• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಶ್ರೀನಿವಾಸ್ ಹೋಟೇಲಿನವರ ಹಟ ಗೆಲ್ಲುತ್ತಾ, ನ್ಯಾಯ ಗೆಲ್ಲುತ್ತಾ? ಈ ಬಾರಿ ನೋಡಲೇಬೇಕು!!

Hanumantha Kamath Posted On September 28, 2018
0


0
Shares
  • Share On Facebook
  • Tweet It

ಮಂಗಳೂರು ವೈಜ್ಞಾನಿಕವಾಗಿ ಬೆಳೆಯಬೇಕು ಎಂದು ಕಾರ್ಯಕ್ರಮಗಳ ವೇದಿಕೆಯಲ್ಲಿ ಭಾಷಣ ಮಾಡುವ ಗಣ್ಯರು ರಸ್ತೆ ಅಗಲ ಮಾಡಲಿಕ್ಕೆ ಒಂದಿಷ್ಟು ಜಾಗ ಬಿಟ್ಟು ಕೊಡಿ ಎಂದು ಹೇಳಿದರೆ ಆಗುವುದಿಲ್ಲ ಎಂದು ಹೇಳುತ್ತಾರೆ. ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡುವ ಶಿಕ್ಷಣ ಸಂಸ್ಥೆಗಳ ಮಾಲೀಕರು ರಸ್ತೆ ಅಗಲ ಮಾಡಲು ನೀವೊಬ್ಬರೇ ಅಡ್ಡಿ ಎಂದು ಹೇಳಿದರೆ ಅಧಿಕಾರಿಗಳನ್ನು ಬುಟ್ಟಿಗೆ ಹಾಕುವ ಅನೈತಿಕ ದಾರಿ ತುಳಿಯುತ್ತಾರೆ ವಿನ: ಜಾಗ ಬಿಟ್ಟುಕೊಡುವುದಿಲ್ಲ. ಟ್ರಾಫಿಕ್ ಜಾಮ್ ಆಗುವುದರಿಂದ ಅಂಬುಲೆನ್ಸ್ ಕೂಡ ಹೋಗಲು ಕಷ್ಟವಾಗುತ್ತದೆ ಎಂದು ಮೊಸಳೆ ಕಣ್ಣೀರು ಸುರಿಸುವ ಜನ ಆಸ್ಪತ್ರೆಗಳನ್ನು ಕಟ್ಟಿ ಹಣ ಮಾಡುತ್ತಾರೆ ವಿನ: ರಸ್ತೆಗೆ ಒಂದಿಷ್ಟು ಜಾಗ ಬಿಟ್ಟುಕೊಡಿ ಎಂದರೆ ಟ್ರಾಫಿಕ್ ಜಾಮ್ ಆದರೂ ನಾವು ಜಾಗ ಕೊಡಲ್ಲ ಎನ್ನುತ್ತಾರೆ. ಮಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಸಿಕ್ಕಾಪಟ್ಟೆ ಆಗಿದೆ, ಯಾರೂ ನೋಡುವವರಿಲ್ಲ ಎಂದು ದೂರು ಕೊಡುವ ಜನ ತಮ್ಮ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿ ಹಾಲ್ ತರಹ ಕಟ್ಟಿ ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಹಣ ಎಣಿಸುತ್ತಾರೆ. ಮಂಗಳೂರಿನ ಲಾಡ್ಜ್ ಗಳಲ್ಲಿ ಎಂತೆಂತಹ ಅವ್ಯವಹಾರ ನಡೆಯುತ್ತಿದೆ ಗೊತ್ತಾ ಎಂದು ಮಾತನಾಡಿಕೊಳ್ಳುವ ಜನ ತಮ್ಮ ಹೋಟೇಲಿನಲ್ಲಿಯೇ ಅಕ್ರಮವಾಗಿ ಹೆಚ್ಚುವರಿ ಅನಧಿಕೃತ ಅಂತಸ್ತು ಕಟ್ಟುತ್ತಾರೆ ವಿನ: ಬೇರೆಯವರಿಗೆ ಮಾದರಿಯಾಗುವ ಕೆಲಸ ಮಾಡುವುದಿಲ್ಲ. ಇಷ್ಟು ಪೀಠಿಕೆಯನ್ನು ನಾನು ಕೇವಲ ಒಂದೇ ಸಂಸ್ಥೆಯನ್ನು ಮನಸ್ಸಿನಲ್ಲಿ ಇಟ್ಟು ಬರೆಯುತ್ತಿರುವುದು. ಅದು ಬೇರೆ ಯಾವುದೂ ಅಲ್ಲ. ಶ್ರೀನಿವಾಸ್ ಹೋಟೇಲ್, ಶ್ರೀನಿವಾಸ್ ಕಾಲೇಜು, ಶ್ರೀನಿವಾಸ್ ಆಸ್ಪತ್ರೆ ಎನ್ನುವಂತಹ ವಿವಿಧ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀನಿವಾಸ್ ಗ್ರೂಪ್ ನವರ ಅನಧಿಕೃತ ಕಟ್ಟಡಗಳ ಪುರಾಣ ಇದು.

 

ಎಂತಹ ದುರಂಹಕಾರ ಮಾರಾಯ್ರೆ…

ಮಂಗಳೂರಿನ ಹೃದಯಭಾಗದಲ್ಲಿ ಗಣಪತಿ ಹೈಸ್ಕೂಲ್ ರಸ್ತೆ ಇದೆ. ನೀವು ಶರವು ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಹಳೆ ಅವಶೇಷದ ಕಟ್ಟಡ ವಿಮಲೇಶ್ ಹೋಟೇಲಿನ ಎದುರಿನ ರಸ್ತೆಯಲ್ಲಿ ಯಾವತ್ತಾದರೂ ಸಂಚರಿಸಿರಬಹುದು. ಅಲ್ಲಿ ರಸ್ತೆ ಅಗಲ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿ ತುಂಬಾ ವರುಷಗಳಾಗಿವೆ. ಆರು ವರ್ಷಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಡೆಯಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೀನಿವಾಸ್ ಹೋಟೇಲಿನ ಗೋಡೆ, ಗೇಟನ್ನು ಹಾಕಿದ್ದಾರೆ. ಈಗ ರಸ್ತೆ ಅಗಲ ಮಾಡಿಸಲು ಒಂದಿಷ್ಟು ಜಾಗ ಬಿಟ್ಟು ಕೊಡಿ ಎಂದು ಕೇಳಿದರೆ ರಾಜಕೀಯದ ಒತ್ತಡ ಹಾಕಿ ಒಂದು ಅಂಗುಲದಷ್ಟು ಜಾಗವನ್ನು ಕೂಡ ಬಿಡಲು ಶ್ರೀನಿವಾಸ್ ಹೋಟೇಲಿನ ಮಾಲೀಕರು ತಯಾರಿಲ್ಲ. ಹಾಗಂತ ಪಾಲಿಕೆ ಇವರಿಂದ ಉಚಿತವಾಗಿ ಜಾಗವನ್ನು ಕೇಳುತ್ತಿಲ್ಲ. ಅದರ ಬದಲಿಗೆ ಜಾಗ ಬಿಟ್ಟವರಿಗೆ ಟಿಡಿಆರ್ ಸಿಗುತ್ತದೆ. ಆದರೆ ಶ್ರೀನಿವಾಸ್ ಗ್ರೂಪಿನವರಿಗೆ ರಸ್ತೆ ಅಗಲವಾಗಿ ವಾಹನಗಳ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವುದಕ್ಕಿಂತ ತಮ್ಮ ಜಾಗದ ಮೇಲೆ ಪ್ರೀತಿ ಹೆಚ್ಚು. ಆದ್ದರಿಂದ ಇವತ್ತಿಗೂ ಆ ರಸ್ತೆ ಅಗಲವಾಗಲು ಈ ಸಂಸ್ಥೆಯವರು ದೊಡ್ಡ ತಡೆಗೋಡೆಯಂತೆ ನಿಂತಿದ್ದಾರೆ.

 

ಇವರ ಅನಧಿಕೃತ ಕಟ್ಟಡಗಳ ಲಿಸ್ಟ್ ಇಲ್ಲಿದೆ ನೋಡಿ…

ಹಾಗಂತ ಇವರಿಗೆ ತಮ್ಮ ಜಾಗದ ಮೇಲೆ ಮಾತ್ರ ಪ್ರೀತಿ ಅಂತ ಅಂದುಕೊಳ್ಳಬೇಡಿ. ಇವರು ಧರ್ಮಕ್ಕೆ ಸಿಕ್ಕಿದರೆ ಕಾನೂನುಗಳನ್ನು ಮೀರಿ ಅಕ್ರಮವಾಗಿ ಗಾಳಿಯಲ್ಲಿ ಕೂಡ ಜಾಗವನ್ನು ನುಂಗಬಲ್ಲರು. ಹೇಗೆ ಅಂದರೆ ಜಿಎಚ್ ಎಸ್ ರಸ್ತೆಯಲ್ಲಿರುವ ಹೋಟೇಲ್ ಶ್ರೀನಿವಾಸ್ ನಲ್ಲಿ ಟೇರೆಸ್ ಇರುವ ಕಡೆ ಅನಧಿಕೃತವಾಗಿ ಮತ್ತೊಂದು ಅಂತಸ್ತನ್ನು ಇವರು ಕಟ್ಟಿದ್ದಾರೆ.
ಇನ್ನೊಂದು ಕಡೆ ಹೋಟೇಲ್ ಶ್ರೀನಿವಾಸ್ ಇದರ ಪಾರ್ಕಿಂಗ್ ಜಾಗದಲ್ಲಿ ಹಾಲ್ ತರಹ ಕಟ್ಟಿ ಅದನ್ನು ಕೂಡ ಬಾಡಿಗೆಗೆ ನೀಡಲಾಗುತ್ತದೆ. ಇನ್ನು ಅದೇ ರಸ್ತೆಯಲ್ಲಿರುವ ಫೆಲಿಕ್ಸ್ ಪೈ ಬಜಾರ್ ನಲ್ಲಿ ಇವರ ಆಡಳಿತ ಕಚೇರಿ ಇದೆ. ಆ ಕಟ್ಟಡದಲ್ಲಿ ಇವರು ಒಂದು ಅಂತಸ್ತು ಹೆಚ್ಚುವರಿಯಾಗಿ ಅನಧಿಕೃತವಾಗಿ ಕಟ್ಟಿದ್ದಾರೆ. ಇವರ ಅನಧಿಕೃತ ನಿರ್ಮಾಣಗಳು ಇಷ್ಟಕ್ಕೆ ಮುಗಿಯಲಿಲ್ಲ. ಮಂಗಳೂರಿನ ಹೊರವಲಯದ ಮುಕ್ಕದಲ್ಲಿ ಇವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದೆ. ಅಲ್ಲಿರುವ ಹಾಸ್ಟೆಲ್ ಗಳ ಮೂರು ಕಟ್ಟಡಗಳ ಮೂರು ಅಂತಸ್ತುಗಳು ಪಕ್ಕಾ ಅನಧಿಕೃತ. ಇವರು ಹೀಗೆ ಅನಧಿಕೃತವಾಗಿ ಬಿಲ್ಡಿಂಗ್ ಗಳನ್ನು ಕಟ್ಟುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿಲ್ಲ ಅಂತ ಅಲ್ಲ. 2016 ರಲ್ಲಿ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ 321 (1) ರ ಪ್ರಕಾರ ಶ್ರೀನಿವಾಸ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಆದರೆ ಇಲ್ಲಿಯ ತನಕ ಯಾವುದೇ ಕ್ರಮ ಆಗಿಲ್ಲ. ಅದಕ್ಕಿಂತ ಮೊದಲು 2014 ರಲ್ಲಿ ಫೆಲಿಕ್ಸ್ ಬಜಾರ್ ನಲ್ಲಿರುವ ಆಡಳಿತ ಕಚೇರಿಯ ಅನಧಿಕೃತ ಅಂತಸ್ತಿನ ಬಗ್ಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅದಕ್ಕೆ ಇಲ್ಲಿಯ ತನಕ ಉತ್ತರ ಇಲ್ಲ.

ಇನ್ನು ಪಾಂಡೇಶ್ವರದ ಮಂಗಳಾದೇವಿ ರಸ್ತೆಯಲ್ಲಿರುವ ಇವರ ಶ್ರೀನಿವಾಸ್ ಕಾಲೇಜಿನಲ್ಲಿರುವ ಕಟ್ಟಡಗಳದ್ದು ಕೂಡ ಇಂತಹುದ್ದೇ ಕಥೆ. ಒಂದು ವೇಳೆ ಯಾರಾದರೂ ಆರ್ಥಿಕವಾಗಿ, ರಾಜಕೀಯವಾಗಿ ಪ್ರಭಾವಿಗಳಲ್ಲದ ಜನಸಾಮಾನ್ಯರು ಒಂದು ಸಣ್ಣ ಕೋಣೆಯನ್ನು ಹೆಚ್ಚು ಕಟ್ಟಿದರೆ ಈ ಪಾಲಿಕೆಯವರು ಸುಮ್ಮನೆ ಬಿಡುತ್ತಿದ್ದರಾ? ಅದೇ ಶ್ರೀಮಂತರು ಮೂರು ಮೂರು ಹೆಚ್ಚುವರಿ ಅಂತಸ್ತು, ಮೂರು ಬಿಲ್ಡಿಂಗ್ ಕಟ್ಟಿದರೂ ಮೌನವಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಕುಳಿತಿರುವುದು ಯಾಕೆ? ಈ ಶ್ರೀನಿವಾಸ್ ಸಂಸ್ಥೆಯವರು ಪಾಲಿಕೆಯಲ್ಲಿ ಯಾರೇ ಕಮೀಷನರ್ ಆಗಿ ಬಂದರೂ ಅವರನ್ನು ವಶೀಲಿಬಾಜಿ ಮಾಡುವುದರಲ್ಲಿ ನಿಸ್ಸೀಮರು. ಕೊನೆಗೂ ಕಾಂಗ್ರೆಸ್ಸಿನ ಕೊನೆಯ ಅವಧಿಯ ಮೇಯರ್ ತಮ್ಮ ಅಧಿಕಾರಾವಧಿಯ ಕೊನೆಯ ತಿಂಗಳುಗಳು ಬಾಕಿ ಇರುವಾಗ ಏನಾದರೂ ಮಾಡಬಹುದಾ ಎನ್ನುವ ನಿರೀಕ್ಷೆ ಇದೆ. ಗುರುವಾರ ಮೇಯರ್ ಭಾಸ್ಕರ ಮೊಯಿಲಿ, ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ ಅವರೊಂದಿಗೆ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಜನರ ಉಪಯೋಗವಾಗುವ ಯಾವುದೇ ಹೋರಾಟದಲ್ಲಿ ಎಷ್ಟೇ ಪ್ರಭಾವಿಗಳ ವಿರುದ್ಧ ಹೋರಾಡಲು ನಾನಂತೂ ಇದ್ದೇ ಇದ್ದೇನೆ. ಆದಷ್ಟು ಬೇಗ ನಮ್ಮ ಹೋರಾಟಕ್ಕೆ ಜಯ ದೊರೆತು ಶ್ರೀನಿವಾಸ್ ಹೋಟೇಲಿನವರು ಪಾಲಿಕೆಗೆ ಶರಣಾಗುತ್ತಾರಾ? ಕಾದು ನೋಡೋಣ!

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Hanumantha Kamath May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search