ಮಹಾರಾಷ್ಟ್ರದಲ್ಲೇ ಕುಳಿತು ಆ ಸರಕಾರವನ್ನು ಅಲ್ಲಾಡಿಸಿದ ಒನ್ ಮ್ಯಾನ್ ಆರ್ಮಿ ಅರ್ನಬ್!!

ಅರ್ನಬ್ ಗೋಸ್ವಾಮಿ ಎಂಬ ಪತ್ರಕರ್ತ ಹಾಗೂ ರಾಷ್ಟ್ರೀಯ ಟಿವಿವಾಹಿನಿಯ ಮುಖ್ಯಸ್ಥನನ್ನು ಬೆಳಿಗ್ಗೆ ಅವರ ಮುಂಬೈ ನಿವಾಸದಲ್ಲಿ ಬಾಗಿಲು ಬಡಿದು, ಕೈಹಿಡಿದು ಎಳೆದು ಬಂಧಿಸಲಾಗಿದೆ. ಪತ್ರಕರ್ತರನ್ನು ಬಂಧಿಸಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಬಂಧಿಸಿದ ರೀತಿ ಮಾತ್ರ ಸರಿ ಇರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಬಂಧಿಸಲು ಹೋದ ಪೊಲೀಸರ ತಂಡದಲ್ಲಿದ್ದವರ ಕೈಯಲ್ಲಿ ಎಕೆ47 ಗನ್ ಗಳಿದ್ದವು. ಅಷ್ಟಕ್ಕೂ ಅರ್ನಬ್ ಭಯೋತ್ಪಾದಕರಲ್ಲ. ಅವರಿಗೆ ಕಾನೂನು ಕಟ್ಟಲೆ ಗೊತ್ತಿಲ್ಲದಷ್ಟು ಮೂರ್ಖರೂ ಅಲ್ಲ. ಅವರನ್ನು ಹಾಗೆ ಬಂಧಿಸಿ ಕರೆದುಕೊಂಡು ಹೋದದ್ದು ಒಬ್ಬ ಇಂಟಿರಿಯರ್ ಡಿಸೈನರ್ ಅನ್ವಯ್ ನಾಯಕ್ ಹಾಗೂ ಆತನ ತಾಯಿ ಕುಮುದಾ ನಾಯಕ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮೂವರಲ್ಲಿ ಒಬ್ಬ ಅರ್ನಬ್ ಗೋಸ್ವಾಮಿ ಕೂಡ ಕಾರಣ ಎನ್ನುವ ಆರೋಪ ಇದೆ ಎನ್ನುವ ಕಾರಣಕ್ಕೆ. 2018 ರಲ್ಲಿ ಆದ ಆತ್ಮಹತ್ಯೆಯದು. ಸಾಯುವಾಗ ಅನ್ವಯ್ ಕುಮಾರ್ ಡೆತ್ ನೋಟಿನಲ್ಲಿ ಮೂವರ ಹೆಸರು ಬರೆದಿದ್ದು ಅವರಿಂದ ತನಗೆ 5.8 ಕೋಟಿ ಹಣ ಬರಲು ಬಾಕಿ ಇದೆ ಎನ್ನುವ ಕಾರಣಕ್ಕೆ ತಾನು ಆರ್ಥಿಕ ತೊಂದರೆಗೆ ಸಿಲುಕಿದ್ದೇನೆ ಎಂದು ಹೇಳಿಕೊಂಡಿದ್ದರು. ಬಹುಶ: ಅರ್ನಬ್ ಮಹಾರಾಷ್ಟ್ರದಲ್ಲಿ ಕುಳಿತೇ ಮಹಾರಾಷ್ಟ್ರ ಸರಕಾರವನ್ನು ನಿತ್ಯ ತೀವ್ರ ಇರಿಸುಮುರಿಸು ಮಾಡುತ್ತಿದ್ದಕ್ಕೆ ಸಿಎಂ ಉದ್ಭವ್ ಠಾಕ್ರೆ(!) ಸೂಕ್ತ ಸಮಯ ಕಾಯುತ್ತಿದ್ದರು ಎಂದು ಅನಿಸುತ್ತದೆ. ಅವರಿಗೆ ಮೈತ್ರಿ ಪಕ್ಷ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(!) ಕೂಡ ಉತ್ತಮ ಸಾಥ್ ನೀಡಿದ್ದಾರೆ ಎನ್ನುವುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಯಾಕೆಂದರೆ ಇಬ್ಬರಿಗೂ ಅರ್ನಬ್ ಸಮಾನ ಶತ್ರು. ಸೋನಿಯಾ ಗಾಂಧಿ ಅವರ ಮೂಲ ಹೆಸರನ್ನು ಮಾಧ್ಯಮದಲ್ಲಿ ನಿತ್ಯ ಹೇಳುತ್ತಾ ಚಾಲೆಂಜ್ ಮಾಡಿದ ಮೊದಲ ಪತ್ರಕರ್ತ ಅರ್ನಬ್. ಆ ಧೈರ್ಯವನ್ನು ಅಲ್ಲಿಯ ತನಕ ಭಾರತೀಯ ಜನತಾ ಪಾರ್ಟಿಯ ದೊಡ್ಡ ದೊಡ್ಡ ನಾಯಕರೂ ಮಾಡಿರಲಿಲ್ಲ. ಸಂಸದ ಸುಬ್ರಹ್ಮಣ್ಯಸ್ವಾಮಿ ಅಲ್ಲೊಮ್ಮೆ ಇಲ್ಲೊಮ್ಮೆ ಮಾಡಿರಬಹುದು. ಅರ್ನಬ್ ರಾಹುಲ್ ಗಾಂಧಿ(!)ಯನ್ನು ಅರ್ನಬ್ ಟೀಕಿಸಿದಷ್ಟು ಬಿಜೆಪಿಯವರು ಕೂಡ ಟೀಕಿಸಿಲ್ಲ. ಅದು ಕಾಂಗ್ರೆಸ್ಸಿಗೆ ದೊಡ್ಡ ಅವಮಾನವಾಗಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಪ್ರಬಲವಾಗಿ ಇದ್ದ ಕಾರಣ ಅರ್ನಬ್ ಅವರನ್ನು ಮುಟ್ಟುವುದು ಅಷ್ಟು ಸುಲಭವೂ ಆಗಿರಲಿಲ್ಲ. “ಈ ಮನುಷ್ಯ ಆಗಬಹುದು ಕಣಯ್ಯ, ಇವನ ಧೈರ್ಯ ಸೂಪರ್. ಸೋನಿಯಾ ಮತ್ತು ರಾಹುಲ್ ಗೆ ನಿದ್ರೆ ಬರದೇ ಇರುವಷ್ಟು ಅವರನ್ನು ಖಂಡಿಸುತ್ತಾನೆ” ಎಂದು ಎಲ್ಲರೂ ಹೇಳುವಂತಾಯಿತು. ಯುವ ಬಿಜೆಪಿ ಕಾರ್ಯಕರ್ತರ ಮನದಲ್ಲಿ ಅರ್ನಬ್ ಪ್ರತಿಷ್ಟಾಪಿಸಲ್ಪಟ್ಟ. ಅನೇಕ ನಿರೂಪಕರು ಮುಟ್ಟಲಾಗದಷ್ಟು ಎತ್ತರವನ್ನು ಅರ್ನಬ್ ಏರಿದ್ದೇ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ನಿತ್ಯ ನಿರಂತರವಾಗಿ ಎದುರು ಹಾಕಿಕೊಂಡು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಎರಡನೇ ಬಾರಿ ಏರಲು ರಿಪಬ್ಲಿಕ್ ಟಿವಿಯ ಕೊಡುಗೆಯೂ ಇದೆ ಎಂದು ಬಿಜೆಪಿ ವಿರೋಧಿಗಳು ಟೀಕಿಸುವಂತಾಯಿತು. ಯಾವುದೇ ಘಟನೆ ಆದಾಗ ಆರೋಪ ಎದುರಿಸುತ್ತಿರುವ ಪಕ್ಷಗಳ ಅತಿಥಿಗಳನ್ನು ಲೈವ್ ಗೆ ಕರೆದು ಅವರ ಮುಖದ ಮೇಲೆ ಬೈಯುವಂತದ್ದು ಕಾಮನ್ ಆಯಿತು. ರಾಷ್ಟ್ರವಿರೋಧಿ ಯಾವುದೇ ಘಟನೆ ಆದರೂ ಅರ್ನಬ್ ತನ್ನ ಪಟಾಲಾಂ ತೆಗೆದುಕೊಂಡು ಲೈವ್ ನಲ್ಲಿ ಹಿಗ್ಗಾಮುಗ್ಗ ವಿರೋಧಿಗಳನ್ನು ಬೈಯುತ್ತಿದ್ದ. ಇದೇ ಅರ್ನಬ್ ರಿಪಬ್ಲಿಕ್ ಬರುವ ಮುಂಚೆ ಟೈಮ್ಸ್ ನೌನಲ್ಲಿ ಇದ್ದಾಗ ಬಿಜೆಪಿಯನ್ನು ಖಂಡಿಸುತ್ತಿದ್ದರು. ಆದರೆ ಯಾವಾಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಇಳಿದು ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಸರಕಾರ ಬಂತೋ ವಾಹಿನಿ ಬದಲಾಯಿಸಿ ತಾನೇ ಮುಖ್ಯಸ್ಥನಾಗಿದ್ದ ರಿಪಬ್ಲಿಕ್ ನಲ್ಲಿ ಕುಳಿತು ಅರ್ನಬ್ ಅವರು ದೇವೆಂದ್ರ ಪಡ್ನವಿಸ್ ಅವರಿಗಿಂತಲೂ ಪ್ರಬಲವಾಗಿ ಫೀಲ್ಡಿಗೆ ಇಳಿದುಬಿಟ್ಟರು. ಬಿಜೆಪಿಯಾದರೂ ಕೆಲವು ದಿನ ಯಾವುದೇ ಆರೋಪ ಮಾಡದೇ ಇದ್ದ ದಿನಗಳಿವೆ. ಆದರೆ ಅರ್ನಬ್ ಸುಮ್ಮನೆ ಕೈಕಟ್ಟಿ ಕುಳಿತುಕೊಂಡದ್ದೇ ಇಲ್ಲ. ಎಪ್ರಿಲ್ 16 ರಂದು ಒಂದು ಹಳ್ಳಿಗರ ತಂಡ ಉತ್ತರ ಮುಂಬೈಯಲ್ಲಿ ಇಬ್ಬರು ಸಾಧುಗಳನ್ನು ಯಾವ ಪರಿ ಹೊಡೆದು ಹತ್ಯೆ ಮಾಡಿದ್ದರು ಎಂದರೆ ಪೊಲೀಸರು ಕೂಡ ಬಿಡಿಸಲು ಹೋಗಿ ಪೆಟ್ಟು ತಿಂದಿದ್ದರು. ಆದರೆ ಇಬ್ಬರು ಸಾಧುಗಳ ಹತ್ಯೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಅರ್ನಬ್ ನಿರಂತರವಾಗಿ ಸರಕಾರವನ್ನು ಟೀಕಿಸಿ ಕಾರ್ಯಕ್ರಮ ಮಾಡಿದ್ದರು. ಇದರ ನಂತರ ಮೂರನೇಯದಾಗಿ ಸುಶಾಂತ್ ಸಿಂಗ್ ರಾಜಪೂತ್ ಅನುಮಾನಾಸ್ಪದವಾಗಿ ಸತ್ತಾಗ ಅದರ ಬುಡದ ತನಕ ಹೋದ ಅರ್ನಬ್ ಈ ಪ್ರಕರಣದಲ್ಲಿ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಕೋಟ್ಯಾನ್ ಕೂಡ ಅನುಮಾನಾಸ್ಪದ ರೀತಿಯಲ್ಲಿ ಸತ್ತಿದ್ದು, ಡ್ರಗ್ಸ್ ಪಾರ್ಟಿಗಳಿಗೂ ಈ ಸಾವುಗಳಿಗೂ ಲಿಂಕ್ ಆಗುವ ಹಾಗೆ ಸಾಕ್ಷ್ಯ ಇಟ್ಟುಕೊಂಡು ವಾದಿಸಿದ್ದರು. ದೊಡ್ಡದೊಡ್ಡವರ ಹೆಸರಿನೊಂದಿಗೆ ಠಾಕ್ರೆ ಕುಟುಂಬದ ಕುಡಿಗಳ ನೆರಳು ಈ ಪ್ರಕರಣದಲ್ಲಿ ಬಿದ್ದ ಕಾರಣ ಅರ್ನಬ್ ಇನ್ನು ನಿತ್ಯ ಮಾತನಾಡಿ ನಮ್ಮ ಬುಡ ಅಲುಗಾಡಿಸುತ್ತಾರೆ ಎಂದು ಹೆದರಿದ ರಾಜ್ಯದ ಆಡಳಿತ ರಿಪಬ್ಲಿಕ್ ಟಿವಿಯ ಟಿಆರ್ ಪಿ ಬಗ್ಗೆ ತನಿಖೆ ಕೈಗೆತ್ತಿಕೊಂಡಿತು. ಅದರಲ್ಲಿ ಏನೂ ಮಾಡಲಾಗಿಲ್ಲ. ಈಗ ಎರಡು ವರ್ಷಗಳ ಹಿಂದಿನ ಆತ್ಮಹತ್ಯೆ ಕೇಸ್ ಹಿಡಿದು ಅರ್ನಬ್ ಕೈ ಎಳೆದು ಕರೆದುಕೊಂಡು ಹೋಗಿದ್ದಾರೆ. ಆದರೆ ಅರ್ನಬ್ ಬೆಂಬಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಹಾರಾಷ್ಟ್ರ ಸರಕಾರವನ್ನು ಖಂಡಿಸಿ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗಿದೆ. ಒಬ್ಬ ಪತ್ರಕರ್ತನಾಗಿ ಅರ್ನಬ್ ಬಗ್ಗೆ ಅವರಿಗೆ ಆಗದವರೂ ಕೂಡ ಅವರ ಧೈರ್ಯವನ್ನು ಕೊಂಡಾಡುತ್ತಾರೆ. ಅವರು ಹೇಳುವ ಶೈಲಿ ವಿಭಿನ್ನವಾಗಿರಬಹುದು. ಆದರೆ ಯಾವುದೇ ಸರಕಾರವನ್ನು ಎದುರು ಹಾಕಿಕೊಳ್ಳುವುದಿದೆಯಲ್ಲ, ಅದಕ್ಕೆ “ಪವರ್” ಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಸರಕಾರಗಳು ಪವರ್ ತಪ್ಪಿಸಿಬಿಡುತ್ತವೆ!
- Advertisement -
Leave A Reply