ಏನೇ ಮಾಡಿದರೂ ನಮ್ಮವರದ್ದು ಕಲ್ಲಿನ ಮೇಲೆ ಸ್ಯಾನಿಟೈಜರ್ ಸುರಿದಂತೆ!!

ಯಾವಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗುರುವಾರದಿಂದ ಒಂದು ವಾರ ಲಾಕ್ ಡೌನ್ ಎಂದು ಘೋಷಣೆ ಮಾಡಿದರೋ ಅದರ ನಂತರ ಈ ಲಾಕ್ ಡೌನ್ ಅಗತ್ಯ ಇದೆಯಾ, ಇಲ್ಲವಾ ಎನ್ನುವುದರ ಬಗ್ಗೆ ಚರ್ಚೆ ಶುರುವಾಗುತ್ತಿದೆ. ಇಲ್ಲಿ ಉದ್ಭವವಾಗುವುದು ಮೂರು ಪ್ರಶ್ನೆಗಳು: ಒಂದನೇಯದ್ದು ಲಾಕ್ ಡೌನ್ ಅಗತ್ಯ ಏನಿತ್ತು? ಇದರ ಅಗತ್ಯ ಇತ್ತಾ? ಯಾಕೆ ಅಗತ್ಯ ಇಲ್ಲ? ಸರಿಯಾಗಿ ನೋಡಿದರೆ ಒಂದು ವಾರ ಲಾಕ್ ಡೌನ್ ನಂತರ ನೀವು ನೋಡಿದರೂ ಅಂತದ್ದೇನೂ ಬದಲಾವಣೆ ಆಗಲಿಕ್ಕಿಲ್ಲ. ಯಾಕೆಂದರೆ ನಮ್ಮ ಜನ ಈಗ ಹೇಗಿದ್ದಾರೋ ನಂತರ ಕೂಡ ಹಾಗೇ ಇರುತ್ತಾರೆ. ಈಗಲೂ ಸಾಮಾಜಿಕ ಅಂತರ ಇಲ್ಲ. ನಂತರವೂ ಇರುವುದಿಲ್ಲ. ಈಗಲೂ ಮಾಸ್ಕ್ ಇಲ್ಲ. ಮುಂದೆ ಮರೆತೇ ಹೋಗಬಹುದು. ಈಗಲೂ ಸ್ಯಾನಿಟೈಝರ್ ಇಲ್ಲ. ನಂತರ ಹಾಗಂದ್ರೆ ಏನು ಎನ್ನುವ ಕಾಲ ಬರಬಹುದು. ಆದ್ದರಿಂದ ಈ ನಡುವೆ ಹಣ ಇದ್ದವರು ಮನೆಯಲ್ಲಿ ತಿಂದು, ಕುಡಿದು, ಟಿವಿ ನೋಡಿ, ಇಸ್ಪೀಟ್, ಕ್ಯಾರಂ ಆಡಿ ಸಮಯ ಪಾಸ್ ಮಾಡಬಹುದು. ಮಧ್ಯಮ ವರ್ಗದವರು ಇದ್ದದ್ದರಲ್ಲಿ ಅಕ್ಕಪಕ್ಕದ ಮನೆಯವರ ಜೊತೆ ಕಷ್ಟಸುಖ ಹಂಚಿಕೊಂಡು ದಿನ ದೂಡಬಹುದು. ಬಡವರು ಧಣಿಗಳ ಬಳಿಯೋ, ಸಾಲ ಕೊಡುವವರ ಬಳಿಯೋ ಸಾಲ ಪಡೆದು ದಿನ ತಳ್ಳಬಹುದು. ಆದರೆ ಲಾಕ್ ಡೌನ್ ನಂತರದ ಬುಧವಾರದ ಬಳಿಕ ನೀವು ನೋಡಿ ಮತ್ತೆ ನಾವು ಯಥಾ ಪ್ರಕಾರ ಮೂಗಿನ ಕೆಳಗೆ ಮಾಸ್ಕ್ ಹಾಕಿ ಹೆಲ್ಮೆಟ್ ಹಾಕದೇ ಸ್ಕೂಟರ್ ಓಡಿಸುತ್ತಾ, ಕಡಿಮೆ ಬೆಲೆಗೆ ಮೀನು ಮಾರುವ ಅಂಗಡಿಯವನ ಬಳಿ ರಶ್ಶಿನಲ್ಲಿ ನಿಂತು ನೂರಕ್ಕೆ ಇನ್ನೊಂದು ಎಕ್ಸಟ್ರಾ ಬಂಗುಡೆ ಕೊಡಿ ಎಂದು ಚರ್ಚೆ ಮಾಡುತ್ತಿರುತ್ತೇವೆ. ಕಥೆ ಇಷ್ಟೇ.
ನಮಗೆ ಸಾಂಕ್ರಾಮಿಕ ರೋಗವೊಂದನ್ನು ಹೇಗೆ ಎದುರಿಸಬೇಕು ಎನ್ನುವ ಕಲ್ಪನೆ ಇಲ್ಲ. ನಾವು ಶಾಲೆಗೆ ಹೋಗುವಾಗ ಇದ್ದ ಪಠ್ಯಪುಸ್ತಕದಲ್ಲಿ ಕೊರೊನಾ ಇರಲೇ ಇಲ್ಲ. ಯಾವಾಗ ಕೊರೊನಾ ಬಂತೋ ಆಗ ಅದನ್ನು ನಿಯಂತ್ರಿಸಲು ಏನು ಮಾಡಬೇಕು ಎನ್ನುವುದು ನಮಗೆ ಗೊತ್ತೇ ಇರಲಿಲ್ಲ. ಅದು ಒಬ್ಬ ಸೊಂಕೀತ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹರಡಬಾರದೆಂದರೆ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬರಬಾರದು, ಅವನು ಮುಟ್ಟಿದ್ದನ್ನು ಇವನು ಮುಟ್ಟಬಾರದು, ಅವನ ಸೀನು ಇವನ ಮೇಲೆ ಬೀಳಬಾರದು ಎಂದು ಹೇಳಲಾಗಿತ್ತು. ಹಾಗಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಉತ್ತರ ಬೇಕಾದಾಗ ” ಕೊರೊನಾ ಯಾರ ಸಂಪರ್ಕಕ್ಕೂ ಸಿಗದೇ ರಸ್ತೆ ಮಧ್ಯದಲ್ಲಿ ಅನಾಥವಾಗಿ ಬಿದ್ದು ಸಾಯಬೇಕು, ಅದಕ್ಕೆ ಯಾರ ಮನೆಯ ಪ್ರವೇಶ ಕೂಡ ಸಿಗಬಾರದು” ಎಂದು ಹೇಳಿ ಮೊತ್ತ ಮೊದಲ ಬಾರಿಗೆ ದೇಶಕ್ಕೆ ದೇಶವೇ ಲಾಕ್ ಡೌನ್ ಮಾಡಲಾಯಿತು. ಇದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗದೇ ಇದ್ದರೂ ದೇಶದಲ್ಲಿ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಸರಕಾರಕ್ಕೆ ಸಮಯ ಸಿಕ್ಕಿತ್ತು. ನಂತರ ಕೊರೊನಾ ಹೆಚ್ಚಾಗಲು ಇನ್ನೊಂದು ಕಾರಣವಾದದ್ದು ಹೊರ ದೇಶಗಳಿಂದ ಬಂದ ನಮ್ಮವರು. ಬರಬೇಡಿ ಎನ್ನುವ ಸ್ಥಿತಿಯಲ್ಲಿ ನಾವಿರಲಿಲ್ಲ. ಯಾಕೆಂದರೆ ಅವರು ನಮ್ಮವರೇ. ಈ ನಡುವೆ ಕೋವಿಡ್ 19 ಎನ್ನುವ ವೈರಸ್ ಸೊಂಕೀತರ ಒಳಗೆ ನುಗ್ಗಿ ಅಲ್ಲಿ ಈಗಾಗಲೇ ಹಲವು ವರ್ಷಗಳಿಂದ ಮಲಗಿದ್ದ ಬೇರೆ ಕಾಯಿಲೆಗಳೊಂದಿಗೆ ಜಗಳ ಮಾಡಿ ರೋಗಿಯನ್ನು ತಿಂದು ಮುಗಿಸುತ್ತಿದ್ದಂತೆ ನಾವು ಎಚ್ಚರಗೊಂಡೆವು. ನಾವು ಜಾಗ್ರತರಾಗುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ಜನ ಕೋವಿಡ್ 19 ರೋಗದಿಂದ ಇಹಲೋಕ ಬಿಟ್ಟು ಹೋಗಿ ಆಗಿತ್ತು. ಅದರಲ್ಲಿ ಕೋವಿಡ್ 19 ನಿಂದ ಸತ್ತವರು 50 ರಲ್ಲಿ 4 ಜನ ಮಾತ್ರ ಎಂದು ಜಿಲ್ಲಾಧಿಕಾರಿಗಳು ನಮ್ಮಲ್ಲಿ ಧೈರ್ಯ ತುಂಬಿದರಾ ಅಥವಾ ನಿಮ್ಮ ಒಳಗೆ ಬೇರೆ ರೋಗಗಳಿದ್ದು ನೀವು ಸತ್ತರೆ ನಮ್ಮ ತಲೆಗೆ ಕಟ್ಟಬೇಡಿ ಎಂದು ಎಚ್ಚರಿಕೆ ಕೊಟ್ಟರಾ ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಗೆ ಸಿದ್ಧವಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಎಪ್ರಿಲ್, ಮೇ, ಜೂನ್ ನಲ್ಲಿ ಲೂಟಲಾಗದೇ ಇದ್ದ ಹಣವನ್ನು ಜುಲೈ ಒಂದೇ ತಿಂಗಳಲ್ಲಿ ಬಡ್ಡಿ ಸಮೇತ ವಸೂಲಿ ಮಾಡಲು ಹೊರಟವರಂತೆ ವ್ಯಾಪಾರಕ್ಕೆ ನಿಂತರು. ಅದು ಚರ್ಚೆಗೆ ಬಂದು ಇನ್ನೇನೂ ಇದರಿಂದ ಜಿಲ್ಲಾಡಳಿತದ ಹೆಸರು ಹಾಳಾಗುತ್ತದೆ ಎನ್ನುವಾಗ ಸಚಿವ ಕೋಟಾ ಯಾವ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ಉಚಿತ, ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದರು. ಇದು ಮುಂದಿನ ದಿನಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಜಾರಿಗೆ ಬಂದರೆ ಜಿಲ್ಲೆಯ ಜನಪ್ರತಿನಿಧಿಗಳ ಮರ್ಯಾದೆ ಉಳಿಯುತ್ತದೆ. ಇಲ್ಲದಿದ್ದರೆ ಅದನ್ನೇ ಹಿಡಿದು ಮಾಧ್ಯಮಗಳು ಟೀಕೆಗೆ ನಿಲ್ಲುತ್ತವೆ. ಕೇಳಿದರೆ ರೈಲಿನ ಬೋಗಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಮಾಡಿದ್ದು ಎಲ್ಲಿಗೆ ಹೋಯಿತು ಎಂದು ಕೆಲವರು ಕೇಳುತ್ತಿದ್ದಾರೆ. ಅದರೊಂದಿಗೆ ಸಿದ್ಧರಾಮಯ್ಯ ಕೊರೊನಾ ಅವಧಿಯಲ್ಲಿ ಸರಕಾರದಿಂದ ಖರ್ಚು ಮಾಡಿದ ಲೆಕ್ಕ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಅತೃಪ್ತರನ್ನು ಕಾಡಿ, ಬೇಡಿ ಅಧಿಕಾರಕ್ಕೆ ಬಂದ ಯಡ್ಡಿಜಿಗೆ ಈ ವಯಸ್ಸಿನಲ್ಲಿ ಇದನ್ನೆಲ್ಲಾ ನಿಭಾಯಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಯುವ ಸಚಿವರಾದ ಡಾ.ಸುಧಾಕರ್, ಡಾ.ಅಶ್ವಥ ನಾರಾಯಣ, ಅಶೋಕ್ ಕೈಯಲ್ಲಿ ಜವಾಬ್ದಾರಿ ಕೊಟ್ಟು ಅವರು ಯಯಾತಿ ಪುಸ್ತಕ ಓದುತ್ತಿದ್ದಾರೆ. ಯಡ್ಡಿಯನ್ನು ಸುಮ್ಮನೆ ಮಲಗಲು ಬಿಡಬಾರದು ಎಂದುಕೊಂಡಿರುವ ಸಿದ್ದು, ಯಡ್ಡಿಗೆ ಟೆನ್ಷನ್ ಕೊಡಲು ಲೆಕ್ಕ ಕೇಳುತ್ತಿದ್ದಾರೆ. ಯಡ್ಡಿ ಮಳೆಗಾಲದಲ್ಲಿಯೂ ಬೆವರುತ್ತಿದ್ದಾರೆ. ಹಾಗಂದ್ರೆ, ಉಳಿದದ್ದನ್ನು ನಾಳೆ ಹೇಳುತ್ತೇನೆ!
Leave A Reply