ಶಿಕ್ಷಣೋದ್ಯಮಿಗಳಿಗೆ ವ್ಯಾಪಾರದ ಚಿಂತೆ, ಪೋಷಕರಿಗೆ ಮಕ್ಕಳ ಆರೋಗ್ಯದ ಚಿಂತೆ!!
ರಾಜ್ಯದಲ್ಲಿ ಶಾಲೆಗಳನ್ನು ಹಂತಹಂತವಾಗಿ ಪುನರಾರಂಭಿಸುವುದಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಸಿದ್ಧವಾಗಿದೆ. ಇದಕ್ಕಾಗಿ ಒಂದು ಪಟ್ಟಿ ಕೂಡ ತಯಾರಾಗಿದೆ. ನಾಲ್ಕರಿಂದ ಏಳನೇ ತರಗತಿಯವರೆಗಿನ ಮಕ್ಕಳಿಗೆ ಜುಲೈ ಒಂದರಂದು, ಒಂದರಿಂದ ಮೂರನೇ ಕ್ಲಾಸಿನ ತನಕದ ಮಕ್ಕಳಿಗೆ ಜುಲೈ 15 ರಿಂದ, ಹಾಗೆ ಎಂಟರಿಂದ ಹತ್ತನೇ ತರಗತಿಯವರೆಗೆ ಜುಲೈ 15 ರಿಂದ ಮತ್ತು ಪೂರ್ವ-ಪ್ರಾಥಮಿಕ ತರಗತಿಯವರೆಗೆ ಜುಲೈ 20 ರಿಂದ ಆರಂಭಿಸಲು ಸಿದ್ಧತೆ ನಡೆಸಿದೆ.
ಇನ್ನು ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೊದಲನೇಯದಾಗಿ ದೇವಸ್ಥಾನ ತೆರೆಯಲು ನಿಧಾನಗತಿ ಅನುಸರಿಸುವ ರಾಜ್ಯ ಸರಕಾರ ಶಾಲೆ ತೆರೆಯಲು ಅರ್ಜೆಂಟ್ ಮಾಡುವುದನ್ನು ನೋಡುವಾಗ ಇದರ ಹಿಂದೆ ಎಷ್ಟು ಲಾಬಿ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನು ರಾಜ್ಯ ಸರಕಾರ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ನಿರೀಕ್ಷೆ ಮಾಡುವುದೇ ತಪ್ಪು. ಸರಕಾರ ಕಾಟಾಚಾರಕ್ಕೆ ಕೆಲವು ಪೋಷಕರ ಅಭಿಪ್ರಾಯವನ್ನು ತೆಗೆದುಕೊಳ್ಳಬಹುದು. ನಾವು ಪೋಷಕರು ಹೇಳಿದಂತೆಯೇ ನಡೆದುಕೊಳ್ಳುತ್ತೇವೆ ಎಂದು ಕೂಡ ಜನರಿಗೆ ನಂಬಿಸಿ ಪ್ರಚಾರ ಪಡೆದುಕೊಳ್ಳಬಹುದು. ವಿಧಾನಸಭಾದಲ್ಲಿ ಸಚಿವರು ಪೋಷಕರೊಂದಿಗೆ ಸಭೆ ನಡೆಸುವ ಫೋಟೋ ತೆಗೆದು ಸಾಮಾಜಿಕ ಜಲತಾಣಗಳಲ್ಲಿ ಪಸರಿಸಬಹುದು. ಆದರೆ ಯಾವುದೇ ಕಾರಣಕ್ಕೂ ಈಗ ಸರಕಾರ ಏನು ನಿರ್ಧಾರ ಮಾಡಿದೆಯೋ ಅದರಂತೆ ನಡೆಯಲಿದೆ. ಯಾಕೆಂದರೆ ಶಿಕ್ಷಣ ಇಲಾಖೆಯ ಕೀಲಿಕೈ ಶಾಲೆಗಳನ್ನು ನಡೆಸುವ ಬಂಡವಾಳಶಾಯಿಗಳ ಕೈಯಲ್ಲಿದೆ. ರಾಜ್ಯದ ಹೆಚ್ಚಿನ ಶಾಲೆಗಳು ಒಂದೋ ರಾಜಕಾರಣಿಗಳ ಕೈಯಲ್ಲಿದೆ ಅಥವಾ ರಾಜಕಾರಣಿಗಳ ಹಿತೈಷಿಗಳ ಕೈಯಲ್ಲಿದೆ. ಮಕ್ಕಳ ಜೀವಕ್ಕಿಂತ ವ್ಯಾಪಾರದ ಹೆಸರಿನಲ್ಲಿ ಅಂಗಡಿ ತೆರೆದು ಕುಳಿತಿರುವ ಈ ಬಂಡವಾಳಶಾಹಿಗಳಿಗೆ ಹಣದ ದಾಹ ಮುಖ್ಯವಾಗಿದೆ. ಆದ್ದರಿಂದ ಸ್ವತ: ಸುರೇಶ್ ಕುಮಾರ್ ಮನಸ್ಸಿನಲ್ಲಿ ಸದ್ಯ ಶಾಲೆಗಳು ಬೇಡಾ ಎಂದು ಇದ್ದರೂ ಅದನ್ನು ಶಿಕ್ಷಣೋದ್ಯಮಿಗಳು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಈಗ ಸೀಸನ್. ಈಗಾಗಲೇ ಎಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಲಾಕ್ ಡೌನ್ ನಡೆದು ಎಲ್ಲವೂ ಬಂದ್ ಆಗಿ ಭಾರತದಲ್ಲಿ ಅಸಂಖ್ಯಾತ ಉದ್ಯಮಗಳು ಮತ್ತು ಕೆಲಸಗಾರರು ಸಂಕಷ್ಟದಲ್ಲಿ ಇದ್ದರೂ ಜೂನ್ ಬಂತೆಂದರೆ ಈ ಶಿಕ್ಷಣೋದ್ಯಮಿಗಳು ರಂಗ ತೆರೆದು ವೇಷ ಹಾಕಿ ಕುಣಿಯಲು ಶುರು ಮಾಡಿ ಆಗಿದೆ. ಯಾವ ಸರಕಾರ ಬಂದರೂ ಈ ಶಿಕ್ಷಣೋದ್ಯಮಿಗಳು ತಮ್ಮ ಪ್ರಾಮುಖ್ಯ ತೋರಿಸುವುದರಿಂದ ಅವರನ್ನು ಕಡೆಗಣಿಸಿ ಶಿಕ್ಷಣ ಕ್ಷೇತ್ರದಲ್ಲಿ ಯಾವ ಸುಧಾರಣೆ ಮಾಡಲು ಸಾಧ್ಯವಿಲ್ಲ.
ನಾನು ಈಗಲೂ ಹೇಳುವುದು ಒಂದನೇ ತರಗತಿಯಿಂದ ಏಳನೇ ತರಗತಿಯ ತನಕ ಶಾಲೆಗಳು ಈ ವರ್ಷ ಬೇಡಾ. ಬೇಕಾದರೆ ಮುಂದಿನ ಜನವರಿಯಿಂದ ಎಪ್ರಿಲ್ ತನಕ ಮಾಡಿ ಎಲ್ಲರನ್ನು ಪಾಸ್ ಮಾಡಿ ಮುಂದಿನ ತರಗತಿಗೆ ಕಳುಹಿಸುವುದು ಕ್ಷೇಮ. ನಾಲ್ಕು ತಿಂಗಳು ಚಿಕ್ಕ ಮಕ್ಕಳು ಶಾಲೆಗೆ ಹೋಗದಿದ್ದರೆ ದೇಶವೇನೂ ಬಿದ್ದು ಹೋಗಲ್ಲ. ನಿನ್ನೆ ನಾನು ಯಾವುದೋ ಟಿವಿ ನೋಡುವಾಗ ಚರ್ಚೆಯಲ್ಲಿ ಕಾಲೇಜಿನ ಮಾಲೀಕರೊಬ್ಬರು ಕ್ರಿಕೆಟ್ ಆಡುವಾಗ ದಾಂಡಿಗ ಹೆಲ್ಮೆಟ್, ಗ್ಲೌಸ್, ಪ್ಯಾಡ್ ಧರಿಸಿ ಸುರಕ್ಷತೆಯೊಂದಿಗೆ ಆಡಲ್ವಾ, ಹಾಗೇ ಮಕ್ಕಳು ಎಲ್ಲಾ ಸುರಕ್ಷತೆಯೊಂದಿಗೆ ಶಾಲೆಗೆ ಬರಲಿ ಎಂದು ಹೇಳಿದರು. ಕ್ರಿಕೆಟ್ ಆಡುವಾಗ ಬಾಲ್ ರಭಸವಾಗಿ ಬಂದು ತಾಗಿದರೆ ಅದರಲ್ಲಿ ತೊಂದರೆಯಾಗುವುದು ಒಬ್ಬ ದಾಂಡಿಗನಿಗೆ ಮಾತ್ರ. ಅದೇ ವೈರಸ್ ಒಳಗೆ ಇದ್ದು ಗೊತ್ತಿಲ್ಲದ ಒಂದು ಮಗು ಶಾಲೆಗೆ ಬಂದು ಸೀನಿದರೆ, ಕೆಮ್ಮಿದರೆ ಅದರಿಂದ ಆ ತರಗತಿಯಲ್ಲಿರುವ ಅದೆಷ್ಟೋ ಮಕ್ಕಳ ಜೀವಕ್ಕೆ ತೊಂದರೆ ಅಲ್ವಾ? ನೀವು ಗಮನಿಸಬಹುದು. ಚಿಕ್ಕಮಕ್ಕಳು ಶಾಲೆಗೆ ಹೋಗುವಾಗ ಅನೇಕ ಬಾರಿ ಕಾಯಿಲೆಗೆ ಬೀಳುತ್ತವೆ. ಅದು ಹೇಗೆಂದರೆ ಒಂದು ಮಗುವಿಗೆ ಸಣ್ಣಗೆ ಜ್ವರ ಇದ್ದರೆ ಅದು ಬೇರೆ ಮಕ್ಕಳಿಗೆ ಹರಡಲು ತುಂಬಾ ಹೊತ್ತು ಹಿಡಿಯಲ್ಲ. ಇದೆಲ್ಲ ವೃತ್ತಿಯಲ್ಲಿ ಪತ್ರಕರ್ತರಾಗಿದ್ದು ನಂತರ ರಾಜಕಾರಣಿಯಾಗಿರುವ ಸುರೇಶ್ ಕುಮಾರ್ ಅವರಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಅವರಿಗೆ ಬೇಕಾದದ್ದನ್ನು ಮಾಡಲು ಪಟ್ಟಬದ್ಧ ಹಿತಾಸಕ್ತಿಗಳು ಬಿಡುವುದಿಲ್ಲ. ಅಷ್ಟೇ!!
Leave A Reply