ಧನ್ಯವಾದ ಕೋಟಾ, ಫ್ರೀ ಘೋಷಣೆ ಯಶಸ್ವಿಯಾಗಿ ಅನುಷ್ಠಾನಕ್ಕೂ ಬರಲಿ!!
Posted On July 16, 2020
ಪ್ರೈವೇಟ್ ಆಸ್ಪತ್ರೆಗಳಿಗೆ ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಅನುಮತಿ ನೀಡಿದ ನಂತರ ನಮ್ಮ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಯಿತು ಎನ್ನುವುದು ಪ್ರತಿಯೊಬ್ಬರ ಅನಿಸಿಕೆ. ಆಸ್ಪತ್ರೆಯವರು ಜನರಿಂದ ಹಣವನ್ನು ದೋಚಲು ಮನಸ್ಸಿಗೆ ಬಂದಂತೆ ಹಣವನ್ನು ವಿಧಿಸುತ್ತಾರೆ ಎನ್ನುವುದು ಎಲ್ಲರ ಅಭಿಪ್ರಾಯ. ಇದಕ್ಕೆ ಒಂದೇ ಪರಿಹಾರ “ಕೆಲವು ದಿನ ಲಾಕ್ ಡೌನ್” ಎನ್ನುವುದನ್ನು ಎಲ್ಲರೂ ಅಭಿಪ್ರಾಯ ಪಟ್ಟಿದ್ದರು. ಈಗ ಲಾಕ್ ಡೌನ್ ಜಾರಿಗೆ ಬರುತ್ತಿದ್ದಂತೆ ನಮ್ಮ ಹೊಟ್ಟೆಪಾಡಿನ ವಿಷಯ ಎಂದು ಕೆಲವರು ಹೇಳುತ್ತಿದ್ದಾರೆ. ಅದು ನಿಜವಿರಬಹುದು.
ಆದರೆ ಜೀವಕ್ಕಿಂತ ಉದ್ಯೋಗ ಮುಖ್ಯವಾ ಎನ್ನುವ ಪ್ರಶ್ನೆ ಬಂದಾಗ ಯಾವ ವ್ಯಕ್ತಿ ತಾನೆ ತನಗೆ ಜೀವ ಬೇಡಾ, ಉದ್ಯೋಗ ಇರಲಿ ಎನ್ನುತ್ತಾನೆ. ಚಾನ್ಸ್ ಕಡಿಮೆ. ಕೆಲವರು ಇದ್ದರೂ ಇರಬಹುದು. ಆದರೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಯಾವಾಗ ಕೋವಿಡ್ 19 ಸೋಂಕಿತರಿಗೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ ಎಂದು ಹೇಳಿದ ನಂತರ ಅನೇಕ ಬಡಹೃದಯಗಳು ಬಚಾವ್ ಎಂದು ಉದ್ಘಾರ ತೆಗೆದದ್ದು ಅಕ್ಷರಶ: ನಿಜ. ಇವತ್ತಿನ ದಿನಗಳಲ್ಲಿ ಒಂದು ಖಾಸಗಿ ಆಸ್ಪತ್ರೆಗೆ ಕೋವಿಡ್ 19 ಚಿಕಿತ್ಸೆಗೆ ಒಬ್ಬ ಎಪಿಎಲ್ ಕಾರ್ಡ್ ಇದ್ದವ ದಾಖಲಾದರೆ ಆತನ ಕಿಡ್ನಿ ಅಡವು ಇಟ್ಟು ಬಿಲ್ ಪಾವತಿಸಬೇಕು ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಎಪಿಎಲ್ ವರ್ಗದ ಎಲ್ಲರೂ ನಿರುಮ್ಮಳರಾಗಿದ್ದಾರೆ. ಯಾಕೆಂದರೆ ಎಪಿಎಲ್ ಇದ್ದವರೆಲ್ಲರೂ ಅನುಕೂಲಸ್ಥರಲ್ಲ. ಬಿಪಿಎಲ್ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಎಪಿಎಲ್ ಕಾರ್ಡ್ ಇರಬಹುದು ಅಥವಾ ಕೆಲವರ ಬಳಿ ಕಾರ್ಡೇ ಇಲ್ಲದಿರಬಹುದು. ಆದರೆ ಅಂತವರು ಕೂಡ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಜೀವನದ ಸಂಧ್ಯಾಕಾಲದಲ್ಲಿ ಇರಲಿ ಎಂದು ತೆಗೆದಿಟ್ಟಿದ್ದ ಅಷ್ಟೂ ಹಣವನ್ನು ಕೂಡ ಆಸ್ಪತ್ರೆಯವರಿಗೆ ಕಟ್ಟಬೇಕಿತ್ತು. ಆ ನಿಟ್ಟಿನಲ್ಲಿ ಕೋಟಾ ತೆಗೆದುಕೊಂಡಿರುವ ನಿರ್ಧಾರ ಮೆಚ್ಚಬೇಕಾಗಿರುವುದು ಮತ್ತು ಅನೇಕ ವರ್ಷಗಳ ತನಕ ಜ್ಞಾಪಕದಲ್ಲಿ ಇರುವಂತದ್ದು. ಆದರೆ ಅದರೊಂದಿಗೆ ಒಂದಿಷ್ಟು ಸ್ಪಷ್ಟನೆಯನ್ನು ಕೂಡ ಸಚಿವರು ನೀಡಬೇಕು. ಅದೇನೆಂದರೆ ಖಾಸಗಿ ಮೆಡಿಕಲ್ ಕಾಲೇಜು ಇರುವ ಎಲ್ಲಾ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಮೆಡಿಕಲ್ ಕಾಲೇಜು ಇರುವ ಕೆಲವು ಆಸ್ಪತ್ರೆಗಳಿಗೆ ಒಂದಕ್ಕಿಂತ ಹೆಚ್ಚು ಶಾಖೆಗಳಿರುತ್ತವೆ. ಉದಾಹರಣೆಗೆ ಕೆಎಂಸಿಯನ್ನೇ ತೆಗೆದುಕೊಳ್ಳಿ. ಅವರಿಗೆ ಅಂಬೇಡ್ಕರ್ ಸರ್ಕಲ್ ಬಳಿ ಕಾರ್ಪೋರೇಟ್ ಆಸ್ಪತ್ರೆ ಇದೆ. ಅದು ಹಣ ನೀರಿನಂತೆ ನೀಡಬಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲ ಬ್ರಾಂಚ್. ಆದರೆ ಇಲ್ಲಿ ಕೋವಿಡ್ 19 ಸೊಂಕಿತರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಕೊಡಲು ಸರಕಾರ ಸೂಚಿಸಿಲ್ಲ. ಅತ್ತಾವರ ಕೆಎಂಸಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಇನ್ನು ಯೆನಪೋಯಾ ಆಸ್ಪತ್ರೆಗೆ ಕೊಡಿಯಾಲ್ ಬೈಲ್ ನಲ್ಲಿ ದೊಡ್ಡ ಆಸ್ಪತ್ರೆ ಇದೆ. ಆದರೆ ಅಲ್ಲಿ ಕೋವಿಡ್ 19 ಸೋಂಕಿತರಿಗೆ ಉಚಿತ ಚಿಕಿತ್ಸೆ ಕೊಡುತ್ತಿಲ್ಲ. ಬೇಕಾದರೆ ಮಂಗಳೂರಿನ ಗಡಿಯಲ್ಲಿರುವ ದೇರಳಕಟ್ಟೆಗೆ ಹೋಗಬೇಕು. ಇದನ್ನು ಜಿಲ್ಲಾಡಳಿತ ಸರಿ ಮಾಡಬಹುದಾ ಎನ್ನುವುದು ನಮ್ಮ ಅನೇಕರ ಪ್ರಶ್ನೆ. ಒಂದು ವೇಳೆ ಸಾಧ್ಯವಿಲ್ಲವಾದರೆ ಜನಸಾಮಾನ್ಯರಲ್ಲಿ ಇರುವ ಗೊಂದಲವನ್ನು ಪರಿಹರಿಸಿ ಎಲ್ಲಿ, ಯಾವ ಆಸ್ಪತ್ರೆಯ ಯಾವ ಶಾಖೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಲಿ.
ಇನ್ನು ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಕೂಡ ತಮ್ಮ ಹೇಳಿಕೆಯಲ್ಲಿ “ಒಂದು ವೇಳೆ ಖಾಸಗಿ ಆಸ್ಪತ್ರೆಯವರು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬಿಲ್ ಹಾಕಿದರೆ ಕೇಸು ಹಾಕಿ” ಎಂದು ಹೇಳಿದ್ದಾರೆ. ಆದರೆ ದೂರು ಎಲ್ಲಿ ದಾಖಲಿಸುವುದು. ಅದರ ಖರ್ಚು ನೀಡುವುದು ಯಾರು? ಒಂದು ವೇಳೆ ಸಂಸದರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರಾ ಎನ್ನುವುದು ಪ್ರಶ್ನೆ. ಇನ್ನು ಕೋವಿಡ್ 19 ರಲ್ಲಿ ಯಾವ ಚಿಕಿತ್ಸೆಗೆ ಎಷ್ಟು ದರ ಎಂದು ಎಲ್ಲಿ ಹಾಕಲಾಗಿದೆ. ಅಂತಹ ಒಂದು ದರಪಟ್ಟಿಯನ್ನು ಬರೆದು ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಹಾಕುವುದು ಒಳ್ಳೆಯದು. ಯಾಕೆಂದರೆ ಒಂದು ವೇಳೆ ನೇರವಾಗಿ ಉಚಿತ ಸೌಲಭ್ಯಗಳಿಲ್ಲದ ಆಸ್ಪತ್ರೆಗಳಿಗೆ ಕೋವಿಡ್ 19 ಸೋಂಕಿತರು ದಾಖಲಾದರೆ ಅವರನ್ನು ಲೂಟುವಂತಹ ಕೆಲಸವನ್ನು ಆಸ್ಪತ್ರೆಯವರು ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಲಿ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply