• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪರೀಕ್ಷೆಯೇ ಅಂತಿಮವಲ್ಲ ಆದರೆ ಅಂತಿಮ ಪರೀಕ್ಷೆ ಮುಖ್ಯ ಅಲ್ವಾ?!

Hanumantha Kamath Posted On April 21, 2021


  • Share On Facebook
  • Tweet It

ಸಿಬಿಎಸ್ ಸಿ ನಡೆಸುವ ಹತ್ತನೇ ತರಗತಿ ಪರೀಕ್ಷೆಯನ್ನು ಕೇಂದ್ರ ಸರಕಾರ ಈ ವರ್ಷ ರದ್ದು ಮಾಡಿದೆ. ಈ ವರ್ಷ ಸಿಬಿಎಸ್ ಸಿ ಬೋರ್ಡಿನ ಹತ್ತನೇ ತರಗತಿ ಬರೆಯುತ್ತಿರುವ ಎಲ್ಲ ಮಕ್ಕಳಿಗೆ ಒಂದಿಷ್ಟು ರಿಲೀಫ್ ಸಿಕ್ಕಿದೆ. ಕೆಲವು ಮಕ್ಕಳು ಪಾರ್ಟಿ ಕೂಡ ಮಾಡಿದ್ದಾರೆಂದು ಶಿಕ್ಷಕರೇ ಹೇಳಿದ್ದಾರೆ. ಅದೇನೆ ಇರಲಿ ಪರೀಕ್ಷೆ ರದ್ದಾದರೆ ಮಕ್ಕಳಿಗಿಂತ ಹೆಚ್ಚು ಆತಂಕಕ್ಕೆ ಒಳಗಾಗುವುದು ಅವರ ಪೋಷಕರು. ಯಾಕೆಂದರೆ ಪೋಷಕರು ಇವತ್ತಿನ ಕಥೆ ನೋಡುವುದಿಲ್ಲ. ಅವರು ನೋಡುವುದು ಮಕ್ಕಳ ಮುಂದಿನ ಭವಿಷ್ಯ. 15 ನೇ ವರ್ಷದ ಒಂದು ಹುಡುಗ ಅಥವಾ ಹುಡುಗಿಯ ಮನಸ್ಸು ಬಹಳ ದೂರದ ತನಕ ಆಲೋಚಿಸುವುದು ಕಡಿಮೆ. ಆದರೆ ಪೋಷಕರಿಗೆ ಅವಳ ಅಥವಾ ಅವನ ಅಂಕಗಳೇ ಅವನ, ಅವಳ ಉದ್ಯೋಗ, ಐಷಾರಾಮಿ ಜೀವನಕ್ಕೆ ತಳಹದಿ ಎಂದು ಅನಿಸಿರುತ್ತದೆ. ಮಕ್ಕಳ ಅಂಕಗಳಿಗೂ ಅವರ ಉನ್ನತ ಭವಿಷ್ಯಕ್ಕೂ ದೂರದೂರಿಗೆ ಸಂಬಂಧವಿಲ್ಲ ಎಂದು ಪೋಷಕರು ಹೊರಗೆ ಹೇಳಿದರೂ ಒಳಗೊಳಗೆ ಆತಂಕ ಇರುತ್ತದೆ. ಆದ್ದರಿಂದ ಸಿಬಿಎಸ್ ಸಿ ಹತ್ತನೇ ತರಗತಿ ಪರೀಕ್ಷೆ ಇಲ್ಲ ಎಂದಾಗ ಹೆಚ್ಚಿನ ಪೋಷಕರ ತಲೆಯ ಮೇಲೆ ನೀರು ಸುರಿದಂತೆ ಆಗಿದೆ. ಒಂದು ವೇಳೆ ಪರೀಕ್ಷೆ ರದ್ದಾದರೆ ಯಾವ ಆಧಾರದ ಮೇಲೆ ಪದವಿಪೂರ್ವ ತರಗತಿಗೆ ಮಕ್ಕಳು ಉತ್ತೀರ್ಣರಾಗುತ್ತಾರೆ ಎನ್ನುವುದರ ಬಗ್ಗೆ ಸರಿಯಾದ ಮಾರ್ಗದರ್ಶಿ ಸೂತ್ರ ಇನ್ನು ಬೋರ್ಡಿನಿಂದ ಬಂದಿಲ್ಲ. ಆದ್ದರಿಂದ ಪ್ರಿಪರೆಟರಿ ಪರೀಕ್ಷೆಗಳ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ಹಂತಕ್ಕೆ ಕಳುಹಿಸುವ ಐಡಿಯಾ ಜಾರಿಗೆ ಬರಬಹುದು. ಆದರೆ ಇಲ್ಲಿ ಇರುವ ಆತಂಕ ಏನೆಂದರೆ ಅನೇಕ ಮಕ್ಕಳು ಅಂತಿಮ ಪರೀಕ್ಷೆಯನ್ನು ತೆಗೆದುಕೊಳ್ಳುವಷ್ಟು ಸೀರಿಯಸ್ ಆಗಿ ಪ್ರಿಪರೆಟರಿ ಪರೀಕ್ಷೆಗಳನ್ನು ತೆಗೆದುಕೊಂಡಿರುವುದಿಲ್ಲ. ಯಾಕೆಂದರೆ ಫೈನಲ್ ಮ್ಯಾಚಿನ ಖದರ್ ಬೇರೆಯದ್ದೇ ಆಗಿರುತ್ತದೆ. ಇನ್ನು ಪೋಷಕರು ನಾವು ಹತ್ತು ತಿಂಗಳಿನಿಂದ ಕಣ್ಣಿಗೆ ಎಣ್ಣೆ ಬಿಟ್ಟು ಮಕ್ಕಳಿಗೆ ಆನ್ ಲೈನ್, ಆಫ್ ಲೈನ್ ನಲ್ಲಿ ಕಲಿಸಿ, ಟಿವಿಷನ್ ಗೆ ಕಳುಹಿಸಿ, ಅವರಷ್ಟೇ ಟೆನ್ಷನ್ ಮಾಡಿ ಈಗ ಪರೀಕ್ಷೆ ಇಲ್ಲ ಎಂದರೆ ನಮ್ಮ ಶ್ರಮಕ್ಕೆ ಬೆಲೆ ಇಲ್ವಾ, ಅಂತಿಮ ಪರೀಕ್ಷೆಯನ್ನು ಚೆನ್ನಾಗಿ ಮಾಡಲು ನಮ್ಮ ಹುಡುಗ ತಯಾರಾಗಿದ್ದ ಎಂದು ಅಂದುಕೊಂಡ ಲಕ್ಷಾಂತರ ಪೋಷಕರಿದ್ದಾರೆ. ಅವರಿಗೆಲ್ಲ ಇದೊಂದು ರೀತಿಯ ಮಾನಸಿಕ ತುಮುಲದ ಸಂದರ್ಭ. ಇನ್ನು ಸಿಬಿಎಸ್ ಸಿ ಟೆನ್ತ್ ಪರೀಕ್ಷೆ ರದ್ದಾಗಿರಬಹುದು. ಆದರೆ ನಾವು ಇನ್ನು ಯಾವುದೇ ರದ್ದತಿಯ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಯಾಕೆಂದರೆ ಹತ್ತನೇ ಪರೀಕ್ಷೆಗಳು ಕರ್ನಾಟಕದಲ್ಲಿ ನಿಗದಿಯಾಗಿರುವುದು ಜೂನ್ 21ರಿಂದ. ಆ ಸಂದರ್ಭದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆಯಾಗಬಹುದು. ಇನ್ನು ಭರ್ತಿ ಎರಡು ತಿಂಗಳು ಇದೆಯಲ್ಲ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಅದೇ ಅವರು ಒಂದನೇ ತರಗತಿಯಿಂದ ಒಂಭತ್ತನೇ ತರಗತಿಯ ತನಕದ ಮಕ್ಕಳಿಗೆ ಪರೀಕ್ಷೆಗಳು ರದ್ದು ಮಾಡಲು ಮೌಖಿಕವಾಗಿ ಸಮ್ಮತಿಸಿದ್ದಾರೆ ಎನ್ನುವ ಮಾಹಿತಿ ಇದೆ. ಹತ್ತನೇ ತರಗತಿಯನ್ನು ಪರೀಕ್ಷೆಯನ್ನು ಮಾತ್ರ ಆ ದಿನಗಳಲ್ಲಿ ಇರುವ ಪರಿಸ್ಥಿತಿಯನ್ನು ನೋಡಿ ನಿರ್ಧಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಇನ್ನು ಸಿಬಿಎಸ್ ಸಿ ಹತ್ತನೇ ತರಗತಿ ಪರೀಕ್ಷೆ ರದ್ದಾದಂತೆ ರಾಜ್ಯದಲ್ಲಿಯೂ ಬೋರ್ಡ್ ಮಾಡುವ ಪರೀಕ್ಷೆ ರದ್ದಾಗಬಹುದು ಎನ್ನುವ ಅನುಮಾನಗಳಿವೆ. ಆದ್ದರಿಂದ ನಮ್ಮ ರಾಜ್ಯದ ಶಿಕ್ಷಣ ಇಲಾಖೆಯ ಬೋರ್ಡ್ ಮಾಡುವ ಪರೀಕ್ಷೆಗೆ ಕುಳಿತಿರುವ ಮಕ್ಕಳು ಓದಲು ಕುಳಿತಾಗ ಪರೀಕ್ಷೆ ರದ್ದಾದರೆ ಇಷ್ಟು ಓದಿದ್ದು ವೇಸ್ಟ್ ಅಲ್ವಾ ಎನ್ನುವ ವಾಕ್ಯ ಅವರ ಮನಸ್ಸಿನಲ್ಲಿ ಸುಳಿದಾಡುತ್ತಾ ಇರುತ್ತದೆ. ಇದು ಅವರ ಏಕಾಗ್ರತೆಯನ್ನು ಅರ್ಧಕರ್ಧ ಕಬಳಿಸುತ್ತದೆ. ಆದ್ದರಿಂದ ಮಕ್ಕಳಿಗೆ ಪರೀಕ್ಷೆ ರದ್ದಾಗಲ್ಲ, ಮನಸ್ಸಿಟ್ಟು ಓದು ಎನ್ನುವುದನ್ನು ಕೂಡ ಪೋಷಕರು ಪದೇ ಪದೇ ಹೇಳುವ ಅನಿವಾರ್ಯತೆ ಈ ಬಾರಿ ಸೃಷ್ಟಿಯಾಗಿದೆ. ಇನ್ನು ಜೂನ್ 21 ಕ್ಕೆ ಪರೀಕ್ಷೆ ಮಾಡಲು ಸಾಧ್ಯವಾಗದಿದ್ರೆ ಮುಂದಕ್ಕೆ ಹಾಕುವುದಾ ಅಥವಾ ರದ್ದು ಮಾಡುವುದಾ ಎನ್ನುವುದರ ಬಗ್ಗೆ ಸರಕಾರದ ಬಳಿ ಸದ್ಯ ಉತ್ತರವಿಲ್ಲ. ರಾಜ್ಯ ಸರಕಾರದ ಶಿಕ್ಷಣ ಇಲಾಖೆಗೆ ಇರುವ ಏಕೈಕ ಧೈರ್ಯ ಎಂದರೆ ಕಳೆದ ಬಾರಿ ಹೆಚ್ಚು ಕಡಿಮೆ ಇದೇ ಸಮಯಕ್ಕೆ ಹತ್ತನೇ ತರಗತಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆಯಿಂದ ನಡೆಸಲಾಗಿತ್ತು. ಸಣ್ಣಪುಟ್ಟ ಗೊಂದಲ ಬಿಟ್ಟರೆ ಬಹುತೇಕ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸಿದ ಕೀರ್ತಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಿಕ್ಕಿತ್ತು. ಆದ್ದರಿಂದ ಆ ಹುಮ್ಮಸ್ಸಿನಲ್ಲಿ ಸುರೇಶ್ ಕುಮಾರ್ ಮತ್ತೊಮ್ಮೆ ಬೆನ್ನು ತಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇನ್ನು ಒಂದರಿಂದ ಒಂಭತ್ತನೇ ತರಗತಿಯ ಮಕ್ಕಳ ಪರೀಕ್ಷೆಗಳು ರದ್ದಾದರೆ ಅದರಿಂದ ನಿಜಕ್ಕೂ ಮಕ್ಕಳಾಗಲಿ, ಪೋಷಕರಾಗಲಿ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಇಂತಹ ರಿಸ್ಕಿನಲ್ಲಿ ಮಕ್ಕಳಿಂದ ಪರೀಕ್ಷೆ ಬರೆಸಿ ಅವರಿಗೆ ಐಎಎಸ್ ತರಬೇತಿಗೆ ಕಳಿಸಲು ಏನೂ ಇರುವುದಿಲ್ಲ. ಆದರೆ ಆಶ್ಚರ್ಯ ಎಂದರೆ ಇವತ್ತಿನ ದಿನಗಳಲ್ಲಿ ಮಕ್ಕಳು ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಜಾತ್ರೆ, ಉತ್ಸವ, ಮಾಲ್, ಬೀಚ್ ಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿಯೇ ಇದೆ. ಯಾಕೆಂದರೆ ಈ ಬಾರಿ ಪರೀಕ್ಷೆಯ ಒತ್ತಡ ಇಲ್ವಲ್ಲಾ, ಆದ್ದರಿಂದ ಮಕ್ಕಳು ಆರಾಮಾಗಿ ಇದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಮಕ್ಕಳು ಒತ್ತಡರಹಿತರಾಗಿಯೇ ಇರಬೇಕು. ಪರೀಕ್ಷೆಗಳು ಜೀವನದಲ್ಲಿ ಅಸಂಖ್ಯಾತ ಬಾರಿ ಬರುತ್ತವೆ. ಆದ್ದರಿಂದ ಈ ಪರೀಕ್ಷೆಗಳು ಆಗಲಿಲ್ಲ ಎಂದ ಕೂಡಲೇ ಜೀವನವೇ ಮುಗಿಯಿತು ಎನ್ನುವ ಮನಸ್ಥಿತಿಯನ್ನು ಪೋಷಕರು ಬಿಡಬೇಕು. ಆದರೆ ಇದೇ ಹೊತ್ತಿನಲ್ಲಿ ಮಕ್ಕಳು ಎಲ್ಲೆಲ್ಲೋ ಆಡಲು ಹೋಗಿ ಕೊರೊನಾ ಸೊಂಕಿತರು ಆಗುವ ಸಾಧ್ಯತೆ ಇದ್ದಾಗ ತಲೆಕೆಡಿಸಿಕೊಳ್ಳದ ನಾವು ಮಗು ಶಾಲೆಗೆ ಹೋದರೆ ಮಾತ್ರ ಕೊರೊನಾ ಬರುತ್ತದೆ ಎಂದು ಅಂದುಕೊಳ್ಳುವುದು ತಪ್ಪು. ಇನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ ಪಠ್ಯಪುಸ್ತಕದಲ್ಲಿರುವ ಪಠ್ಯವನ್ನು ಪರೀಕ್ಷೆ ದೃಷ್ಟಿಯಿಂದ ಮಾತ್ರ ಓದುತ್ತಿದ್ದನ್ನು ಬಿಟ್ಟು ಮನನ ಮಾಡಿಕೊಂಡು ಓದುವುದು ಒಳ್ಳೆಯದು. ಈ ದಿನಗಳಲ್ಲಿ ಪಠ್ಯ ಬಿಟ್ಟು ಜೀವನಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಕೂಡ ಕಲಿಯುವುದು ಒಳ್ಳೆಯದು. ಅದನ್ನು ಕಲಿಸುವತ್ತ ಪೋಷಕರು ಗಮನ ನೀಡಬೇಕು. ಅದು ಬಿಟ್ಟು ಇಡೀ ದಿನ ಮೊಬೈಲಿನಲ್ಲಿ, ಟಿವಿಯಲ್ಲಿ ಮುಳುಗಿ ಹೋದರೆ ಪ್ರಯೋಜನವಿಲ್ಲ. ಇನ್ನು ಪರೀಕ್ಷೆಗಳು ರದ್ದಾದರೆ ಯಾವ ಆಧಾರದ ಮೇಲೆ ಮಕ್ಕಳು ಮುಂದಿನ ಹಂತಕ್ಕೆ ಹೋಗುತ್ತಾರೆ ಎಂದು ನಿರ್ಧಾರವಾಗದಿದ್ದರೂ ನಮ್ಮ ಮಕ್ಕಳಿಗೆ ಇಂಟರನಲ್ ಮಾರ್ಕ್ ಜಾಸ್ತಿ ಕೊಡಿ ಪ್ಲೀಸ್ ಎಂದು ಪೋಷಕರು ಗೋಗರೆಯುವಂತಹ ಪರಿಸ್ಥಿತಿ ಬರುತ್ತಾ?
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search