• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯ ಸಭೆ ಎಂದರೆ ಯಾವುದೋ ಕ್ಲಬಿನ ಮೀಟಿಂಗ್ ಅಲ್ಲ!!

Hanumantha Kamath Posted On December 4, 2020


  • Share On Facebook
  • Tweet It

ದೇಶದ ಅಭಿವೃದ್ಧಿಗಳನ್ನು ಚರ್ಚೆ ಮಾಡಲು ಸಂಸತ್ತು ಇದ್ದ ಹಾಗೆ, ರಾಜ್ಯದ ಅಭಿವೃದ್ಧಿಗಳನ್ನು ಚರ್ಚೆ ಮಾಡಲು ವಿಧಾನ ಮಂಡಲ ಇದ್ದ ಹಾಗೆ, ಮಹಾನಗರಗಳ ಅಭಿವೃದ್ಧಿ ಚರ್ಚೆ ಮಾಡಲು ಮಹಾನಗರ ಪಾಲಿಕೆ ಇರುತ್ತದೆ. ಸಂಸತ್ತು ಹಾಗೂ ವಿಧಾನ ಮಂಡಲಗಳಿಗೆ ಮುಂಗಾರು, ಚಳಿಗಾಲ, ಬಜೆಟ್, ಬೇಸಿಗೆ ಅದು ಇದು ಎಂದು ವರ್ಷಕ್ಕೆ ಸಾಕಷ್ಟು ದಿನ ಅಧಿವೇಶನಗಳು ಇರುತ್ತವೆ. ಆದರೆ ಅರವತ್ತು ವಾರ್ಡುಗಳು, ಬಹುತೇಕ ಒಂದೂವರೆ ವಿಧಾನ ಸಭಾ ಕ್ಷೇತ್ರವನ್ನು ಹೊಂದಿರುವ ಮಹಾನಗರ ಪಾಲಿಕೆಗೆ ಇರುವುದು ತಿಂಗಳಿಗೆ ಒಂದೇ ದಿನ. ಅದೇ ದಿನ ಪಾಲಿಕೆ ಇಡೀ ತಿಂಗಳ ಅಷ್ಟೂ ಚಿಂತನೆ, ಯೋಜನೆಗಳನ್ನು ಸರ್ವ ಸದಸ್ಯರ ಮುಂದೆ ಇಡಬೇಕು. ಆ ದಿನದ ಒಂದೊಂದು ನಿಮಿಷವೂ ಪಾಲಿಕೆಯ ಮಟ್ಟಿಗೆ ನಿರ್ಣಾಯಕ. ಆದರೆ ಈಗ ಆಗುವುದೇನು? ಪೊಲೀಸರು ನೋಪಾರ್ಕಿಂಗ್ ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನಗಳನ್ನು ಮಾತ್ರ ಟೋ ಮಾಡಿಕೊಂಡು ಹೋಗುತ್ತಾರೆ. ಕಾರುಗಳನ್ನು ಮುಟ್ಟುವುದಿಲ್ಲ ಎಂದು ಹೇಳಲು ಸಭೆಯ ಸಮಯವನ್ನು ಹಾಳು ಮಾಡಬೇಕಾ? ಇದೇನು ದೊಡ್ಡ ಘನಂಧಾರಿ ವಿಷಯವಾ? ಒಂದು ವೇಳೆ ವಿಪಕ್ಷ ಸದಸ್ಯರಿಗೆ ಈ ಬಗ್ಗೆ ತೊಂದರೆಗಳು ಇದ್ದರೆ ತಿಂಗಳ ಯಾವುದೇ ದಿನ ನಿಯೋಗದೊಂದಿಗೆ ಮೇಯರ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ಮಾಡಿ ನಂತರ ಪಾಲಿಕೆ ಕಡೆಯಿಂದ ಮೇಯರ್, ಸಚೇತಕರು ಮತ್ತು ವಿಪಕ್ಷ ನಾಯಕರು ಪೊಲೀಸ್ ಕಮೀಷನರ್ ಅವರ ಬಳಿ ಹೋಗಿ ಚರ್ಚೆ ಮಾಡಿದರೆ ಮುಗಿಯಿತು. ಅದಕ್ಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಕಾಲಹರಣ ಮಾಡಬೇಕಿಲ್ಲ. ಇನ್ನು ಗೋಡೆಬರಹದ ಪ್ರಕರಣ. ಅದನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದರೆ ಜನಸಾಮಾನ್ಯರಿಗೆ ಏನು ಲಾಭ? ಇನ್ನು ಲೇಡಿಹಿಲ್ ವೃತ್ತಕ್ಕೆ ಬಿಜೆಪಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಟ್ಟರೆ ಎಲ್ಲ ಬಿಲ್ಲವರ ಮತಗಳು ಅವರಿಗೆ ಹೋಗುತ್ತದೆ ಎಂದು ಹೆದರಿದ ಕಾಂಗ್ರೆಸ್ ಈಗ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಲು ಒತ್ತಾಯಿಸುತ್ತಿದೆ. ಇದೇ ಕಾಂಗ್ರೆಸ್ಸಿಗರು ಸ್ಥಾಯಿ ಸಮಿತಿ ಸಭೆಯಲ್ಲಿ ಈ ಹೆಸರು ವೃತ್ತಕ್ಕೆ ಇಡಲು ಆಕ್ಷೇಪ ಎತ್ತಿದ್ದಾರೆ. ಇದೆಲ್ಲವೂ ನಿಜಕ್ಕೂ ಪಾಲಿಕೆಯ ಅಮೂಲ್ಯ ಸಮಯವನ್ನು ಕಬಳಿಸಿಬಿಡುತ್ತಿರುವುದರಿಂದ ಯಾವ ವಿಷಯದ ಮೇಲೆ ಚರ್ಚೆಯಾಗಬೇಕಿತ್ತೋ ಅದು ಆಗುತ್ತಿಲ್ಲ.

ಉದಾಹರಣೆಗೆ ಬಂದರು ಪ್ರದೇಶವನ್ನೇ ತೆಗೆದುಕೊಳ್ಳಿ. ಇಡೀ ಬಂದರು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ವಾಣಿಜ್ಯ ರಾಜಧಾನಿಯಿದ್ದ ಹಾಗೆ. ಆದರೆ ಬಂದರನ್ನು ಪೋಸ್ಟ್ ಮಾರ್ಟಂ ಮಾಡುವ ರೀತಿಯಲ್ಲಿ ಮಾಡಿಬಿಡಲಾಗಿದೆ. ಶವಾಗಾರದ ಮಾರ್ಬಲ್ ಮೇಲೆ ಹೆಣವನ್ನು ಅರ್ಧರ್ಧಕ್ಕೆ ಕೊಯ್ದು ನಂತರ ಪ್ಯಾಕ್ ಮಾಡುವ ಹಾಗೆ ಬಂದರನ್ನು ಒಂದು ತುದಿಯಿಂದ ಇನ್ನೊಂದು ತುದಿಯ ತನಕ ಕೊಯ್ಯಲಾಗಿದೆ. ಇದರಿಂದ ದ್ರೋಣ್ ನಲ್ಲಿ ಕುಳಿತು ವ್ಯಾಪಾರಿಗಳು, ಗ್ರಾಹಕರು ಬಂದರಿನಲ್ಲಿ ಇಳಿಯಬೇಕಿದೆ. ಇದನ್ನು ಯಾರಾದರೂ ಅಭಿವೃದ್ಧಿ ಎನ್ನುತ್ತಾರಾ? ಮೊದಲೇ ಆರು ತಿಂಗಳಿನಿಂದ ಹೊಟ್ಟೆಪಾಡಿಗೆ ಸಂಕಷ್ಟಪಡುತ್ತಿದ್ದ ಕೂಲಿಯಾಳುಗಳ ಸಂಕಷ್ಟವನ್ನು ನೋಡಿದವರಿಗೆನೆ ಗೊತ್ತು. ಆ ಬಗ್ಗೆ ಚರ್ಚೆಯಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಒಂದು ರಸ್ತೆಯ ಒಳಚರಂಡಿ ವ್ಯವಸ್ಥೆ ಮುಗಿಯದೇ ಮತ್ತೊಂದು ರಸ್ತೆಯ ಒಳಚರಂಡಿಗೆ ಕೈ ಹಾಕಿದ್ದೇಕೆ ಎಂದು ಪ್ರಶ್ನಿಸಬೇಕಿತ್ತು. ಒಂದು ವೇಳೆ ಹಣ ಖರ್ಚು ಮಾಡದೇ ಇದ್ದರೆ ಹಿಂದೆ ಹೋಗುತ್ತೆ ಎನ್ನುವುದೇ ಇವರ ಹೆದರಿಕೆ ಇದ್ದಿದ್ದರೆ ಇಷ್ಟು ದಿನ ಸ್ಮಾರ್ಟ್ ಸಿಟಿ ಮಂಡಳಿ ಮಲಗಿತ್ತಾ? ಎಂದು ಕೇಳುವ ಗಂಡಸ್ತನ ಯಾರಿಗಾದರೂ ಬೇಕಿತ್ತು.

ಇನ್ನು ಈಗಿನ ವಾತಾವರಣವನ್ನು ನೋಡಿದರೆ ನಾವು ಬಹಳ ಬೇಗ ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸಲಿದ್ದೇವೆ ಎನ್ನುವುದು ಗ್ಯಾರಂಟಿ. ತುಂಬೆಯಿಂದ ಬರುವುದು ಶುದ್ಧ ನೀರು ಅಲ್ಲ ಎನ್ನುವ ಚರ್ಚೆ ಸ್ವಲ್ಪ ಆಗಿರುವುದು ಸಮಾಧಾನಕರ ಅಂಶ ಎನ್ನುವುದು ಬಿಟ್ಟರೆ ಆ ನಿಟ್ಟಿನಲ್ಲಿ ಬೇರೆ ಚರ್ಚೆಯಾಗಲಿಲ್ಲ. ಇನ್ನು ಕುಡಿಯುವ ನೀರಿನ ಬಿಲ್ 80 ಕೋಟಿಯಷ್ಟು ಬಾಕಿ ಆಗಿದೆ. ಅಷ್ಟು ಬಾಕಿ ಇರುವುದು ಯಾಕೆ ವಸೂಲಿಯಾಗುತ್ತಿಲ್ಲ ಎಂದು ಚರ್ಚೆಯಾಗಬೇಕು. ಜಾಹೀರಾತು ಹೋರ್ಡಿಂಗ್ ಹಣ ಬರುವುದು ಸಾಕಷ್ಟು ಬಾಕಿ ಇದೆ. ಪಾಲಿಕೆಯ ಒಡೆತನದ ಕಟ್ಟಡಗಳಲ್ಲಿ ಬಾಡಿಗೆಗೆ ಇರುವವರು ಬಾಡಿಗೆ ಬಾಕಿ ಇಟ್ಟಿದ್ದಾರೆ. ಪಾಲಿಕೆಯ ಜನರಲ್ ಫಂಡ್ ನಿಂದ ನೂರು ಕೋಟಿಯಷ್ಟು ಕೆಲಸ ಆಗಿದ್ದರೂ ಗುತ್ತಿಗೆದಾರರಿಗೆ ಬರಬೇಕಾದ ಬಿಲ್ ಇನ್ನು ಪಾವತಿ ಆಗಿಲ್ಲ. ಹೀಗೆ ಅವರು ಎರಡೆರಡು ವರ್ಷ ಅದಕ್ಕಾಗಿ ಕಾದರೆ ಅವರು ನಿಜಕ್ಕೂ ಉತ್ತಮ ಗುಣಮಟ್ಟದ ಕೆಲಸ ಮಾಡಿಯಾರೆ ಎಂದು ಚರ್ಚೆ ಆಗಬೇಕಿತ್ತು. ಇಂತಹ ಎಷ್ಟೋ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಮಂಗಳೂರು ಕುಳಿತುಕೊಂಡಿದೆ. ಅದನ್ನೆಲ್ಲ ಚರ್ಚೆ ಮಾಡಿ ಮಂಗಳೂರನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದು ಬಿಟ್ಟು ಇವರು ಕೆಲಸಕ್ಕಿಲ್ಲದ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುವುದು, ಪರಿಷತ್ ಸಭೆಯ ಬಾವಿಯಲ್ಲಿ ಬಂದು ಗಲಾಟೆ ಮಾಡುವುದು, ಟಿವಿಯವರನ್ನು ಕಂಡ ಕೂಡಲೇ ಕೆಲವರು ಮೈಲೇಜ್ ಗಾಗಿ ಬೊಬ್ಬೆ ಹಾಕುವುದು ಮತ್ತು ನಗುತ್ತಾ ಎಲ್ಲರೂ ಎದ್ದು ಹೋಗುವುದು. ಇಷ್ಟಕ್ಕೆ ಇವರು ತಿಂಗಳಿಗೊಮ್ಮೆ ಕಾಫಿ, ತಿಂಡಿಗಾಗಿ ಪಾಲಿಕೆಗೆ ಬರಬೇಕಾ. ಅಷ್ಟಕ್ಕೂ ಇದು ಪಾಲಿಕೆಯ ಸಭೆಯಾ ಅಥವಾ ಯಾವುದಾದರೂ ಕ್ಲಬಿನ ಮೀಟಿಂಗಾ?

  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search