• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಲೆಕ್ಟ್ರಿಕಲ್ ರಿಕ್ಷಾ ನಿಲ್ಲಲ್ಲ, ಬಾಡಿಗೆ 40 ಆಗಲ್ಲ!!

Tulunadu News Posted On October 14, 2022


  • Share On Facebook
  • Tweet It

ಮಂಗಳೂರಿನ ಆಟೋ ರಿಕ್ಷಾ ಚಾಲಕರ ಮತ್ತು ಜಿಲ್ಲಾಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ನಡೆದಿದೆ. ಅವರ ಬೇಡಿಕೆಯಲ್ಲಿ ಎರಡು ಪ್ರಮುಖವಾಗಿರುವಂತದ್ದು. ಒಂದು ಇಲೆಕ್ಟ್ರಿಕಲ್ ರಿಕ್ಷಾಗಳ ಸಂಖ್ಯೆ ಮಂಗಳೂರಿನಲ್ಲಿ ಅಂಕಿಅಂಶ ಇಲ್ಲದೆ ಜಾಸ್ತಿಯಾಗುತ್ತಿದೆ. ಇನ್ನೊಂದು ಮೀಟರ್ ದರ ಹೆಚ್ಚಳ ಮಾಡಿ. ಉಡುಪಿಯಲ್ಲಿ ಇರುವಂತೆ ಮಿನಿಮಮ್ 40 ರೂ ಮತ್ತು ಹೆಚ್ಚುವರಿ ಕಿ.ಮೀ 20 ರೂಪಾಯಿ ಮಾಡಿ ಎಂದು ಆಗ್ರಹಿಸಿದ್ದಾರೆ. ಈಗ ಇರುವ ವಿಷಯ ಏನೆಂದರೆ ಈ ಇಲೆಕ್ಟ್ರಿಕಲ್ ರಿಕ್ಷಾಗಳ ಸಂಖ್ಯೆ ಯಾಕೆ ಜಾಸ್ತಿಯಾಗುತ್ತಿವೆ ಎಂದರೆ ಇವುಗಳಿಗೆ ಯಾವುದೇ ಪರ್ಮಿಟ್ ಅಗತ್ಯ ಇಲ್ಲ. ಒಂದು ಸಾಂಪ್ರದಾಯಿಕ ಆಟೋ ಪರ್ಮಿಟ್ ಇಲ್ಲಿಯ ತನಕ 50 ಸಾವಿರದಿಂದ ಒಂದು ಲಕ್ಷದ ತನಕ ಮಾರಾಟವಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಸುಪ್ರೀಂಕೋರ್ಟಿನ ಆದೇಶದ ಅನ್ವಯ ಪರಿಸರದಲ್ಲಿ ಮಾಲಿನ್ಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಪ್ರೋತ್ಸಾಹಿಸಿತು. ಈ ಆಟೋ ರಿಕ್ಷಾ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ. ಅದರೊಂದಿಗೆ ಯಾರು ಕೂಡ ಈ ರಿಕ್ಷಾವನ್ನು ಖರೀದಿಸಿ ತಕ್ಷಣ ಬಾಡಿಗೆಗೆ ಇಳಿಯಬಹುದು. ಯಾವುದೇ ಪರ್ಮಿಟ್ ಅವಶ್ಯಕತೆ ಇಲ್ಲ. ನಿತಿನ್ ಗಡ್ಕರಿಯವರ ದೂರದೃಷ್ಟಿಯ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಯಿತು ಎಂದರೆ ಇವುಗಳ ಸಂಖ್ಯೆ ದಿನದಿಂದ ದಿನ ಏರುತ್ತಿದೆ. ಒಂದು ಕಡೆಯಲ್ಲಿ ಇದರಿಂದ ಉದ್ಯೋಗಾವಕಾಶಗಳು ಏರುತ್ತಿವೆ. ಇನ್ನೊಂದೆಡೆ ಪರಿಸರದ ಮಾಲಿನ್ಯ, ಶಬ್ದ ಮಾಲಿನ್ಯ ಕಡಿಮೆಯಾಗುತ್ತದೆ. ಪ್ರಯಾಣಿಕರ ದೃಷ್ಟಿಯಿಂದಲೂ ಇದು ಸುಖ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಇನ್ನು ಹೊಸ ಮಾಡೆಲ್ ಆಗಿರುವುದರಿಂದ ಜನ ಕೂಡ ಇದನ್ನು ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಸಾಂಪ್ರದಾಯಿಕ ರಿಕ್ಷಾಗಳು ಹೋಗಿ ಇಂತಹ ಇಲೆಕ್ಟ್ರಿಕಲ್ ರಿಕ್ಷಾಗಳು ಮಾತ್ರ ಉಳಿಯಲಿವೆ. ರಿಕ್ಷಾ ಚಾಲಕ – ಮಾಲೀಕರು ಏನು ಆಗ್ರಹಿಸುವುದೆಂದರೆ ಇಂತಹ ರಿಕ್ಷಾಗಳನ್ನು ನಿಲ್ಲಿಸಿ, ಇದರ ಓಡಾಟಕ್ಕೆ ಅಂಕುಶ ಹಾಕಿ. ಆದರೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಏನೂ ಭರವಸೆ ನೀಡಲಿ, ಆದರೆ ಒಂದಂತೂ ನಿಜ. ಇದು ಇವರ ಕೈಯಲ್ಲಿ ಇಲ್ಲ. ಯಾಕೆಂದರೆ ಇದು ಕೇಂದ್ರ ಸರಕಾರದ ಯೋಜನೆ ಮತ್ತು ಸುಪ್ರೀಂಕೋರ್ಟಿನ ಆದೇಶ. ನಾಳೆ ಇಲ್ಲಿನ ಡಿಸಿಯವರು ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ ” ಸರ್, ಇಲೆಕ್ಟ್ರಿಕಲ್ ರಿಕ್ಷಾಗಳು ಮಂಗಳೂರಿನಲ್ಲಿ ಓಡಾಡುವುದು ನಿಲ್ಲಿಸಬಹುದಾ?” ಎಂದರೆ “ನೀವು ಮೊದಲು ಅಲ್ಲಿಂದ ಬೇರೆ ಇಲಾಖೆಗೆ ವರ್ಗಾವಣೆ ಆಗಿಬಿಡಿ” ಎನ್ನುವ ಉತ್ತರ ಬರಬಹುದು. ಆದರೆ ಸಮಾಧಾನ ಮಾಡಲಿಕ್ಕೆ ಏನಿದೆ. ಅದೇ ಮಾಡಲಾಗಿದೆ.

ಇನ್ನು ಗ್ರಾಮಾಂತರ ಮತ್ತು ನಗರ ಎಂದು ಎಂಟು ವರ್ಷಗಳ ಹಿಂದೆ ರಿಕ್ಷಾಗಳ ಬಾಡಿಗೆಯ ನಡುವೆ ಲಕ್ಷ್ಮಣ ರೇಖೆ ಎಳೆಯಲಾಗಿದೆ. ಗ್ರಾಮಾಂತರ ರಿಕ್ಷಾಗಳು ಒಂದು ವೇಳೆ ಪ್ರಯಾಣಿಕರನ್ನು ಕರೆದುಕೊಂಡು ನಗರದೊಳಗೆ ಬಂದರೂ ಪ್ರಯಾಣಿಕರನ್ನು ಇಳಿಸಬೇಕಾದ ಕಡೆ ಇಳಿಸಿ ಮತ್ತೆ ಹಿಂತಿರುಗಬೇಕಾಗುತ್ತದೆ. ಅವು ಯಾವುದೇ ಕಾರಣಕ್ಕೂ ನಗರದೊಳಗೆ ಬಾಡಿಗೆ ಮಾಡುವಂತಿಲ್ಲ. ಆದರೆ ಗ್ರಾಮಾಂತರ ರಿಕ್ಷಾಗಳು ನಗರದೊಳಗೆ ಬಂದು ನಂತರ ಇಲ್ಲಿಯೇ ಬಾಡಿಗೆ ಮಾಡುವುದರಿಂದ ನಗರದ ರಿಕ್ಷಾ ಚಾಲಕರಿಗೆ ಏಟು ಬೀಳುತ್ತದೆ. ಅದನ್ನು ತಡೆಯುವುದು ಹೇಗೆ? ಅದಕ್ಕಾಗಿ ಆವತ್ತೆ ಅಂದರೆ 8 ವರ್ಷಗಳ ಮೊದಲು ಗ್ರಾಮಾಂತರ ರಿಕ್ಷಾಗಳಿಗೆ ಒಂದು ಹಸಿರು ಪಟ್ಟಿಯನ್ನು ರಿಕ್ಷಾದ ಎದುರು ಎದ್ದು ಕಾಣುವಂತೆ ಹಾಕಬೇಕು ಎನ್ನುವ ನಿಯಮ ತರಲಾಗಿತ್ತು. ಒಂದು ವೇಳೆ ಈ ಹಸಿರುಪಟ್ಟಿಯ ರಿಕ್ಷಾ ನಗರದಲ್ಲಿ ಬಾಡಿಗೆ ಮಾಡುತ್ತಿದ್ದರೆ ಅದರ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕು. ಆದರೆ ಗ್ರಾಮಾಂತರ ರಿಕ್ಷಾದವರು ಹಸಿರು ಪಟ್ಟಿ ಹಾಕಲ್ಲ, ಆರ್ ಟಿಒದವರು ಕ್ರಮ ತೆಗೆದುಕೊಳ್ಳಲ್ಲ. ಯಾರ ತಪ್ಪು. ರಿಕ್ಷಾದವರನ್ನು ಅಲ್ಲಲ್ಲಿ ತಡೆದು ನಿಲ್ಲಿಸಿ ನಗರವೋ, ಗ್ರಾಮಾಂತರವೋ ಎಂದು ನೋಡಲು ಆಗುತ್ತಾ? ಆದ್ದರಿಂದ ರಿಕ್ಷಾದವರೇ ಆತ್ಮಸಾಕ್ಷಿಯಿಂದ ಹಸಿರುಪಟ್ಟಿ ಹಾಕಿಸಬೇಕು. ಈ ಮೂಲಕ ನಗರ ಆಟೋದವರ ಹೊಟ್ಟೆಗೆ ಹೊಡೆಯಬಾರದು.

ಇನ್ನು ಮೂರನೇಯದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 210 ಕಡೆ ರಿಕ್ಷಾ ಪಾರ್ಕ್ ಗಳನ್ನು ನೋಟಿಫೈ ಮಾಡಲಾಗಿದೆ. ಆದರೆ ಪಾಲಿಕೆಯಲ್ಲಿ ಆರಂಭದಲ್ಲಿ ಮೇಯರ್ ಚುನಾವಣೆ ಆಗದೇ, ಕಮಿಟಿ ರಚನೆ ಆಗದೇ ಇದ್ದ ಕಾರಣ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಅದನ್ನು ತಕ್ಷಣ ಸರಿ ಮಾಡುವುದಾಗಿ ಸಭೆಯಲ್ಲಿ ಭರವಸೆ ನೀಡಲಾಗಿದೆ. ಈ ವಿಷಯ ಬಂದಾಗಲೂ ನಾನು ಸಭೆಯಲ್ಲಿ ನನ್ನ ಅಭಿಪ್ರಾಯ ಹೇಳಿದ್ದೇನೆ. ಅದೇನೆಂದರೆ ರಥಬೀದಿಯ ಟೆಂಪಲ್ ಸ್ಕ್ವೇರ್ ನಲ್ಲಿ ಈ ಹಿಂದೆ ರಿಕ್ಷಾ ಪಾರ್ಕ್ ಗಾಗಿ ಅಲಿಖಿತವಾಗಿ ದೇವಸ್ಥಾನದವರು ರಿಕ್ಷಾದವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಈಗ ಸ್ಮಾರ್ಟ್ ಸಿಟಿಯ ಕೆಲಸ ನಡೆದು ಆ ಪರಿಸರದ ಅಭಿವೃದ್ಧಿಯ ನಂತರ ರಿಕ್ಷಾ ಪಾರ್ಕಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಈಗ ರಿಕ್ಷಾದವರು ಹಿಂದಿನ ಮತ್ತು ಈಗಿನ ಎರಡು ಕಡೆ ರಿಕ್ಷಾ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಎದುರಾಗಿದೆ ಎಂದು ಹೇಳಿದ್ದೇನೆ. ದೇವಸ್ಥಾನದವರು ಇದನ್ನು ಈಗಾಗಲೇ ಪೊಲೀಸ್ ಸಹಾಯಕ ಆಯುಕ್ತರಿಗೆ ಲಿಖಿತವಾಗಿ ತಿಳಿಸಿದ್ದಾರೆ. ಆದರೂ ಏನೂ ಪ್ರಯೋಜನ ಆಗಿರಲಿಲ್ಲ. ಅದನ್ನು ಕೂಡ ತಕ್ಷಣಕ್ಕೆ ಸರಿ ಮಾಡುವುದಾಗಿ ಭರವಸೆ ಸಿಕ್ಕಿದೆ.

ಇನ್ನು ರಿಕ್ಷಾ ಬಾಡಿಗೆ ದರವನ್ನು ಈಗ ಇರುವ ಮೂವತ್ತರಿಂದ ನಾಲ್ವತ್ತು ರೂಪಾಯಿಗೆ ಏರಿಸಬೇಕು ಎಂದು ಬೇಡಿಕೆ ರಿಕ್ಷಾದವರಿಂದ ಕೇಳಿ ಬಂತು. ಉಡುಪಿಯಲ್ಲಿ 40 ರೂಪಾಯಿ ಏರಿಸಲಾಗಿದೆ ಎಂದು ಉದಾಹರಣೆ ಕೊಡಲಾಯಿತು. ಆದರೆ ಡಿಸಿಯವರು ಉಡುಪಿ ಮತ್ತು ಮಂಗಳೂರನ್ನು ಒಂದೇ ದೃಷ್ಟಿಯಲ್ಲಿ ನೋಡಲು ಆಗುವುದಿಲ್ಲ. ಅದು ನಗರಸಭೆ ಮತ್ತು ಇದು ಪಾಲಿಕೆ ಎಂದು ಸಮಜಾಯಿಷಿಕೆ ನೀಡಿ ಹೆಚ್ಚು ಮಾಡೋಣ. ಆದರೆ ಅಷ್ಟು ಅಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸಭೆ ನಡೆಯಿತು. ಇಲಾಖೆಯ ಕಡೆಯಿಂದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ರಿಕ್ಷಾದವರ ಕಡೆಯಿಂದ ನೂರಕ್ಕೂ ಹೆಚ್ಚು ಜನ ಬಂದಿದ್ದರು. ನಾಗರಿಕರ ಪರವಾಗಿ ಇದ್ದದ್ದು ಒಬ್ಬನೇ, ಅದು ನಾನು!

  • Share On Facebook
  • Tweet It


- Advertisement -


Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Tulunadu News September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Tulunadu News September 15, 2023
Leave A Reply

  • Recent Posts

    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
  • Popular Posts

    • 1
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search