ಮೊನ್ನೆ ಏಳು ಜನ ಸಚಿವರಾದವರಲ್ಲಿ ಬಿಜೆಪಿ ಹೆಮ್ಮೆ ಪಡಬೇಕಾಗಿರುವುದು ಅಂಗಾರ ಬಗ್ಗೆ!!
ಅಂಗಾರ ಅವರಿಗೆ ಭಾರತೀಯ ಜನತಾ ಪಾರ್ಟಿಯವರು ಸಚಿವ ಸ್ಥಾನ ಕೊಡಲ್ಲ, ಕೊಡಲ್ಲ ಎಂದು ಹೇಳಿ, ಹೇಳಿ, ಕೇಳಿ ಕೇಳಿ ಬಿಜೆಪಿಯವರಿಗೆ ಸಾಕಾಗಿತ್ತು. ಈ ಬಾರಿಯೂ ಕೊಡದೇ ಮುಂದಿನ ಬಾರಿ ಸುಳ್ಯದಿಂದ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಒಮ್ಮೆಯೂ ಸಚಿವರಾಗದೇ ಮೂವತ್ತು ವರ್ಷ ಕಳೆದ ಶಾಸಕ ಎನ್ನುವ ಹಣೆಪಟ್ಟಿ ಅವರಿಗೆ ಪಕ್ಷವೇ ನೀಡಿದಂತಾಗಿತ್ತು. ಮೊದಲ ಮತ್ತು ಎರಡನೇ ಬಾರಿ ಗೆದ್ದ ಕೂಡಲೇ ಶಾಸಕರಿಂದ ಸಚಿವರಾದ ಜಿಲ್ಲೆ ನಮ್ಮದು. ಅದಕ್ಕೆ ನಾಗರಾಜ ಶೆಟ್ಟಿ, ಕೃಷ್ಣ ಪಾಲೆಮಾರ್ ಉದಾಹರಣೆ. ಇನ್ನು ಮುಂದಿನ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಿನ್ನೆಯಡಿ ಚುನಾವಣೆ ನಡೆಯುವುದರಿಂದ ಅಂಗಾರ ಪ್ರತಿನಿಧಿಸುವ ಜಾತಿಗೂ ಪ್ರಾತಿನಿದ್ಯ ನೀಡಿದಂತಾಗುವುದು. ಕೊನೆಯದಾಗಿ ಏನೂ ಲಾಬಿ ಮಾಡದೇ ಇದ್ದರೂ ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂದು ತೋರಿಸಿಕೊಟ್ಟಂತೆ ಆಗುತ್ತದೆ. ಯಾಕೆಂದರೆ ಮೊನ್ನೆ ಏಳು ಸಚಿವರಾಗಿ ಪ್ರತಿಷ್ಣಾವಿಧಿ ಸ್ವೀಕರಿಸಿದವರಲ್ಲಿ ಮೂರು ಕೆಟಗರಿಯವರಿದ್ದಾರೆ.
ಎಂಟಿಬಿ ನಾಗರಾಜ್ ಹಾಗೂ ಶಂಕರ್ ನೇರವಾಗಿ ಸರಕಾರ ಬರಲು ಕಾರಣರಾದವರು. ಯೋಗೀಶ್ವರ್ ಸರಕಾರ ಬರಲು ಹಿಂಬಾಗಿಲಿನಿಂದ ನೆರವಾದವರು. ಉಮೇಶ್ ಕತ್ತಿ, ನಿರಾಣಿ ಒಂದೂವರೆ ವರ್ಷದಿಂದ ನಿರಂತರ ಒತ್ತಡ ಹಾಕುತ್ತಿದ್ದವರು. ಲಿಂಬಾವಳಿ ಸಿಎಂ ಆಪ್ತರಾಗಿದ್ದರು. ಆದರೆ ಯಾವುದೇ ಕೆಟಗರಿಯಲ್ಲಿಯೂ ಇಲ್ಲದೆ ಇದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಗಾರ. ಅವರಿಗೆ ಸಚಿವ ಸ್ಥಾನ ಕೊಟ್ಟರೆ ಏನು ಮಹಾ ಮಾಡುತ್ತಾರೆ ಎನ್ನುವುದು ಅವರ ಊರಿನವರದ್ದೇ ಆಕ್ಷೇಪ. ಉಗ್ರ ಹೇಳಿಕೆ ಕೊಡಲ್ಲ, ಸಭೆಗಳಲ್ಲಿ ಅಧಿಕಾರಿಗಳನ್ನು ಜೋರು ಮಾಡುವುದಿಲ್ಲ, ಸರಕಾರಿ ಕಚೇರಿಗಳಲ್ಲಿ ನುಗ್ಗಿ ಅಬ್ಬರಿಸುವುದಿಲ್ಲ ಮತ್ತು ಕೊನೆಯದಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಕಾಣಿಸುವುದಿಲ್ಲ ಎನ್ನುವ ಕಾರಣಕ್ಕೆ ಸುಳ್ಯದ ಹೊರಗಿನವರಿಗೂ ಅಂಗಾರ ಅವರ ಬಗ್ಗೆ ಅಷ್ಟಕಷ್ಟೆ. ಅದೇ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ಘೋಷಣೆ ಆದ ಕೂಡಲೇ ಅಬ್ಬಾ, ಕೊನೆಗೂ ಸಿಕ್ಕಿತಾ ಎಂದು ಹೇಳಿದವರಿಗಿಂತ ಅವರಿಗೆ ಕೊಟ್ಟಿದ್ದು ಹೌದಾ ಎಂದು ಹೇಳಿಕೊಂಡವರು ಅನೇಕ ಜನ.
ಕೆಲವು ಕ್ಷೇತ್ರಗಳ ರಾಜಕೀಯ ಚಿತ್ರಣಗಳೇ ಹಾಗೆ. ಅಂಗಾರ ಅವರ ಎರಡು ಮೊಬೈಲುಗಳು ಎಷ್ಟೋ ಬಾರಿ ನೆಟ್ ವರ್ಕ್ ನಿಂದ ಹೊರಗಿರುತ್ತವೆ. ಕೆಲವು ಬಾರಿ ಸ್ವಿಚ್ಡ್ ಆಫ್ ಆಗಿರುತ್ತವೆ. ಆದರೂ ಅವರು ಆರು ಬಾರಿ ಗೆಲ್ಲುತ್ತಾರೆ. ಅದೇ ಸಿಟಿ ಶಾಸಕರುಗಳ ಮೊಬೈಲು ಒಂದು ಕ್ಷಣ ಸಿಗದೇ ಇದ್ದರೆ, ಸೋಶಿಯಲ್ ಮೀಡಿಯಾ ಮಲಗಿದ್ದರೆ ಅವರ ಮುಂದಿನ ಭವಿಷ್ಯವೇ ಡಲ್ಲಾಯಿತಾ ಎಂದು ಜನ ಅಂದುಕೊಳ್ಳುತ್ತಾರೆ. ಒಂದು ಬಾರಿ ಆಡಳಿತ ವಿರೋಧಿ ಅಲೆ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಎಂಟರಲ್ಲಿ ಏಳು ಜನ ಬಿಜೆಪಿ ಅಭ್ಯರ್ಥಿಗಳು ಸೋತಾಗಲೂ ಕನಿಷ್ಟ ಒಂದೂವರೆ ಸಾವಿರ ಅಂತರದಿಂದ ಅಂಗಾರ ಗೆದ್ದಿದ್ದರು. ಯಾಕೆಂದರೆ ಅದು ಸುಳ್ಯ ಮತ್ತು ಬಿಜೆಪಿಯ ಭದ್ರಕೋಟೆ. ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಅತೀ ಹೆಚ್ಚು ಲೀಡ್ ಕೊಡುವ ಕ್ಷೇತ್ರವದು. ಮೀಸಲು ಕ್ಷೇತ್ರವಾದ ಕಾರಣ ಸರಿಯಾಗಿ ನೋಡಿದರೆ ಅಲ್ಲಿ ಕಾಂಗ್ರೆಸ್ ಒಬ್ಬ ಸಮರ್ತಅಭ್ಯರ್ಥಿಯನ್ನು ಬೆಳೆಸಿಕೊಂಡು ಬರಲೇ ಇಲ್ಲ. ಕಳೆದ ನಾಲ್ಕೈದು ಬಾರಿ ಅಂಗಾರ ವಿರುದ್ಧ ಸ್ಪರ್ಧಿಸಿರುವ ಡಾ.ರಘು ಸಜ್ಜನರು. ಆದರೆ ಬಿಜೆಪಿಯ ಮತಬ್ಯಾಂಕನ್ನು ಒಡೆಯಲು ಅಸಮರ್ತರಾಗಿ ಹೋದರು. ಧನವಿಲ್ಲದೆ, ಲಾಬಿ ಇಲ್ಲದೆ, ಪ್ರಭಾವಿ ನಾಯಕರ ಶಿಫಾರಸ್ಸು ಇಲ್ಲದೆ ಇದ್ದರೂ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬೇಕಾದರೆ ಅದಕ್ಕೆ ಕಾರಣ ಯಡಿಯೂರಪ್ಪನವರನ್ನು ಒಂದಷ್ಟರ ಮಟ್ಟಿಗಾದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಿಸುತ್ತಿದೆ ಎನ್ನುವುದೇ ಸಾಕ್ಷಿ. ಇಲ್ಲದಿದ್ದರೆ ಆ ಸ್ಥಾನವನ್ನು ತಮ್ಮ ಆಪ್ತ ರೇಣುಕಾನಿಗೋ ಅಥವಾ ಮುನಿರತ್ನರಿಗೋ ಕೊಟ್ಟು ಯಡ್ಡಿ ಚೆನ್ನಾಗಿ ನಿದ್ರೆ ಮಾಡುತ್ತಿದ್ದರು. ಆದರೆ ಈಗ ಸದ್ಯ ಅವರಿಗೆ ಆ ಅವಕಾಶ ಸಿಗುವುದಿಲ್ಲ.
ಇನ್ನು ಸಚಿವ ಸ್ಥಾನಕ್ಕಾಗಿ ಬೆಂಗಳೂರಿನ ಏರ್ ಪೋರ್ಟ್ ನಿಂದ ದೆಹಲಿಯ ಅರುಣ್ ಸಿಂಗ್ ನಿವಾಸದ ತನಕ ಅಳುತ್ತಾ ಓಡಾಡುತ್ತಿರುವ ರೇಣುಕಾಚಾರ್ಯ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ, ಅದೇ ಪಕ್ಷದ ಶಾಸಕರಾಗಿಯೂ ಇದ್ದ ವಿಶ್ವನಾಥ್ ಅಲ್ಲಿಂದ ಮಹಾಸಾಧನೆಯೆನ್ನುವಂತೆ ಬಿಜೆಪಿಗೆ ಬಂದು ಇಲ್ಲಿ ಸೋತು ಕೊನೆಗೆ ವಿಧಾನಪರಿಷತ್ ಸದಸ್ಯರಾಗಿಯೂ ಇದ್ದಾರೆ. ಕೋರ್ಟ್ ಆದೇಶ ಇರುವ ಕಾರಣ ವಿಶ್ವನಾಥ್ ಅವರಿಗೆ ಸಚಿವಗಿರಿ ಕೊಡಲು ಆಗಲಿಲ್ಲ. ಇನ್ನು ಮುನ್ನಿರತ್ನಂ ಕಾಂಗ್ರೆಸ್ ಶಾಸಕರಾಗಿದ್ದಾಗ ಸಂಘದ ಹುಡುಗರ ಮೇಲೆ ಹಾಕಿರುವ ಕೇಸುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ ಎಂದು ಒಪ್ಪಿದ್ದರೂ ಹಿಂದಕ್ಕೆ ಪಡೆದಿಲ್ಲ. ಅದಕ್ಕೆ ಅವರಿಗೆ ಸಚಿವ ಸ್ಥಾನ ಕೊಡಲು ಆಗಿಲ್ಲ. ಇದ್ದುದ್ದರಲ್ಲಿಯೇ ಮುನಿರತ್ನಂ ಸ್ವಲ್ಪ ಗಂಭೀರವಾಗಿ ಏನೂ ವಿರುದ್ಧ ಹೇಳಿಕೆ ಕೊಡದೇ ಇದ್ದರಾದರೂ ಯತ್ನಾಳ್, ರೇಣುಕಾಚಾರ್ಯ, ವಿಶ್ವನಾಥ್ ಆಡುತ್ತಿರುವ ರೀತಿ ನೋಡಿದರೆ ಇಡೀ ಬಿಜೆಪಿಯೇ ಹೀಗೆ ಎಂದು ಅಂದುಕೊಳ್ಳುವಂತಾಗಿದೆ.
ಹಿಂದೆ ಬಿಜೆಪಿಯಲ್ಲಿ ಒಂದು ಶಿಸ್ತು ಇತ್ತು. ಪಕ್ಷದ ಶಾಸಕರು ಎಂದರೆ ಅದು ಸಂಘದ ಗರಡಿಯ ಹುಡುಗರಂತೆ ಇದ್ದರು. ಸಂಘ ಹಾಕಿದ ಗೆರೆಯನ್ನು ದಾಟಲು ಅವರು ಮುಂದಾಗುತ್ತಿರಲಿಲ್ಲ. ಆದರೆ ಯಾವಾಗ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎನ್ನುವ ಹುಚ್ಚು ಶುರುವಾಯಿತೋ ಆವತ್ತಿನಿಂದ ಹೊರಗಿನ ಕಸ ಒಳಗೆ ಬರಲು ಶುರುವಾಯಿತು. ಹಿಂದೆ ಎಲ್ಲರೂ ಸಂಘದ ಹುಡುಗರು. ಈಗ ಕಾಂಗ್ರೆಸ್ಸಿನಿಂದ ಬಂದವರು, ಜೆಡಿಎಸ್ ನಿಂದ ಬಂದವರು, ಅಧಿಕಾರಕ್ಕೆ ತಂದವರು, ಸಿಎಂ ಆಪ್ತರು, ಸಿಎಂ ಮಗನ ಆಪ್ತರು, ಸಿಡಿ ಇದ್ದವರು, ಸಿಡಿ ಇಲ್ಲದವರು, ಜಾತಿಬಲ ಇದ್ದವರು, ಬಕೆಟ್ ಹಿಡಿದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ!
Leave A Reply