ಬಿಪಿಎಲ್ ಹೋಗಿ ಎಪಿಎಲ್ ಆಗಲು ಜನರ ತಪ್ಪು ಕೂಡ ಕಾರಣ!!
![](https://tulunadunews.com/wp-content/uploads/2021/07/bpl-card-isssue-tnn.jpg)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡುದಾರರಲ್ಲಿ ಹಲವರು ಅಚಾನಕ್ ಆಗಿ ಎಪಿಎಲ್ ಕಾರ್ಡುದಾರರಾಗಿ ಬದಲಾಗಿದ್ದಾರೆ. ಆ ಮೂಲಕ ಪಡಿತರ ಚೀಟಿ ಸಹಿತ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಶಾಸಕರ ಸಭೆ ನಡೆದಿದೆ. ಶಾಸಕರುಗಳಿಗೆ ಏನು ಅಂದರೆ ತಮ್ಮ ಕ್ಷೇತ್ರದ ನಾಗರಿಕರು ಬಂದು “ನಮ್ಮ ಬಿಪಿಎಲ್ ಕಾರ್ಡು ಎಪಿಎಲ್ ಆಗಿ ಕನ್ವರ್ಟ್ ಆಗಿಹೋಗಿದೆ, ಅದನ್ನು ಮತ್ತೆ ಬಿಪಿಎಲ್ ಕಾರ್ಡು ಮಾಡಿಕೊಡಿ” ಎಂದು ದಂಬಾಲು ಬಿದ್ದಾಗ ಅದನ್ನು ಮಾಡಿಕೊಡದಿದ್ದರೆ ಅಂತವರು ಕೋಪಿಸಿಕೊಂಡಾರು.
ಮುಂದೆ ಚುನಾವಣೆಯಲ್ಲಿ ತೊಂದರೆ ಆಗಬಹುದು ಎನ್ನುವುದು ಸಹಜವಾಗಿಯೇ ಇರುತ್ತದೆ. ಅದಕ್ಕೆ ಸಚಿವರಿಂದ ಆಹಾರ ಇಲಾಖೆಯ ಆಯುಕ್ತರ ಮೇಲೆ ಒತ್ತಡ ಹಾಕಿಸಿ ಬಿಪಿಎಲ್ ಕಾರ್ಡ್ ಮಾಡಿಸಿಕೊಡುವ ತರಾತುರಿ ಇರುತ್ತದೆ. ಆದರೆ ನಮ್ಮ ಜನಪ್ರತಿನಿಧಿಗಳು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಬಿಪಿಎಲ್ ಇದ್ದವರ ಕಾರ್ಡ್ ಅಕಸ್ಮಾತ್ ಆಗಿ ಎಪಿಎಲ್ ಹೇಗೆ ಆಯಿತು? ಒಂದು ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಸಿಗಬೇಕಾದರೆ ಆ ಕುಟುಂಬದ ವರ್ಷದ ಒಟ್ಟು ವರಮಾನ 1,20,000 ರೂಪಾಯಿ ಮೀರಿರಬಾರದು. ಅಂತಹ ಕುಟುಂಬದವರು ಗ್ರಾಮ ಕರಣಿಕರು ಅಂದರೆ ವಿಲೇಜ್ ಅಕೌಂಟೆಂಟ್ ಬಳಿ ಹೋಗಿ ಅರ್ಜಿ ಹಾಕಿ ತಮ್ಮ ಸೂಕ್ತ ದಾಖಲೆ ನೀಡಿ ಆದಾಯ ಪ್ರಮಾಣಪತ್ರವನ್ನು ಮಾಡಿಸಿಕೊಳ್ಳಬಹುದು. ಆ ನಂತರ ಆನ್ ಲೈನ್ ನಲ್ಲಿ ಆದಾಯ ಪ್ರಮಾಣ ಪತ್ರದ ದಾಖಲೆಗಳನ್ನು ಅಪಲೋಡ್ ಮಾಡಿದ ನಂತರ ಅವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತದೆ. ಒಂದು ವೇಳೆ ಆನ್ ಲೈನ್ ನಲ್ಲಿ ಮಾಹಿತಿ ಅಪಲೋಡ್ ಮಾಡುವಾಗ ಅಲ್ಲಿ 1,20,000 ಬದಲು 1,80,000 ಎಂದು ಕಣ್ತಪ್ಪಿನಿಂದ ಬರೆದುಹೋಗಿ ಆ ನಂತರ ನೈಜ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾದರೆ ಅಂತವರ ಪರ ಜನಪ್ರತಿನಿಧಿಗಳು ಕೆಲಸ ಮಾಡಲೇಬೇಕು. ಯಾಕೆಂದರೆ ಅದು ಅವರ ಕರ್ತವ್ಯ. ಆದರೆ ಅದು ಬಿಟ್ಟು ಅನೇಕ ಬಾರಿ ಈ ಬಿಪಿಎಲ್ ಕಾರ್ಡು ರದ್ದಾಗಲು ಇರುವ ಇನ್ನೊಂದು ಮುಖ್ಯ ಕಾರಣ ಬೇರೆ ಯಾರೂ ಅಲ್ಲ, ಆ ಫಲಾನುಭವಿಗಳೇ ಆಗಿರುತ್ತಾರೆ. ಅವರು ಆದಾಯ 1,20,000 ಎಂದು ಹೇಳಿ ವಿಎಯಿಂದ ಇನ್ ಕಂ ಸರ್ಟಿಫೀಕೇಟ್ ಮಾಡಿಸುತ್ತಾರೆ, ನಿಜ. ಅದು ನಿಜವೂ ಇರಬಹುದು ಅಥವಾ ಯಾರದ್ದೋ ಶಿಫಾರಸ್ಸಿನಿಂದಲೋ, ಇನ್ಯಾವುದೋ ಕಾರಣದಿಂದಲೋ ಅವರಿಗೆ ಆದಾಯ ಪ್ರಮಾಣ ಸಿಕ್ಕಿರುತ್ತದೆ ಮತ್ತು ಆ ಬಳಿಕ ಬಿಪಿಎಲ್ ಕಾರ್ಡ್ ದೊರಕಿರುತ್ತದೆ.
ಆದರೆ ಅಂತಹ ಜನರು ಅನೇಕ ಬಾರಿ ಏನು ಮಾಡುತ್ತಾರೆ ಎಂದರೆ ಬ್ಯಾಂಕಿನಲ್ಲಿಯೋ, ಇನ್ಯಾವುದೋ ಫೈನಾನ್ಸ್ ನಲ್ಲಿ ಸಾಲ ಪಡೆಯಲು ಹೆಚ್ಚು ಆದಾಯ ತೋರಿಸಲು ಇನ್ನೊಂದು ಆದಾಯ ಪ್ರಮಾಣಪತ್ರ ಮಾಡಿಸುತ್ತಾರೆ. ಅದರಲ್ಲಿ ಎರಡು ಲಕ್ಷ ಆದಾಯ ಇದೆ ಎಂದು ನಮೂದಿಸಲಾಗಿರುತ್ತದೆ. ಈ ಮೂಲಕ ಅವರಿಗೆ ಸಾಲ ಸಿಕ್ಕಿರಬಹುದು. ಆದ್ರೆ ಅವರು ಕೆಲವೇ ಸಮಯಗಳಲ್ಲಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿರುತ್ತಾರೆ. ಯಾಕೆಂದರೆ ಎಲ್ಲವೂ ಈಗ ಇಂಟರನೆಟ್ ಯುಗವಾಗಿರುವುದರಿಂದ ಅವರಿಗೆ ವಿಎ 200000 ರೂಪಾಯಿ ಆದಾಯ ಪ್ರಮಾಣ ಪತ್ರ ಮಾಡಿಸಿದ ಕೂಡಲೇ ಅಂತವರಿಗೆ ಹೇಗೆ ಬಿಪಿಎಲ್ ಸೌಲಭ್ಯ ಸರಕಾರ ಕೊಡಲು ಸಾಧ್ಯ. ಈಗ ಆದಾಯ ಪ್ರಮಾಣ ಪತ್ರದ ಜೊತೆ ಆಧಾರ್ ಕಾರ್ಡ್ ನಂಬರ್ ಸಹಿತ ಬೇರೆ ಬೇರೆ ವಿವರಗಳು ದಾಖಲಾಗುವುದರಿಂದ ಇಲ್ಲಿ ಸರಕಾರದ ಕಣ್ಣಿಗೆ ಮಣ್ಣೆರೆಚುವುದು ಸುಲಭವಲ್ಲ. ಆದರೆ ಇದ್ಯಾವುದೋ ಗೊತ್ತಿಲ್ಲದೆ ಏನೋ ಮಾಡಲು ಹೋಗಿ ಸೌಲಭ್ಯ ಕಳೆದುಕೊಂಡು ನಂತರ ಅಂತಹ ಜನರು ಶಾಸಕರ ಬಳಿ ಬರುತ್ತಾರೆ. ಏನಾದರೂ ಮಾಡಿಕೊಡಿ ಎಂದು ಹಿಂದೆ ಬೀಳುತ್ತಾರೆ. ಸರಿಯಾಗಿ ನೋಡಿದರೆ ಇಲ್ಲಿ ವಿಲೇಜ್ ಅಕೌಂಟೆಂಟ್ ಅವರದ್ದು ತಪ್ಪು ಕೂಡ ಇದೆ. ಒಬ್ಬ ವ್ಯಕ್ತಿ ಜೂನ್ ನಲ್ಲಿ ಬಂದು ತಮ್ಮ ಇಡೀ ಕುಟುಂಬದ ಆದಾಯ 1,20,000 ಮಾತ್ರ ಇದೆ ಎಂದು ಹೇಳಿ ಆದಾಯ ಪ್ರಮಾಣಪತ್ರ ಮಾಡಿಸಲು ಬಂದಾಗ ಈ ವಿಎ ಕೂಡ ಅಂತವರ ಮನೆಗಳನ್ನು ಪರಿಶೀಲಿಸುತ್ತಾರಾ? ಬಂದವರು ಬೈಕು, ಕಾರುಗಳಲ್ಲಿ ಬಂದಿದ್ದಾರೋ, ಬಸ್ಸಿನಲ್ಲಿ ಬಂದಿದ್ದಾರೋ ಎಂದು ನೋಡಿದ್ದಾರಾ? ಒಂದು ವೇಳೆ ಅರ್ಹರೇ ಬಂದು ಮಾಡಿಸಿದ್ರು ಎಂದೇ ಒಂದು ಕ್ಷಣ ಅಂದುಕೊಳ್ಳೋಣ. ಅಂತವರು ಮೂರು ತಿಂಗಳು ಬಿಟ್ಟು ಮತ್ತೆ ಬಂದು 2 ಲಕ್ಷದ ಆದಾಯ ಪ್ರಮಾಣಪತ್ರ ಮಾಡಿಸಿಕೊಡಿ ಎಂದು ವಿಎಗೆ ಹೇಳಿದಾಗ ನೀವು ಮೂರು ತಿಂಗಳ ಹಿಂದೆ ತಾನೆ ಬಂದು 1,20,000 ಮಾಡಿಸಿಕೊಂಡು ಹೋಗಿದ್ದಿರಲ್ಲ, ಈಗ ಇದು ಯಾಕೆ ಎಂದು ವಿಎ ಕೇಳಬೇಕಲ್ಲವೇ? ಒಂದು ಆದಾಯ ಪ್ರಮಾಣಪತ್ರ ಐದು ವರ್ಷ ಬಾಳಿಕೆ ಬರಬೇಕಾದರೆ ಜನರು ಹೀಗೆ ತಮ್ಮ ಅನುಕೂಲತೆಗೆ ತಕ್ಕಂತೆ ಏನೇನೋ ಮಾಡಿಸಿಕೊಂಡು ಹೋಗಲು ವಿಎಗಳು ಕೂಡ ಕಾರಣ. ಅಂತವರ ವಿಎಗಳನ್ನು ಗುರಿ ಮಾಡಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕೈಬಿಸಿ ಮಾಡಿದರು ಎನ್ನುವ ಕಾರಣಕ್ಕೆ ವಿಎಗಳು ಕೂಡ ಆದಾಯ ಪ್ರಮಾಣಪತ್ರವನ್ನು ಕೇಳಿದಾಗೆಲ್ಲ ಬೇಕಾದ ಮೊತ್ತಕ್ಕೆ ಮಾಡಿಸಿಕೊಡಬಾರದು. ಆದ್ದರಿಂದ ಶಾಸಕರು ತಮ್ಮ ಬಳಿ ಹೀಗೆ ಸರಿಮಾಡಿಸಿಕೊಡಿ ಎಂದು ದಂಬಾಲು ಹಾಕುವ ಜನರ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡು ಆಗಲು ನೈಜ ಕಾರಣ ಏನು ಎಂದು ನೋಡಿಕೊಳ್ಳಬೇಕು. ಜನರು ಹೀಗೆ ತಪ್ಪು ಮಾಡಿ ನಂತರ ನಿಮ್ಮ ಬಳಿ ಬಂದರೆ ಅಂತವರಿಗೆ ಸಹಾಯ ಮಾಡಲು ಹೋದರೆ ಅದು ಕೂಡ ಸರಕಾರಕ್ಕೆ ಮಾಡಿದ ದ್ರೋಹ ಮತ್ತು ತೆರಿಗೆ ಕಟ್ಟುವ ತೆರಿಗೆದಾರರ ಹಣಕ್ಕೆ ಮಾಡಿದ ಮೋಸ!
Leave A Reply