ಯಡ್ಯೂರಪ್ಪ ಸರಕಾರ ಬೆಂಕಿ ಕೊಟ್ಟವರಿಂದಲೇ ನಷ್ಟ ವಸೂಲಿ ಮಾಡುವುದನ್ನು ಕಣ್ಣಾರೆ ನೋಡಬೇಕು!!
Posted On August 14, 2020
ಕಾಂಗ್ರೆಸ್ ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿಗಳ ಹಿಂದೆ ಏನು ಸತ್ಯ ಇದೆ ಎನ್ನುವುದನ್ನು ಹುಡುಕಲು ಸತ್ಯಶೋಧನಾ ಸಮಿತಿ ಮಾಡಿದೆ. ಒಂದು ಅಪ್ಪಟ ರಾಜಕೀಯ ಯುದ್ಧದಲ್ಲಿ ಅಖಂಡ ಶ್ರೀನಿವಾಸ ಒಂದು ದಾಳದಂತೆ ಬಳಕೆಯಾಗಿ ಹೋಗಿದ್ದಾರೆ. ಇದರ ಹಿಂದೆ ಪದ್ಮನಾಭ ನಗರದ ರಾಜಕೀಯ ಮಾಂತ್ರಿಕರ ನೆರಳು ಇರಬಹುದಾ ಎನ್ನುವುದು ರಾಜಕೀಯ ಪಂಡಿತರ ಪ್ರಶ್ನೆ. ಅಖಂಡ ಶ್ರೀನಿವಾಸ್ ಒಂದು ಕಾಲದಲ್ಲಿ ಜೆಡಿಎಸ್ ಪಾಳಯದಲ್ಲಿ ಇದ್ದ ಮನುಷ್ಯ. ಅಲ್ಲಿ ದೇವೆಗೌಡರ ಆರ್ಶೀವಾದದ ಪರಿಣಾಮವಾಗಿ ಪುಲಕೇಶಿ ನಗರದಲ್ಲಿ ನಿಲ್ಲಲು ಟಿಕೆಟ್ ಸಿಕ್ಕಿತ್ತು. ಆಗ ಜಮೀರ್ ಅಹ್ಮದ್ ಕೂಡ ಜೆಡಿಎಸ್. ಎಲ್ಲರೂ ಕುಮಾರಸ್ವಾಮಿಯವರಿಗೆ ಜೈ ಎನ್ನುವುದರಲ್ಲಿ ಎತ್ತಿದ ಕೈ. ಜೆಡಿಎಸ್ ನಲ್ಲಿ ಇದ್ದರೆ ಅಪ್ಪ, ಮಕ್ಕಳ ಜೊತೆಯಲ್ಲಿಯೇ ಇರಬೇಕು. ನಮ್ಮ ಅಸ್ತಿತ್ವ ಎನ್ನುವುದು ಇರುವುದೇ ಇಲ್ಲ ಎನ್ನುವುದು ಗ್ಯಾರಂಟಿಯಾದಂತೆ ಜಮೀರ್ ತಮ್ಮ ಬಸ್ಸನ್ನು ಸಿದ್ಧರಾಮಯ್ಯನವರ ಮನೆ ಮುಂದೆ ನಿಲ್ಲಿಸಿದರು. ಅದು ರಾಜ್ಯಸಭಾ ಚುನಾವಣೆಯ ಸಮಯ. ತಮ್ಮ ಎಂಟು ಜನ ಆಪ್ತರೊಂದಿಗೆ ಜಮೀರ್ ಜೆಡಿಎಸ್ ಗೆ ನೀರು ಕುಡಿಸಿದರು. ಆಗ ಜಮೀರ್ ಹಿಂದೆ ನಿಂತಿದ್ದವರು ಇದೇ ಅಖಂಡ ಶ್ರೀನಿವಾಸ್. ಜಮೀರ್ ವಿರುದ್ಧ ದೇವೆಗೌಡರು ಎಷ್ಟು ಕೋಪಗೊಂಡಿದ್ದರೆಂದರೆ ಜಮೀರ್ ರಾಜಕೀಯ ಜೀವನ ಅಂತ್ಯಕ್ಕೆ ಗೌಡರ ಕುಟುಂಬ ಕಂಕಣಬದ್ಧವಾಗಿತ್ತು. ಆದರೆ ಹಣ ಚೆಲ್ಲಿ ಗೆಲ್ಲುವುದನ್ನೇ ಕರತಲಾಮಲಕ ಮಾಡಿಕೊಂಡಿರುವ ಜಮೀರ್ ಸೋಲುವುದು ಅಷ್ಟು ಸುಲಭವಾಗಿರಲಿಲ್ಲ. ಹೇಗೂ ಜಮೀರ್ ಜೊತೆಗೆ ಬಂದವರು ಎನ್ನುವ ಕಾರಣಕ್ಕೆ ಇದೇ ಪುಲಕೇಶಿನಗರದಲ್ಲಿ ಸಿದ್ಧರಾಮಯ್ಯ ಹೈಕಮಾಂಡ್ ಜೊತೆ ಗುದ್ದಾಡಿ ಅಖಂಡರಿಗೆ ಸೀಟು ಕೊಡಿಸಿದರು. ಗೆಲ್ಲಿಸುವ ಜವಾಬ್ದಾರಿ ಜಮೀರ್ ತೆಗೆದುಕೊಂಡರು. ಜಮೀರ್ ಎಸ್ ಡಿಪಿಐ ಜೊತೆಗೆ ನೆಂಟಸ್ತನ ಮಾತಾಡಿ ಅಖಂಡ ಶ್ರೀನಿವಾಸ ಮೂರ್ತಿಯವರನ್ನು ವಿಧಾನಸಭೆಗೆ ಕರೆದುಕೊಂಡು ಬಂದರು. ಅದರ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಒಂದು ವರ್ಷ ಯಾವ ಕಿರಿಕಿರಿಗೂ ಮೈತ್ರಿ ಸರಕಾರ ಕೈ ಹಾಕಲು ತಯಾರಿರಲಿಲ್ಲ. ಯಾಕೆಂದರೆ ಒಂದು ಸಣ್ಣ ದೊಂಬಿ ಕೂಡ ಮೈತ್ರಿ ಸರಕಾರವನ್ನು ಕೆಳಗಿಸಲು ಬಿಜೆಪಿಗೆ ಸಾಕು ಎನ್ನುವುದನ್ನು ಕುಮಾರಸ್ವಾಮಿ ಹಾಗೂ ಡಿಕೆಶಿವಕುಮಾರ್ ಅವರಿಗೆ ಯಾರೂ ಹೇಳಿ ಕೊಡಬೇಕಾಗಿಲ್ಲ. ಒಂದು ವರ್ಷದ ಬಳಿಕ ಕುಮಾರಸ್ವಾಮಿ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಯಿತು. ಬಹಳ ನೋವಿನೊಂದಿಗೆ ಡಿಕೆಶಿ ಮೈತ್ರಿ ಸರಕಾರ ಅಧ:ಪತನವನ್ನು ಕಣ್ಣಾರೆ ಕಂಡರು. ಆಗಲೂ ಪರಿಸ್ಥಿತಿ ಇಬ್ಬರ ನಡುವೆ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡಿತ್ತೋ, ನಂತರ ಬಿಜೆಪಿ ಸರಕಾರ ಸ್ಟ್ರಾಂಗ್ ಆಯಿತು. ಆಗ ಕುಮಾರಸ್ವಾಮಿ ಬಿಜೆಪಿ ಸರಕಾರವನ್ನು ಯಾವುದೇ ಕಾರಣಕ್ಕೂ ಪತನಗೊಳಿಸಲು ಪ್ರಯತ್ನಿಸುವುದಿಲ್ಲ ಎಂದು ಶಸ್ತ್ರವನ್ನು ಮೂರು ವರ್ಷಗಳ ಮಟ್ಟಿಗೆ ಕೆಳಗೆ ಇಟ್ಟುಬಿಟ್ಟರು. ಕಾಂಗ್ರೆಸ್ ಕೋಪಗೊಂಡಿದ್ದೇ ಆವಾಗ. ಆದರೆ ತಮಗೆ ಒಂದು ಕಾಲದಲ್ಲಿ ನೋವು ಕೊಟ್ಟ ಅಖಂಡ ಶ್ರೀನಿವಾಸರಿಗೆ ಬುದ್ಧಿಕಲಿಸಲು ಜೆಡಿಎಸ್ ನಿರ್ಧರಿಸಿತಾ? ಗೊತ್ತಿಲ್ಲ. ಆದರೆ ನವೀನ್ ಹಾಕಿದ ಒಂದು ಪೋಸ್ಟರ್ ಶಾಸಕರೊಬ್ಬರ ಮನೆಗೆ ಬೆಂಕಿ ಹಾಕಿ, ಅವರ ಬಂಗಾರವನ್ನು ಲೂಟಿ ಮಾಡಿ ಹೋಗುವ ಹಾಗೆ ಮಾಡಿದ್ದು ಮಾತ್ರ ಅಪ್ಪಟ ಆಶ್ಚರ್ಯ. ಅಖಂಡರ ಮನೆ ಧ್ವಂಸಗೊಳ್ಳುವುದರ ಹಿಂದೆ ಮುಸ್ಲಿಂ ಮೂಲಭೂತವಾದಿಗಳು ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಆದರೆ ಅವರ ಹಿಂದೆ ಯಾರಿದ್ದಾರೆ ಎನ್ನುವುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ. ರಾಜ್ಯ ಸರಕಾರ ಯಾವ ತನಿಖೆಗೆ ಕೊಟ್ಟರೂ ಸತ್ಯ ಬಹಿರಂಗಗೊಳ್ಳುವುದಿಲ್ಲ. ಮುಚ್ಚಿದ ಲಕೋಟೆಯ ಒಳಗಡೆ ವರದಿಯನ್ನು ನೀಡಲಾಗುತ್ತದೆ ವಿನ: ಮ್ಯಾಜಿಸ್ಟ್ರೇಟ್ ಕೊಟ್ಟ ವರದಿಯನ್ನು ಅದೇ ದಿನ ಯಾವ ಮುಖ್ಯಮಂತ್ರಿ ಕೂಡ ಸುದ್ದಿಗೋಷ್ಟಿ ಮಾಡಿ ಯಥಾವತ್ತಾಗಿ ಓದಿ ಹೇಳುವುದಿಲ್ಲ. ಇನ್ನು ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದಲ್ಲಿ ಮಾಡಿದ ಹಾಗೆ ಆಸ್ತಿಪಾಸ್ತಿ ನಷ್ಟ ಮಾಡಿದವರಿಂದಲೇ ಅದನ್ನು ವಸೂಲಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ದೊಂಬಿಯಲ್ಲಿ ಭಾಗವಹಿಸಿದವರಿಗೆ ತಾವು ಆಸ್ತಿಪಾಸ್ತಿ ನಷ್ಟ ಮಾಡಿದ್ದೇವೆ ಎಂದು ಗೊತ್ತಿದೆ. ಸರಕಾರ ಆರೋಪಿಗಳಲ್ಲಿ ಯಾರು ಎಷ್ಟು ನಷ್ಟ ಉಂಟು ಮಾಡಿದ್ದಾರೆ ಎನ್ನುವುದು ಗುರುತು ಹಚ್ಚಿ ಆಗಿರುವ ಒಟ್ಟು ನಷ್ಟ ಪಟ್ಟಿ ಮಾಡಿ ಅವರಿಗೆ ನೋಟಿಸು ಕೊಟ್ಟು ಆ ವ್ಯಕ್ತಿ ಬೆಂಕಿ ಕೊಟ್ಟು ನಷ್ಟ ಮಾಡಿದ ಪ್ರಮಾಣವನ್ನು ಅಂದಾಜು ಮಾಡಿ ಅವನಿಗೆ ನೀನು ಇಷ್ಟು ಕಟ್ಟಬೇಕು ಎಂದು ಹೇಳಿ ಅವನು ಅದಕ್ಕೆ ಅಪೀಲು ಹೋಗಲು ಅವಕಾಶ ಇದ್ದರೆ ಹೋಗಿ ಅವನಿಂದ ಹಣ ವಸೂಲಿಯಾಗುವಾಗ ಇನ್ನೆಷ್ಟು ವರ್ಷವೋ. ಇನ್ನು ಯಾರು ಬೆಂಕಿ ಕೊಡಲು ಮುಂದೆ ಬಂದಿರುತ್ತಾರೋ ಅವರು ಸಿರಿವಂತರು ಆಗಿರುವುದೇ ಇಲ್ಲ. ಅವರಿಗೆ ಬೆಂಕಿ ಕೊಡಲು ಬರುವಾಗ ಗಾಂಜಾ ಕೂಡ ಬೇರೆಯವರು ಉಚಿತವಾಗಿ ಒದಗಿಸಬೇಕು. ಆದ್ದರಿಂದ ಜನರ ತೆರಿಗೆಯ ಹಣವನ್ನು ಅವರಿಂದಲೇ ವಸೂಲಿ ಮಾಡುತ್ತೇವೆ ಎನ್ನುವುದನ್ನು ನಾವು ಒಮ್ಮೆಯಾದರೂ ಕಣ್ಣಾರೆ ನೋಡಬೇಕು ಎನ್ನುವುದು ರಾಜ್ಯದ ಪ್ರತಿಯೊಬ್ಬ ನಾಗರಿಕನ ಆಶಯ. ಯಡಿಯೂರಪ್ಪನವರ ಕೈಯಲ್ಲಿ ಇದೆಲ್ಲಾ ಆಗುತ್ತಾ? ಅವರಿಗೆ ಕಾಂಗ್ರೆಸ್ಸಿಗರು ಸೈಕಲ್ ರ್ಯಾಲಿ, ಪ್ರಮಾಣ ವಚನಕ್ಕೆ ಜನರನ್ನು ಸೇರಿಸಿದಾಗಲೇ ಏನೂ ಕ್ರಮ ಜರುಗಿಸಲು ಆಗಲಿಲ್ಲ. ಹಾಗಿರುವಾಗ ಇಷ್ಟೆಲ್ಲಾ ರಂಪಾಟ ಇರುವಾಗ ಏನು ಮಾಡಲು ಆಗುತ್ತೆ. ಆದರೂ ಆಶಾಭಾವನೆ ನಮ್ಮಲ್ಲಿ ಇರಬೇಕು. ಇನ್ನು ಎರಡೂವರೆ ವರ್ಷ ಇದೆಯಲ್ಲ. ಯಾವಾಗ ವಸೂಲಿ ಆಗುತ್ತೆ ನೋಡೋಣ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply