• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

14 ವರ್ಷ ಬೇಕಾಯಿತು ಶಿವರಾಜ್ ಒಳಗೆ ಹೋಗಲು!!

Tulunadu News Posted On July 27, 2021
0


0
Shares
  • Share On Facebook
  • Tweet It

ಜುಲೈ 25, 2021 ಈ ತಾರೀಕಿನಿಂದ ಭರ್ತಿ 14 ವರ್ಷ ಹಿಂದೆ. ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಸಹಾಯಕ ನಗರ ಯೋಜನಾಧಿಕಾರಿ ಬಿ.ಪಿ. ಶಿವರಾಜ್ ಮೇಲೆ ಲೋಕಾಯುಕ್ತ ದಾಳಿಯಾಗುತ್ತದೆ. ನಗರ ಯೋಜನಾ ವಿಭಾಗ ಅಂದರೆ ಅದೊಂದು ಫಲವತ್ತಾದ ತೋಟ ಇದ್ದಂತೆ. ಅಂತಹ ವಿಭಾಗದಲ್ಲಿ ಕೆಲಸ ಮಾಡುವುದಕ್ಕೆ ಅಧಿಕಾರಿಗಳು ಹಾತೊರೆಯುತ್ತಾರೆ. ಇಂತಹ ಒಂದು ಭ್ರಷ್ಟರ ತವರುಮನೆಯಲ್ಲಿ 30 ವರ್ಷಗಳಿಂದಲೂ ಗೂಟ ಹೊಡೆದು ಕುಳಿತವನ ಹೆಸರು ಶಿವರಾಜ್. ಈ ಮನುಷ್ಯ ತನ್ನ ಉದ್ಯೋಗಾವಧಿಯ ಬಹುತೇಕ ವರ್ಷಗಳನ್ನು ಕಳೆದದ್ದು ಇದೇ ಪಾಲಿಕೆಯಲ್ಲಿ. ಒಂದಿಷ್ಟು ಕಾಲ ಇಂಜಿನಿಯರಿಂಗ್ ವಿಭಾಗದಲ್ಲಿ ಮತ್ತು ಸ್ವಲ್ಪ ಸಮಯ ಶಿವಮೊಗ್ಗದಲ್ಲಿ ಇದ್ದದ್ದು ಬಿಟ್ಟರೆ ನಂತರ ಇದ್ದದ್ದು ಪಾಲಿಕೆಯ ನಗರ ಯೋಜನಾ ವಿಭಾಗದಲ್ಲಿ.
ಇಂತಹ ಶಿವರಾಜ್ ಮೇಲೆ ಆಗಿನ ಲೋಕಾಯುಕ್ತ ಸರ್ಕಲ್ ಇನ್ಸಪೆಕ್ಟರ್ ಪ್ರಸನ್ನ ರಾಜ್ ತಮ್ಮ ತಂಡದೊಂದಿಗೆ ದಾಳಿ ಮಾಡಿ ಲೆಕ್ಕಕ್ಕಿಂತ ಅಧಿಕ ಆಸ್ತಿಯನ್ನು ಪತ್ತೆ ಹಚ್ಚಿದ್ದರು. ಸುಮಾರು 38 ಲಕ್ಷ ರೂಪಾಯಿ ಮೌಲ್ಯದ ಹೆಚ್ಚುವರಿ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಆರೋಪಪಟ್ಟಿಯನ್ನು ಕೂಡ ದಾಖಲಿಸಿದ್ದರು. ನಿರಂತರ 14 ವರ್ಷಗಳ ವಿಚಾರಣೆ ಬಳಿಕ ಈಗ ತೀರ್ಪು ಬಂದಿದೆ. ಆದರೆ ವಿಚಾರಣೆಯ ನಂತರ ನ್ಯಾಯಾಲಯ ಹೇಳಿದ್ದು ಏನೆಂದರೆ “38 ಲಕ್ಷ ರೂಪಾಯಿ ಅಲ್ಲ, 17 ಲಕ್ಷ ರೂಪಾಯಿ ಹೆಚ್ಚುವರಿ ಆಸ್ತಿಯನ್ನು ಹೊಂದಿದ್ದಾರೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಆದರೆ ಸಮಾಧಾನದ ವಿಷಯ ಎಂದರೆ ಭ್ರಷ್ಟಾಚಾರದಿಂದ ಸಂಪಾದಿಸಿದ ಆ 17 ಲಕ್ಷ ರೂಪಾಯಿ ಹೆಚ್ಚುವರಿ ಆಸ್ತಿಯನ್ನು ಆರೋಪಿ ಈ 14 ವರ್ಷಗಳ ತನಕ ಅನುಭವಿಸುತ್ತಿದ್ದ ಕಾರಣ ಅದಕ್ಕೆ ಹೆಚ್ಚುವರಿ ದಂಡವಾಗಿ 17 ಲಕ್ಷ ರೂಪಾಯಿಯನ್ನು ಸೇರಿಸಿ ಒಟ್ಟು 34 ಲಕ್ಷ ರೂಪಾಯಿಗಳನ್ನು ನ್ಯಾಯಾಲಯಕ್ಕೆ ಕಟ್ಟಬೇಕು ಎಂದು ತೀರ್ಪು ಬಂದಿದೆ.
ಅಷ್ಟೇ ಅಲ್ಲ, ಐದು ವರ್ಷಗಳ ತನಕ ಜೈಲುವಾಸದ ಶಿಕ್ಷೆಯನ್ನು ಕೂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ಸಾಧ್ಯವಿಲ್ಲವಾದರೆ ಮತ್ತೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಿನಲ್ಲಿಯೇ ಇರಬೇಕು ಎಂದು ಸೂಚಿಸಿದೆ. ಆರೋಪಿ ತನಗೆ ಅಸೌಖ್ಯ ಇದೆ, ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷೆಯಿಂದ ವಿನಾಯಿತಿ ಕೋರಿದ್ದನ್ನು ನ್ಯಾಯಾಲಯ ಮನ್ನಿಸಲೇ ಇಲ್ಲ. ಅದಕ್ಕೆ ಪ್ರತಿಯಾಗಿ ಮಾತನಾಡಿದ ನ್ಯಾಯಾಧೀಶರು ನಮ್ಮ ದೇಶದಲ್ಲಿ ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹಬ್ಬುತ್ತಿದೆ. ಈ ಹಂತದಲ್ಲಿ ಆರೋಪಿಗೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ. ಇಂತಹ ತೀರ್ಪುಗಳು ಭ್ರಷ್ಟಾಚಾರ ಮಾಡುವವರಲ್ಲಿ ಭಯ ಉಂಟುಮಾಡುವಂತಿರಬೇಕು ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ.
ಇಲ್ಲಿ ಈಗ ಇರುವ ಪ್ರಮುಖ ವಿಷಯವೇನೆಂದರೆ ಹದಿನಾಲ್ಕು ವರ್ಷ ಈ ಶಿವರಾಜ್ ತಾನು ಮಾಡಿದ ಭ್ರಷ್ಟಾಚಾರದ ಹಣದಲ್ಲಿ ಎಂಜಾಯ್ ಮಾಡುತ್ತಿದ್ದನಲ್ಲ, ಅದಕ್ಕೆ ಏನು ಕಾರಣ? ಸಂಶಯವೇ ಇಲ್ಲ, ನಮ್ಮ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆ. ಒಬ್ಬ ವ್ಯಕ್ತಿ ಭ್ರಷ್ಟಾಚಾರ ಮಾಡಿದ್ದಾನೆ ಎಂದು ಸಾಬೀತು ಆಗಲು ನಮ್ಮಲ್ಲಿ 14 ವರ್ಷಗಳು ಬೇಕಾ? ಅಷ್ಟಕ್ಕೂ ಅದು ಕೇವಲ 17 ಲಕ್ಷ ರೂಪಾಯಿಯ ಹೆಚ್ಚುವರಿ ಆದಾಯ. ಇದನ್ನೇ ಪತ್ತೆ ಹಚ್ಚಿ ಶಿಕ್ಷೆ ಆಗಲು ಒಂದೂವರೆ ದಶಕದಷ್ಟು ಸಮಯ ಬೇಕಾಗಬಹುದು ಎಂದರೆ ಇನ್ನು ಲೆಕ್ಕವಿಲ್ಲದಷ್ಟು ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರದ ಮೂಲಕ ಆಸ್ತಿಪಾಸ್ತಿ ಸಂಪಾದಿಸಿದವರನ್ನು ಹೆಡೆಮುರಿ ಕಟ್ಟಲು ಎಷ್ಟು ಶತಮಾನ ಬೇಕಾಗಬಹುದು.
ಅದಕ್ಕಾಗಿ ನಾನು ಹೇಳುವುದೇನೆಂದರೆ ಪ್ರತಿಯೊಂದು ಭ್ರಷ್ಟಾಚಾರದ ಇಂತಹ ಪ್ರಕರಣಗಳನ್ನು ಇಂತಿಷ್ಟೇ ಕಾಲಮಿತಿಯೊಳಗೆ ಮುಗಿಸಬೇಕು. ಅದರೊಳಗೆ ಶಿಕ್ಷೆಯನ್ನು ನೀಡಿದರೆ ಆಗ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡ ಬೇರೆಯವರಿಗೆ ನಿಜಕ್ಕೂ ಆತಂಕವಾಗುತ್ತದೆ. ಆರೋಪಿ ಈ ಸಮಯದಲ್ಲಿ ಇನ್ನಷ್ಟು ಭ್ರಷ್ಟಾಚಾರ ಮಾಡುವುದನ್ನು ತಪ್ಪಿಸಿದಂತೆ ಆಗುತ್ತದೆ. ಅದು ಬಿಟ್ಟು ಹೀಗೆ ಹತ್ತಾರು ವರ್ಷ ಕೇಸು ಎಳೆದುಹೋದರೆ ಒಂದಲ್ಲೊಂದು ದಿನ ಕೇಸ್ ಬಿದ್ದು ಹೋಗಲಿದೆ ಎನ್ನುವ ಹುಂಬ ವಿಶ್ವಾಸ ಭ್ರಷ್ಟರಲ್ಲಿ ಇರುತ್ತದೆ. ಈ ಪ್ರಕರಣದಲ್ಲಿ ಹೇಗೋ ಆರೋಪಿಗೆ ಶಿಕ್ಷೆಯಾಯಿತು, ಆದರೆ ಎಲ್ಲಾ ಪ್ರಕರಣದಲ್ಲಿ ಹೀಗೆ ಆಗುತ್ತಾ? ಆದ್ದರಿಂದ ನ್ಯಾಯಾಲಯ ಕಾಲಮಿತಿಯೊಳಗೆ ಪ್ರಕರಣಗಳ ಇತ್ಯರ್ಥ ಎನ್ನುವ ನಿಯಮವನ್ನು ಜಾರಿಗೆ ತರಬೇಕು. ಹಾಗಂತ ಇದೇನೂ ಅಸಾಧ್ಯವಲ್ಲ.
ನ್ಯಾಯಾಲಯಗಳು ಕೊರೊನಾ ವಿಷಯ ಬಂದಾಗ, ಆಮ್ಲಜನಕದ ಕಂಟೈನರ್ ಪೂರೈಕೆ ವಿಷಯ ಬಂದಾಗ, ರಾಜಕಾರಣದಲ್ಲಿ ಸರಕಾರದ, ಮುಖ್ಯಮಂತ್ರಿಯ ಅಳಿವು, ಉಳಿವಿನ ಪ್ರಶ್ನೆ ಬಂದಾಗ, ಭಯೋತ್ಪಾದಕರ ನೇಣುಗಂಬಕ್ಕೆ ಏರಿಸುವ ವಿಷಯ ಬಂದಾಗಲೂ ನಿರೀಕ್ಷೆಗಿಂತ ಬೇಗ ತೀರ್ಪು ನೀಡಿವೆ. ನ್ಯಾಯಾಲಯಗಳು ಕೆಲವು ಪ್ರಕರಣಗಳಲ್ಲಿ ಮಧ್ಯರಾತ್ರಿ, ಬೆಳಗ್ಗಿನ ಜಾವ ಬೇಗ ಕೆಲಸ ನಿರ್ವಹಿಸಿದ್ದು ಇದೆ. ಹಾಗಿರುವಾಗ ದೇಶದ ಕ್ಯಾನ್ಸರ್ ಆಗಿರುವ ಭ್ರಷ್ಟಾಚಾರಕ್ಕೆ ಸೂಕ್ತ ಔಷಧ ಎಂಬ ಶಿಕ್ಷೆ ನೀಡಬೇಕಾದರೆ ಒಂದು ಕಾಲಮಿತಿಯೊಳಗೆ ತೀರ್ಪು ಎನ್ನುವ ನಿಯಮ ಜಾರಿಗೆ ತರಲೇಬೇಕು. ಒಟ್ಟಿನಲ್ಲಿ ಶಿವರಾಜ್ ಗೆ ಶಿಕ್ಷೆ ಆಗಿರುವ ಪ್ರಕರಣದ ಹಿಂದೆ ಸೇವೆ ಸಲ್ಲಿಸಿದ ಲೋಕಾಯುಕ್ತದ ಆಗಿನ ಸಮಸ್ತ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಈ ಪ್ರಕರಣ ದಡ ಮುಟ್ಟುವ ತನಕ ಸೇವೆ ಸಲ್ಲಿಸಿದ ಅವರ ನ್ಯಾಯವಾದಿಗಳಿಗೆ, ಯೋಗ್ಯ ತೀರ್ಪು ನೀಡಿ ಮಾದರಿಯಾಗಿರುವ ನ್ಯಾಯಮೂರ್ತಿಗಳಿಗೆ ಸಮಸ್ತ ನಾಗರಿಕರ ಪರವಾಗಿ ಧನ್ಯವಾದಗಳು. ಇದರಿಂದಲಾದರೂ ನಮ್ಮ ನಗರ ಯೋಜನಾ ವಿಭಾಗ ಒಂದಿಷ್ಟು ಶುದ್ಧಿಯಾದರೆ ಅದು ನಮ್ಮ ಪುಣ್ಯ!!
0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search