ಭಾಗವತ್ ರು ಜಾತಿ ಬೇಡಾ ಎಂದರೆ ರಾಜ್ಯ ಸರಕಾರ ಮೀಸಲಾತಿ ಹೆಚ್ಚಿಸುತ್ತಿದೆ!

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕು ಎನ್ನುವ ಆ ಸಮುದಾಯದ ಹಳೆ ಬೇಡಿಕೆಯನ್ನು ರಾಜ್ಯ ಸರಕಾರ ಸರ್ವ ಪಕ್ಷ ಮುಖಂಡರ ಸಭೆ ಕರೆದು ಚರ್ಚಿಸಿ ನಂತರ ಕ್ಯಾಬಿನೆಟ್ ನಲ್ಲಿ ಪಾಸು ಮಾಡಿದೆ. ಇನ್ನು ನೋಡಬೇಕಾಗಿರುವುದು ಕೇಂದ್ರ ಸರಕಾರದತ್ತ. ಯಾಕೆಂದರೆ 50% ಮೀಸಲಾತಿ ದಾಟಬೇಕಾದರೆ ಅದಕ್ಕೆ ಹೊಸ ನಿಯಮ ಬೇಕು. ಇದರೊಂದಿಗೆ ಯಾವ ಪಕ್ಷದ ಸರಕಾರ ಇದ್ದರೂ ಯಾವ ಸಮಾಜಕ್ಕೆ ಎಷ್ಟು ಮೀಸಲಾತಿ ಕೊಡಬೇಕು ಎನ್ನುವುದು ರಾಜ್ಯ ಸರಕಾರಕ್ಕೆ ಇರುವ ಅತೀ ದೊಡ್ಡ ಸವಾಲು. ಒಂದು ಜಾತಿಗೆ ಕೊಟ್ಟು ಇನ್ನೊಂದಕ್ಕೆ ಕೊಡದೇ ಹೋದರೆ ಕೊಡದೇ ಇದ್ದ ಜಾತಿಯವರು ಉಲ್ಟಾ ಹೊಡೆಯಲೂಬಹುದು. ಇನ್ನು ಒಂದು ಜಾತಿಗೆ ಇಂತಿಷ್ಟೇ ಎಂದು ಮೀಸಲಾತಿ ಕೊಟ್ಟಾಗ ಅದರ ಉಪಜಾತಿಗಳಿಗೆ ಅದರಲ್ಲಿ ಎಷ್ಟೇಷ್ಟು ಎನ್ನುವ ಲೆಕ್ಕಾಚಾರ ಕೂಡ ಬಹಳ ಪ್ರಮುಖವಾದ ಅಂಶ. ಇನ್ನು ಈ ಬಾರಿಯಂತೂ ಬಸ್ಸು ಬೊಮ್ಮಾಯಿಯವರು ಕುಮ್ಮಿ ಹಾಗೂ ಸಿದ್ದುವನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿ ಸಭೆ ಮಾಡಿ ಅವರ ಸಮ್ಮತಿಯ ಮೇರೆಗೆ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಇಲ್ಲದೇ ಹೋದರೆ ಅದು ಕೂಡ ರಾಜಕೀಯವಾಗುತ್ತಿತ್ತು. ಅದರೊಂದಿಗೆ ಚುನಾವಣೆ ಹತ್ತಿರ ಇರುವಾಗ ಶಾಂತವಾಗಿರುವ ರಾಜ್ಯದ ಪ್ರಮುಖ ವೋಟ್ ಬ್ಯಾಂಕ್ ಎಸ್ ಸಿ ಹಾಗೂ ಎಸ್ ಟಿ ಸಮುದಾಯವನ್ನು ಲೈಟಾಗಿ ತೆಗೆದುಕೊಳ್ಳಲು ಯಾವ ಪಕ್ಷ ಕೂಡ ಸಿದ್ಧವಿಲ್ಲ. ರಾಹುಲ್ ರಾಜ್ಯದಲ್ಲಿ ವಾಕಿಂಗ್ ಮಾಡ್ತಾ ಇರುವಾಗ ಅವರಿಂದ ಒಂದು ನಿಮಿಷವೂ ದೂರ ಹೋಗಲು ಬಯಸದ ಸಿದ್ದು ಅವರಿಗೆ ಸಿಎಂ ಕರೆ ಮಾಡಿ ಮೀಸಲಾತಿ ಮೀಟಿಂಗ್ ಕರೆದಿದ್ದೇನೆ, ಬಂದುಬಿಡಿ ಎಂದು ಹೇಳಿದಾಗ ದೂಸರಾ ಮಾತಿಲ್ಲದೇ ರಾಹುಲ್ ಅವರನ್ನು ಅರ್ಧ ದಾರಿಯಲ್ಲಿ ಬಿಟ್ಟು “ಅಭಿ ಆತಾ ಹೂಂಜಿ” ಎಂದು ಉಟ್ಟ ಪಂಚೆಯಲ್ಲಿಯೇ ವಿಧಾನಸೌಧಕ್ಕೆ ಓಡಿ ಬಂದಿದ್ದಾರೆ. ಯಾಕೆಂದರೆ ಅವರಿಗೆ ಗೊತ್ತು. ಒಂದು ವೇಳೆ ಅವರು ಇಲ್ಲದೇ ಹೋದರೆ ಅದರಿಂದ ಆ ಸಮುದಾಯಗಳಿಗೆ ಹೋಗುವ ಸಂದೇಶವಾದರೂ ಏನು? ನಮ್ಮ ಮೀಸಲಾತಿಯನ್ನು ಹೆಚ್ಚಳ ಮಾಡುವ ಸಿಎಂ ಸಭೆಯಲ್ಲಿ ಸಿದ್ದು ಭಾಗವಹಿಸದೇ ನಿರ್ಲಕ್ಷ್ಯ ಮಾಡಿದರು ಎಂದು ಆ ಸಮುದಾಯದವರಿಗೆ ಸುದ್ದಿ ಮುಟ್ಟಿದರೆ ನಂತರ ಸಿದ್ದು ಈ ಜನ್ಮದಲ್ಲಿ ಮತ್ತೆ ಸಿಎಂ ಆಗುವುದು ಕನಸಿನ ಮಾತಾಗಿತ್ತು.
ಇನ್ನು ಇದರಲ್ಲಿ ಕೂಡ ಬೊಮ್ಮಾಯಿ ಅಂದುಕೊಂಡಂತೆ ಕೇಂದ್ರ ಸರಕಾರ ಇವರದ್ದೇ ಆಗಿದ್ದರೂ ಮೀಸಲಾತಿ ಹೆಚ್ಚಳ ಮಾಡುವುದು ಟೆಕ್ನಿಕಲಿ ಅಷ್ಟು ಸುಲಭದ ಮಾತಲ್ಲ. ಅದರಲ್ಲಿ ತುಂಬಾ ಯೋಚಿಸಬೇಕಾಗಿರುವ ಸಂಗತಿಗಳಿವೆ. ತಮಿಳುನಾಡು ಬಿಟ್ಟರೆ ಯಾವ ರಾಜ್ಯ ಕೂಡ ಕಾನೂನಾತ್ಮಕವಾಗಿ 50% ಮೀಸಲಾತಿ ಗಡಿಯನ್ನು ದಾಟಿ ಮುಂದೆ ಹೋಗಲು ಇಲ್ಲಿ ತನಕ ಆಗಿಲ್ಲ. ಒಂದು ವೇಳೆ ಚುನಾವಣೆ ಇದೆ ಎನ್ನುವ ಕಾರಣಕ್ಕೆ ಕೇಂದ್ರ ಕರ್ನಾಟಕಕ್ಕೆ ಅವಕಾಶ ಕೊಟ್ಟರೆ ನಂತರ ಬೇರೆ ರಾಜ್ಯಗಳಿಗೂ ಅವಕಾಶ ನೀಡಬೇಕಾಗುತ್ತದೆ. ಇದು ಎಷ್ಟರಮಟ್ಟಿಗೆ ಯೋಗ್ಯ ಎನ್ನುವ ಚಿಂತನೆ ಸರಕಾರದ ಮುಂದಿರುತ್ತದೆ. ಯಾವಾಗ ಸರಕಾರ ಫ್ರೀಬಿ ಅಂದರೆ ಉಚಿತ ಕೊಡುಗೆಗಳ ಆಶ್ವಾಸನೆಯನ್ನು ಕೊಡುವಾಗ ಯೋಚಿಸಬೇಕು ಎಂದು ಈಗಾಗಲೇ ಚುನಾವಣಾ ಆಯೋಗ ಪಕ್ಷಗಳಿಗೆ ಚಾಟಿಯೇಟು ಬೀಸಿದೆ. ಹೀಗಿರುವಾಗ ಮೀಸಲಾತಿ ಹೆಚ್ಚಿಸುವ ನಿರ್ಧಾರಗಳ ಹಿಂದೆ ಒಂದೊಂದು ಶೇಕಡಾವೂ ಲೆಕ್ಕಾಚಾರ ಅಡಗಿದೆ. ಆದರೆ ಯಾವಾಗಲೂ ವೋಟಿನ ಚಿಂತೆಯಲ್ಲಿರುವ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಅಲ್ಲದ ಸಮುದಾಯದ ಬಗ್ಗೆನೂ ಸ್ವಲ್ಪ ಯೋಚಿಸಬೇಕು ಎನ್ನುವುದು ಈ ಜಾಗೃತ ಅಂಕಣದ ಉದ್ದೇಶ.
ಈಗ ಮೇಲ್ವರ್ಗ ಎಂದು ನಾಮಕಾವಾಸ್ತೆ ಹೇಳಿಕೊಳ್ಳುವ ಬ್ರಾಹ್ಮಣರಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣರು ಅಂದ ಕೂಡಲೇ ಎಲ್ಲರೂ ಶ್ರೀಮಂತರು, ಹಿಂದುಳಿದ ವರ್ಗದವರು ಎಂದ ಕೂಡಲೇ ಅವರು ಬಡವರು ಎನ್ನುವುದು ಶುದ್ಧ ತಪ್ಪು. ಬ್ರಾಹ್ಮಣರಲ್ಲಿಯೂ ತುಂಬಾ ಜನ ಆರ್ಥಿಕ ರೇಖೆಗಿಂತ ಕೆಳಗೆ ಇದ್ದಾರೆ. ಆದ್ದರಿಂದ ಅಂತವರಿಗೆ ಮೀಸಲಾತಿಯಲ್ಲಿ 10% ಕೊಡುವುದಕ್ಕೆ ಈಗಾಗಲೇ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಅದನ್ನು ರಾಜ್ಯ ಸರಕಾರ ಇನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ನಮ್ಮ ಬಸ್ಸು ಬೊಮ್ಮಾಯಿಯವರು ಕೂಡ ಗಮನ ಹರಿಸಬೇಕು. ಅವರಿಗೆ ಬ್ರಾಹ್ಮಣರ ಮತಗಳು ಬೇಕು ಎಂದಾದರೆ ಕೇಂದ್ರ ಸರಕಾರದ 10% ಮೀಸಲಾತಿ ಬ್ರಾಹ್ಮಣರಿಗೆ ಸಿಗುವ ಹಾಗೆ ಮಾಡಬೇಕು. ವರ್ಷಕ್ಕೆ ಒಂದು ಕುಟುಂಬದ ಆದಾಯ ಎಂಟು ಲಕ್ಷ ರೂಪಾಯಿ ಮೀರದಿದ್ದರೆ ಅಂತಹ ಬ್ರಾಹ್ಮಣರಿಗೆ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿದೆ.
ಈ ನಡುವೆ ಈ ಜಾತಿ ವ್ಯವಸ್ಥೆಯನ್ನೇ ತೆಗೆದುಬಿಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾಗಿರುವ ಮೋಹನ್ ಭಾಗವತ್ ಹೇಳಿದ್ದಾರೆ. ಈಗಿನ ಕಾಲಕ್ಕೆ ಇದರ ಅಗತ್ಯ ಇಲ್ಲ ಎಂದಿದ್ದಾರೆ. ಇದು ಕೂಡ ಯೋಚಿಸಬೇಕಾದ ಅಂಶ. ಒಬ್ಬ ವ್ಯಕ್ತಿ ತನ್ನ ಸ್ವ ಸಾಮರ್ತ್ಯದಿಂದ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಗಳಿಸಬೇಕೆ ವಿನ: ಆತನ ಜಾತಿಯ ಕಾರಣದಿಂದ ಅಲ್ಲ. ಅದೇ ರೀತಿಯಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಪರಿಶ್ರಮದಿಂದ ಉನ್ನತ ಸೀಟುಗಳನ್ನು ಪಡೆಯಬೇಕೆ ಹೊರತು ಇಂತಹ ಜಾತಿಗಳಲ್ಲಿ ಹುಟ್ಟಿದ್ದಾನೆ ಅಥವಾ ಹುಟ್ಟಿದ್ದಾಳೆ ಎನ್ನುವ ಕಾರಣಕ್ಕೆ ಅಲ್ಲ. ಒಬ್ಬ ಮನುಷ್ಯ ಬಡತನ ರೇಖೆಗಿಂತ ಕೆಳಗೆ ಇದ್ದರೆ ಅವನನ್ನು ಎತ್ತುವ ಕೆಲಸ ಮಾಡಬೇಕಾಗಿರುವುದು ಸರಕಾರದ ಧರ್ಮ. ಆದರೆ ಕೇವಲ ವೋಟ್ ಬ್ಯಾಂಕ್ ಗಾಗಿ ಇಂತಹ ಜಾತಿಯಲ್ಲಿ ಹುಟ್ಟಿದ್ದಾನೆ ಎನ್ನುವ ಕಾರಣಕ್ಕೆ ಸವಲತ್ತು ಪಡೆಯುವುದು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸರಿಯೆ ಎನ್ನುವ ಪ್ರಶ್ನೆಯನ್ನು ಮೀಸಲಾತಿಗಾಗಿ ಧರಣಿ ಕುಳಿತುಕೊಳ್ಳುವವರು ಯೋಚಿಸಬೇಕು!!
Leave A Reply