿಲ್ದಾಣವನ್ನು ನೋಡಿ ವಾವ್ ಎನ್ನಬೇಕೋ, ನಗರದ ಹೊರಭಾಗದಲ್ಲಿ ಇರುವ ಕಚೇರಿಗಳನ್ನು ನೋಡಿ ವಾವ್ ಎನ್ನಬೇಕೋ, ದೇವರಿಗೆ ಗೊತ್ತು. ಇವರಿಗೆ ಪಂಪ್ವೆಲ್ ನಲ್ಲಿ ಬಸ್ ನಿಲ್ದಾಣ ಮಾಡಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಖಾಸಗಿ ಬಸ್ ಮಾಲೀಕರಿಗೆ ಅದು ಇಷ್ಟವಿಲ್ಲ. ಅವರಿಗೆ ಇಷ್ಟವಿಲ್ಲ ಎಂದರೆ ಮುಗಿಯಿತು. ಅದು ಜೀವಮಾನದಲ್ಲಿ ಇಲ್ಲಿನ ಜನಪ್ರತಿನಿಧಿಗಳಿಗೆ ಮಾಡಲು ಸಾಧ್ಯವಿಲ್ಲ. ಈ ನಡುವೆ ಈ ಡಿಸಿ ಆಫೀಸಿಗೆ ಖರ್ಚು ಮಾಡುವ ಬದಲು ಒಂದು ಒಳ್ಳೆಯ ಬಸ್ ನಿಲ್ದಾಣ ಮಾಡಿದಿದ್ದರೆ ಜನ ಅದಕ್ಕಾದರೂ ಖುಷಿ ಪಡುತ್ತಿದ್ದರು. ಆದರೆ 440 ಕೋಟಿ ಬೇಕಲ್ಲ ಎಂದು ಇವರು ಇಲ್ಲಿಯ ತನಕ ಮುಂದೂಡುತ್ತಲೇ ಹೋದರು. ಈಗ ಅದು ಇಲ್ಲ, ಇದು ಕೂಡ ಇಲ್ಲ. ಅದರ ಬದಲಿಗೆ 160 ಕೋಟಿ ರೂಪಾಯಿಯೊಳಗೆ ಸ್ಮಾರ್ಟ್ ಸಿಟಿ ಫಂಡ್ ಬಳಸಿ ಬಸ್ ನಿಲ್ದಾಣ ಮಾಡಬಹುದಲ್ಲ. ಅದು ಮಾಡುತ್ತಿಲ್ಲ. 29 ಕೋಟಿ ರೂಪಾಯಿ ಬಳಸಿ ಅಲ್ಲಿಗೆ ಮತ್ತು ಡಿಸಿ ಆಫೀಸಿಗೆ ರಸ್ತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಡಿಸಿ ಆಫೀಸ್ ಪಡೀಲಿಗೆ ಶಿಫ್ಟ್ ಆಗುವಾಗ ಖರ್ಚು ನೂರು ಕೋಟಿ ದಾಟದಿದ್ದರೆ ಸಾಕು ಎನ್ನುತ್ತಿದ್ದಾನೆ ಜನಸಾಮಾನ್ಯ. ತಿಜೋರಿ ತುಂಬಿಸಿಕೊಳ್ಳುತ್ತಿರುವವರು ಎಲ್ಲಾ ಕಡೆಯಿಂದ ನಗುತ್ತಿದ್ದಾರೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search