• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸರಕಾರಿ ಮೆಡಿಕಲ್ ಕಾಲೇಜು ಸಿಕ್ಕಿಲ್ಲ, ಎತ್ತಿನಹೊಳೆ ನಿಂತಿಲ್ಲ! ಸೂಪರ್ ಬಜೆಟ್!

Hanumantha Kamath Posted On March 7, 2022


  • Share On Facebook
  • Tweet It

ಯಾವುದೇ ಒಂದು ಬಜೆಟ್ ಮಂಡಿಸಿದ ಬಳಿಕ ಮಾಧ್ಯಮದವರ ಮುಂದೆ ಬರುವ ಆಡಳಿತ ಪಕ್ಷದವರು ಅದನ್ನು ಸೂಪರ್ ಬಜೆಟ್, ಇಂತಹ ಬಜೆಟ್ ನಮ್ಮ ಕನಸು, ಮನಸ್ಸಿನಲ್ಲಿಯೂ ನೋಡಿರಲಿಲ್ಲ ಎಂದು ಹೇಳುವುದು ಸರ್ವೆ ಸಾಮಾನ್ಯ. ಅದೇ ರೀತಿಯಲ್ಲಿ ವಿಪಕ್ಷದವರು ಇದು ನಿರಸ ಬಜೆಟ್. ಇದರಲ್ಲಿ ಹುಳಿ, ಖಾರ, ಉಪ್ಪು ಏನೂ ಇಲ್ಲ ಎಂದು ತೆಗಳುವುದು ಅಷ್ಟೇ ಕಾಮನ್. ಅದರಲ್ಲಿ ಯಾವುದೇ ವಿಶೇಷ ಇರುವುದಿಲ್ಲ. ಇಬ್ಬರೂ ಪೂರ್ತಿ ಬಜೆಟ್ ಓದಿರುವುದಿಲ್ಲ. ಇಬ್ಬರಿಗೂ ಓದುವ ವ್ಯವಧಾನ ಇರುವುದಿಲ್ಲ. ಬಜೆಟ್ ಮುಗಿಸಿ ಸದನ ಮುಗಿದ ಕೂಡಲೇ ಎರಡೂ ಕಡೆಯವರು ತಮ್ಮ ರೆಡಿಮೆಡ್ ಉತ್ತರ ಹಿಡಿದು ಮಾಧ್ಯಮಗಳ ಮುಂದೆ ಹಾಜರಾಗುತ್ತಾರೆ. ಯಾವುದೇ ಒಂದು ಸರಕಾರ ಇರಲಿ, ಮಂಡಿಸಿದ ಯಾವುದೇ ಬಜೆಟ್ ಇರಲಿ ಪೂರ್ಣ ಕಳಪೆಯೂ ಆಗಿರುವುದಿಲ್ಲ. ಪೂರ್ಣ ಅಮೃತವೂ ಆಗಿರುವುದಿಲ್ಲ. ಆದ್ದರಿಂದ ವಿಶ್ಲೇಷಣೆ ಮಾಡದೇ ಏಕಾಏಕಿ ಒಂದು ನಿಲುವಿಗೆ ಬರುವುದು ಶುದ್ಧ ಅವಿವೇಕತನ. ಜನರಿಗೆ ಬಜೆಟ್ ಎಂದರೆ ಏನು ಎನ್ನುವ ಕುತೂಹಲವೇ ಈಗ ಉಳಿದಿಲ್ಲ. ಆದರೆ ನಾಗರಿಕರ ಪರವಾಗಿ ನಾನು ಹೇಳುವುದೇನೆಂದರೆ ಈ ಬಾರಿಯ ಬಜೆಟಿನಲ್ಲಿ ಒಂದು ಇರಲೇಬೇಕಿತ್ತು ಮತ್ತು ಇನ್ನೊಂದು ಇರಲೇಬಾರದಿತ್ತು. ಅದು ಯಾವುದು ಎನ್ನುವುದೇ ಇವತ್ತಿನ ಜಾಗೃತಿ ಅಂಕಣದ ವಿಷಯ.

ಮೊದಲನೇಯದಾಗಿ ಯಾವುದು ಇರಬೇಕಿತ್ತು ಎಂದು ಹೇಳುತ್ತೇನೆ. ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಹೀಗೆ ಪ್ರತಿಬಾರಿ ನಾವೇ ಹೇಳಿಕೊಳ್ಳುವುದು ಮತ್ತು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವುದು ಬಿಟ್ಟರೆ ಬೇರೆ ಏನೂ ಇಲ್ಲ. ನಾವು ಯಾರನ್ನು ಘಟ್ಟದವರು ಎಂದು ಕರೆಯುತ್ತಿದ್ದೆವೋ ಅವರಿಗೆ ಈ ಬಾರಿಯ ಬಜೆಟಿನಲ್ಲಿ ಚೆನ್ನಾಗಿ ಸಿಕ್ಕಿದೆ. ಆದರೆ ನಮ್ಮ ಹಣೆಬರಹಕ್ಕೆ ನಮಗೊಂದು ಸರಕಾರಿ ಮೆಡಿಕಲ್ ಕಾಲೇಜು ಕೂಡ ಸಿಕ್ಕಿಲ್ಲ. ಯಾಕೆ? ಯಾಕೆಂದರೆ ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಎಂಟರಿಂದ ಹತ್ತು ಇವೆ. ಆ ಕಾಲೇಜಿನ ಮುಖ್ಯಸ್ಥರು ಕಾಲಕಾಲಕ್ಕೆ ಪ್ರಸಾದವನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತಾರೆ. ಅವರು ಜನಪ್ರತಿನಿಧಿಗಳೊಂದಿಗೆ “ತುಂಬಾ” ಚೆನ್ನಾಗಿದ್ದಾರೆ. ಇಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಬಂದರೆ ಆ ಖಾಸಗಿಯವರಿಗೆ ಪೆಟ್ಟು ಬೀಳುತ್ತದೆ. ಖಾಸಗಿಯವರು ಕೋಪಿಸಿಕೊಂಡರೆ ನಮ್ಮ ಜನಪ್ರತಿನಿಧಿಗಳ ನಿದ್ರೆ ಹಾಳಾಗುತ್ತದೆ. ಜನರು ಕೋಪಿಸಿಕೊಂಡರೆ ಹೇಗಾದರೂ ಸರಿ ಮಾಡಬಹುದು, ಆದರೆ “ಖಾಸಗಿ”ಯವರು ಕೋಪಿಸಿಕೊಂಡರೆ ನಮ್ಮವರ ತಲೆಯಲ್ಲಿ ಅದೇ ಸುತ್ತುತ್ತಿರುತ್ತದೆ. ಅವರ ಫೋನ್ ಕಾಲ್ ಬಂದರೆ ಇವರಿಗೆ ಬಾಯಿ ಒಣಗುತ್ತದೆ. ಇಷ್ಟೆಲ್ಲ ಇರುವಾಗ ಖಾಸಗಿಯವರ ಅಂಕೆ ಮೀರಿ ಇಲ್ಲಿ ಸರಕಾರಿ ಕಾಲೇಜು ತರುವುದು ಎಂದರೆ ಕಂಬಳದಲ್ಲಿ ಕೋಣಗಳೊಂದಿಗೆ ಓಡುವುದಕ್ಕೆ ಸಮ. ಆ ಧೈರ್ಯ ಯಾರಿಗೂ ಇಲ್ಲದಿರುವುದರಿಂದ ಸಿಎಂ ಕೊಡುತ್ತೇನೆ ಎಂದರೂ ಇವರು ಬೇಡಾ ಎನ್ನುತ್ತಾರೆ. ಅದರ ಜೊತೆಗೆ ನಮ್ಮ ಜನರು ಕೂಡ ನಾವು ಬೇಡಿಕೆ ಇಟ್ಟರೆ, ಹೋರಾಟ ಮಾಡಿದರೆ ಯಾರಿಗೋ ಬೇಸರವಾಗುತ್ತೆ ಎಂದು ಮಾತನಾಡಲು ಹೋಗುವುದಿಲ್ಲ. ನಾನು ಇದನ್ನು ಯಾವುದೇ ಒಂದು ಪಕ್ಷಕ್ಕೆ ಹೇಳುತ್ತಿಲ್ಲ. ನಮ್ಮ ರಾಜ್ಯವನ್ನು ಆಳಿದ ಪ್ರತಿ ರಾಜ್ಯ ಸರಕಾರ ಕೂಡ ನಮ್ಮ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬರದಿರಲು ಕಾರಣವಾಗಿದೆ. ಸರಕಾರ ಯಾವುದೇ ಬರಲಿ, ನಮ್ಮ ಖಾಸಗಿಯವರು ಆ ಸರಕಾರದೊಂದಿಗೆ ಚೆನ್ನಾಗಿ ಇರುತ್ತಾರೆ.
ಇನ್ನು ಈ ಬಾರಿಯ ಬಜೆಟಿನಲ್ಲಿ ಯಾವುದು ಇರಬಾರದಿತ್ತು ಎಂದರೆ ಎತ್ತಿನ ಹೊಳೆ ಯೋಜನೆಗೆ ಇಟ್ಟಿರುವ ಮೂರು ಸಾವಿರ ಕೋಟಿ ರೂಪಾಯಿಗಳು. ನಾವು ಈ ಯೋಜನೆಯ ವಿರುದ್ಧ ಹೋರಾಡಿದವರು. ನಮ್ಮ ಸರಕಾರ ಬಂದರೆ ಈ ಯೋಜನೆ ಕೈಬಿಡುತ್ತೇವೆ ಎಂದು ಹೇಳಿದ ನಾಯಕರು ಈಗಲೂ ಅಧಿಕಾರದಲ್ಲಿದ್ದಾರೆ. ಆದರೂ ಈ ಯೋಜನೆ ಮುಂದುವರೆಯುತ್ತಿದೆ. ಅದಕ್ಕೆ ಈ ಬಜೆಟಿನಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಇಟ್ಟಿದ್ದು ನೋಡಿ ಹೊಟ್ಟೆ ಉರಿಯುತ್ತದೆ. ಇದನ್ನು ಪರಿಸರ ಪ್ರಿಯ ಬಜೆಟ್ ಎಂದು ಬಸ್ಸು ಬೊಮ್ಮಾಯಿ ಹೇಳಿದ್ದಾರೆ. ಆದರೆ ಸಾವಿರಾರು ಎಕರೆ ಪ್ರದೇಶವನ್ನು ಬೋಳಾಗಿಸುವ, ಲಕ್ಷಾಂತರ ಮರಗಳ ಮಾರಣಹೋಮ ನಡೆಯುವ ಯೋಜನೆಗೆ ಮೂರು ಸಾವಿರ ಕೋಟಿ ಎಂದರೆ ಪರಿಸರ ಪ್ರಿಯ ಬಜೆಟ್ ಎಲ್ಲಿಂದ ಬಂತು. ಈ ಯೋಜನೆ ಆಗುತ್ತಾ ಇಲ್ವಾ ದೇವರಿಗೆ ಗೊತ್ತು. ಯೋಜನೆ ಆಗಿ ನೇತ್ರಾವತಿಯ ನೀರು ಬಯಲು ಸೀಮೆಯ ಜನ ಕುಡಿಯುತ್ತಾರೋ ಇಲ್ವೋ ಯಾರಿಗೂ ಗೊತ್ತಿಲ್ಲ. ಆದರೆ ಈ ಯೋಜನೆಯ ಹೆಸರಿನಲ್ಲಿ ಹಲವರಿಗೆ ಲಾಭ ಇದೆ ಎನ್ನುವುದು ಪ್ರಕೃತಿ ತಾಯಿಗೆ ಮಾತ್ರ ಗೊತ್ತು. ಒಟ್ಟಿನಲ್ಲಿ ಇಲ್ಲಿ ಕಾಂಗ್ರೆಸ್ ಬಂದರೂ ಸರಕಾರಿ ಮೆಡಿಕಲ್ ಕಾಲೇಜು ಬರಲ್ಲ, ಭಾರತೀಯ ಜನತಾ ಪಾರ್ಟಿ ಬಂದರೂ ಬರಲ್ಲ. ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ಬಂದರೂ ಮುಂದುವರೆಯುತ್ತೆ, ಬಿಜೆಪಿ ಬಂದರೂ ಮುಂದುವರೆಯುತ್ತೆ. ನಾವು ಮಾತ್ರ ಅವ ನಮ್ಮವ, ಅವ ನಮ್ಮವ, ಅವ ನಮ್ಮವ ಎಂದು ಹೇಳುತ್ತಾ ಪ್ರತಿ ಬಾರಿ ಮತ ಹಾಕುತ್ತೇವೆ. ಮತ ಹಾಕುವುದು ನಮ್ಮ ಧರ್ಮ, ಗೆಲ್ಲುವುದು ಅವರ ಕರ್ಮ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search