ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ವಿಭಾಗ ಇದೆ. ಅದು ತೆರೆಯುವುದು ಮಧ್ಯಾಹ್ನ 3 ಗಂಟೆಗೆ. ಅದು ಬೆಳಿಗ್ಗೆ ಇರುವುದಿಲ್ಲ. ಯಾವಾಗ ಮಧ್ಯಾಹ್ನ 3 ಗಂಟೆಗೆ ಒಪನ್ ಆಗುತ್ತೋ ಜನ ಫುಲ್ ರಶ್ಶಾಗುತ್ತಾರೆ. ಯಾಕೆಂದರೆ ಅದು ಪ್ರಮುಖ ವಿಭಾಗ. ನಿಮ್ಮ ಈ-ಖಾತಾ ಮಾಡುವುದರಿಂದ ಹಿಡಿದು ತೆರಿಗೆ ತುಂಬುವ ತನಕ ಅದು ಪ್ರಮುಖವಾದ ಆಯಕಟ್ಟಿನ ವಿಭಾಗ. ಆ ವಿಭಾಗ ಇರುವ ಚೇಂಬರಿನ ಎರಡು ಕಡೆ ಟೇಬಲ್ ಹಾಕಿರುತ್ತಾರೆ. ನಡುವೆ ಇರುವ ಓಣಿಯಂತಹ ಜಾಗದಲ್ಲಿ ಜನ ನಿಂತು ಕೆಲಸ ಮಾಡಿಸಬೇಕು. ಕೊರೊನಾ ಬಗ್ಗೆ ಜಾಗ್ರತೆ ವಹಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಪಾಲಿಕೆ ಕಡೆಯಿಂದ ಹೊರಗೆ ಜಾಗೃತಿಯ ಸಂದೇಶ ಮೊಳಗುತ್ತಿದ್ದರೆ ಅದೇ ಕಟ್ಟಡದ ಒಳಗೆ ಕಂದಾಯ ವಿಭಾಗದಲ್ಲಿ ಯಾರು ಕೊರೊನಾ ಸೋಂಕಿತರು, ಯಾರು ಅಲ್ಲ ಎಂದು ಗೊತ್ತಾಗದಂತೆ ಮುಂಬೈ ಲೋಕಲ್ ಟ್ರೇನ್ ನಲ್ಲಿ ಜನ ನಿಂತಿರುತ್ತಾರಲ್ಲ ಹಾಗೆ ನಾಗರಿಕರು ನಿಲ್ಲಬೇಕಾಗಿದೆ. ಯಾಕೆಂದರೆ ಆ ಮೂರರಿಂದ ಮೂರುವರೆ ಇದೆಯಲ್ಲ, ಅದು ಅನೇಕರಿಗೆ ಗೋಲ್ಡನ್ ಪಿರೀಡ್. ಹೇಗೆ?
ನೀವು ಈ-ಖಾತಾ ಮಾಡಿಸಲು ಪಾಲಿಕೆಗೆ ಅರ್ಜಿ ಹಾಕಿದ್ದೀರಿ ಎಂದರೆ ಅದನ್ನು ತೆಗೆದುಕೊಳ್ಳಲು 50 ದಿನಗಳ ಬಳಿಕ ನೀವು ಪಾಲಿಕೆಗೆ ಹೋಗಿರುತ್ತೀರಿ. ಅದಕ್ಕೆ ನೀವು ಕಂದಾಯ ವಿಭಾಗಕ್ಕೆ ಹೋಗಲೇಬೇಕು. ಅಲ್ಲಿ ಕುಳಿತ ಸಿಬ್ಬಂದಿ ನಿಮ್ಮ ದಾಖಲೆಗಳನ್ನು ಗಮನಿಸಿ ನೀವು ಎಷ್ಟು ಫೀಸ್ ಪಾಲಿಕೆಗೆ ಕಟ್ಟಬೇಕು ಎನ್ನುವುದನ್ನು ಗುಣಾಕಾರ, ಭಾಗಾಕಾರ ಮಾಡುತ್ತಾರೆ. ಅದರ ನಂತರ ನಿಮಗೆ ಅಲ್ಲಿಯೇ ಬೇರೆ ಟೇಬಲಿನ ಸಿಬ್ಬಂದಿಯೊಬ್ಬರು ಚಾಲನ್ ನೀಡುತ್ತಾರೆ. ನೀವು ಅದನ್ನು ತೆಗೆದುಕೊಂಡು ಮ್ಯಾರಾಥಾನ್ ನಲ್ಲಿ ಪಂಜಿನ ದೀಪ ಹಿಡಿದು ಓಡುತ್ತಾರಲ್ಲ, ಹಾಗೇ ಚಲನ್ ಹಿಡಿದು ಪಾಲಿಕೆಯ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಬ್ಯಾಂಕಿಗೆ ಓಡಬೇಕು. ಅಲ್ಲಿ ಹಣ ಕಟ್ಟಿ ಚಲನ್ ಇದರ ನಕಲು ಪ್ರತಿ ಹಾಗೂ ಅರ್ಜಿಯನ್ನು ಹಿಡಿದು ಮೇಲೆ ಕಂದಾಯ ವಿಭಾಗಕ್ಕೆ ಮತ್ತೆ ಬರಬೇಕು. ಆಗ ಇನ್ನಷ್ಟು ಜನ ತುಂಬಿರುತ್ತಾರೆ. ಅಲ್ಲಿಗೆ ನಿಮ್ಮ ಕೆಲಸ ಅರ್ಧಕ್ಕೆ ನಿಂತಂತೆ. ನೀವು ಮೇಲಿನ ಮಹಡಿಗೆ ಬರುವಷ್ಟರಲ್ಲಿ ಜನರು ಸಾಕಷ್ಟು ಇರುವುದರಿಂದ ಅತ್ತ ಕೆಲಸವೂ ಸಂಪೂರ್ಣ ಆಗಿರುವುದಿಲ್ಲ. ಅದರೊಂದಿಗೆ ಆ ಗುಂಪಿನಲ್ಲಿ ಯಾರು ನಿಮಗೆ ಕೊರೊನಾ ಅಂಟಿಸಿರಬಹುದು ಎನ್ನುವ ಸುಳಿವು ಕೂಡ ನಿಮಗೆ ಸಿಕ್ಕಿರುವುದಿಲ್ಲ. ನಾನು ಹೇಳುವುದೇನೆಂದರೆ ಈ ಕೊರೊನಾ ಅವಧಿಯಲ್ಲಿ ಈ ಮೂರು ಗಂಟೆಯ ಬಳಿಕ ತೆರೆಯುವ ಕ್ರಮ ಬೇಕಾ? ಜನರು ಇಡೀ ದಿನ ಕಚೇರಿ ತೆರೆದಿದ್ದರೆ ತಮ್ಮ ಅನುಕೂಲದ ಅವಧಿಯಲ್ಲಿ ಬರುತ್ತಾರೆ. ಆಗ ರಶ್ಶ್ ಆಗುವುದಿಲ್ಲ. ಅದು ಬಿಟ್ಟು ಮಧ್ಯಾಹ್ನ 3 ಗಂಟೆಗೆನೆ ತೆರೆಯುವ ಹಟ ಪಾಲಿಕೆಗೆ ಯಾಕೆ? ಇದೇನು ತುಘಲಕ್ ದರ್ಬಾರ್ ಆಗಿ ಹೋಗಿದೆಯಾ?
ಇವತ್ತಿನ ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಕಂಪ್ಯೂಟರೀಕರಣವಾಗುತ್ತಿದೆ. ಆದರೆ ಪಾಲಿಕೆ ಹತ್ತು ವರ್ಷದ ಹಿಂದೆನೆ ಕಂಪ್ಯೂಟರೀಕರಣವಾಗಬೇಕಿತ್ತು. ಅದಕ್ಕಾಗಿ ನಾಲ್ಕು ಕೋಟಿ ರೂಪಾಯಿ ಮೀಸಲಾಗಿಡಲಾಗಿತ್ತು. ಆದರೆ ಇಲ್ಲಿಯ ತನಕ ಕಂಪ್ಯೂಟರೀಕರಣ ಮಾಡಲು ಪಾಲಿಕೆಯನ್ನು ಆಳಿದ ಯಾರಿಗೂ ಸಾಧ್ಯವಾಗಿಲ್ಲ. ಈಗ ಆ ಹಣ ಎಲ್ಲಿ ಹೋಗಿದೆ ಎಂದು ದುರ್ಬೀನ್ ಹಿಡಿದು ಹುಡುಕಬೇಕಾಗಿದೆ. ಒಂದು ವೇಳೆ ಇಡೀ ವ್ಯವಸ್ಥೆ ಕಂಪ್ಯೂಟರೀಕರಣವಾಗಿದಿದ್ದರೆ ನಾಗರಿಕರ ಎಷ್ಟು ಕೆಲಸ ಸಲೀಸಾಗಿ ಆಗಿ ಹೋಗುತ್ತಿತ್ತು ಎಂದು ಊಹಿಸಿ. ಉದಾಹರಣೆಗೆ ಜನನ, ಮರಣ ಪ್ರಮಾಣಪತ್ರವನ್ನೇ ತೆಗೆದುಕೊಳ್ಳಿ. ಈಗಿನ ಕಾಲಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ 99.99% ಮಕ್ಕಳು ಆಸ್ಪತ್ರೆಯಲ್ಲಿಯೇ ಹುಟ್ಟುತ್ತಾರೆ. ಇನ್ನು ಬಹುತೇಕ ಜನರು ಸಾಯುವುದು ಆಸ್ಪತ್ರೆಯಲ್ಲಿಯೇ. ಅಪಘಾತದಿಂದ ಹಿಡಿದು ಕಾಯಿಲೆ, ಕಸಾಲೆ ಬಂದು ಸಾಯುವವರು ಆಸ್ಪತ್ರೆಯಲ್ಲಿ ಸತ್ತಾಗ ಅವರ ವಿವರಗಳನ್ನು ಪಾಲಿಕೆ ಆನ್ ಲೈನ್ ಆದರೆ ಮಾಹಿತಿಗಳನ್ನು ನಿರ್ದಿಷ್ಟ ವ್ಯವಸ್ಥೆಯಲ್ಲಿ ರವಾನಿಸಬಹುದು. ಮಗು ಹುಟ್ಟುವಾಗಲೂ ಹಾಗೆ ಮಾಡಬಹುದು. ಅದನ್ನು ಪಾಲಿಕೆ ಕಡೆಯಿಂದ ಪರಿಶೀಲಿಸಿ ಮುಂದಿನ ವ್ಯವಸ್ಥೆ ಮಾಡಿದರೆ ಅದರ ಸಂಬಂಧಪಟ್ಟವರು ಡೌನ್ ಲೋಡ್ ಮಾಡಿದರೆ ಆಗ ಯಾರೂ ಕೂಡ ಈ ಪ್ರಮಾಣಪತ್ರಗಳಿಗಾಗಿ ನಾಲ್ಕು ಸಲ ಪಾಲಿಕೆಗೆ ಅಲೆಯಬೇಕಾಗಿಲ್ಲ. ಈಗ ಹೇಗೆ ಎಂದರೆ ಒಮ್ಮೆ ಅರ್ಜಿಗೆ, ಹತ್ತು ದಿನ ಬಿಟ್ಟು ಬನ್ನಿ ಎಂದರೆ ಆಗ, ನಂತರ ಆಗಿಲ್ಲ ಎರಡು ದಿನ ಬಿಟ್ಟು ಬನ್ನಿ ಎಂದರೆ ಆಗ ಮತ್ತೊಮ್ಮೆ ಹೀಗೆ ಸತ್ತವರನ್ನು ಜ್ಞಾಪಿಸುತ್ತಾ, ಜನನ ಪತ್ರ ಆದರೆ ಯಾಕೆ ಈ ಪಾಲಿಕೆ ವ್ಯಾಪ್ತಿಯಲ್ಲಿ ಹುಟ್ಟಿದೆ ಎಂದು ಮನದಲ್ಲಿಯೇ ಪ್ರಶ್ನಿಸುತ್ತಾ ಹೋಗಿ ಬರಬೇಕಾಗುತ್ತದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟುವ ಕಿರಿಕಿರಿ ಕೂಡ ಹೀಗೆಯೇ ಇರುತ್ತದೆ. ಈ ಜಾಗೃತ ಅಂಕಣದಲ್ಲಿ ಒಟ್ಟು ಮೂರು ವಿಷಯ ಹೇಳಿದ್ದೇನೆ. ಕೊರೊನಾ ಹರಡಿಸುವ ಪಾಲಿಕೆ, ಸಮಯ ಬದಲಾವಣೆ ಮಾಡದೇ ಜನರನ್ನು ಸತಾಯಿಸುವ ಪಾಲಿಕೆ ಮತ್ತು ಕಂಪ್ಯೂಟರ್ ಯುಗದಲ್ಲಿಯೂ ಹಳೆ ಕಾಲವನ್ನು ನೆನಪಿಸುವ ಪಾಲಿಕೆ. ಕೈಯಲ್ಲಿ ಅಧಿಕಾರ ಇದ್ದವರು ಸರಿ ಮಾಡುತ್ತಾರೆ ಅಥವಾ ಜನ ಕೈಗೆ ಅಧಿಕಾರ ಕೊಡುತ್ತಾರೆ!
Leave A Reply