ಟ್ರಾಫಿಕ್ ಸಿಗ್ನಲ್ ಹಿಂದೆ ಲೆಕ್ಕಾಚಾರಗಳಿವೆ!!
ಮಂಗಳೂರಿನ ಕೆಪಿಟಿ ಜಂಕ್ಷನ್, ನಂತೂರ್ ಜಂಕ್ಷನ್ ನಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸಿಗ್ನಲ್ ಲೈಟ್ ನಲ್ಲಿ ಅಲ್ಲಿರುವ ವಾಹನಗಳ ದಟ್ಟಣೆಯನ್ನು ಪರಿಶೀಲಿಸಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಇಂತಿಷ್ಟು ಎಂದು ಸಮಯ ರೆಡ್ ಸಿಗ್ನಲ್, ಗ್ರೀನ್ ಸಿಗ್ನಲ್ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಕೆಲವು ಸಿಗ್ನಲ್ ಗಳು ಅರವತ್ತು ಸೆಕೆಂಡ್ಸ್, ತೊಂಭತ್ತು ಸೆಕೆಂಡ್ಸ್, ನೂರಿಪ್ಪತ್ತು ಸೆಕೆಂಡ್ಸ್ ಹೀಗೆ ಫಿಕ್ಸ್ ಮಾಡಿಕೊಳ್ಳಲಾಗಿರುತ್ತದೆ. ಅದರ ಹಿಂದೆ ಟ್ರಾಫಿಕ್ ಪೊಲೀಸ್ ಉನ್ನತ ಅಧಿಕಾರಿಗಳ ಲೆಕ್ಕಾಚಾರಗಳಿರುತ್ತವೆ. ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು, ಬ್ಲಾಕ್ ಆಗುವ ಸಮಯ, ಅಪಘಾತ ವಲಯ ಹೀಗೆ ನಿರಂತರವಾಗಿ ಪರಿಶೀಲಿಸಿ ಇಂತಿಷ್ಟು ಸಮಯ ಎಂದು ನಿರ್ಧರಿಸಿ ಟ್ರಾಫಿಕ್ ಸಿಗ್ನಲ್ ಸೆಟ್ ಮಾಡಲಾಗುತ್ತದೆ. ಕೆಲವೊಮ್ಮೆ ಕೆಲವು ಸಿಗ್ನಲ್ ಗಳಲ್ಲಿ ಪರೀಕ್ಷಾರ್ಥವಾಗಿ ಇಂತಿಷ್ಟು ದಿನ ಇಂತಿಷ್ಟು ಸಮಯ ಎಂದು ಟ್ರಾಫಿಕ್ ಟೈಮ್ ನಿಗದಿಗೊಳಿಸಲಾಗುತ್ತದೆ. ಇಂತಹ ಹೊತ್ತಿನಲ್ಲಿ ಕೆಲವೊಮ್ಮೆ ಕೆಲವು ನಿಮಿಷ ಹೆಚ್ಚು ಟ್ರಾಫಿಕ್ ನಲ್ಲಿ ಕಾಯಬೇಕಾಗಿ ಬಂದರೆ ಅದನ್ನು ಒಂದು ದೊಡ್ಡ ವಿವಾದವನ್ನಾಗಿ ಮಾಡುವ ಅವಶ್ಯಕತೆ ಇಲ್ಲ.
ಹಿಂದೆ ಕೂಡ ಕೆಪಿಟಿ, ನಂತೂರ್ ಬಳಿ ಸಿಗ್ನಲ್ ಹಾಕಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ನಂತರ ಜನರಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣ ಮತ್ತು ಪ್ರಭಾವಿಗಳ ಒತ್ತಡದಿಂದ ಅದನ್ನು ತೆಗೆದುಹಾಕಲಾಗಿತ್ತು. ಆಗ ನಷ್ಟವಾದದ್ದು ಮತ್ತೆ ನಮ್ಮ ತೆರಿಗೆಯ ಹಣ. ಆ ಬಳಿಕ ನಿರಂತರ ಅಪಘಾತಗಳು, ಸಾವು, ನೋವುಗಳು ಆಗುವಾಗ ಪೊಲೀಸ್ ಇಲಾಖೆ ಏನಾದರೂ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಡ ಕಂಡುಬಂದಿತು. ಅದನ್ನು ಪರಿಗಣಿಸಿ ಈಗ ಮತ್ತೆ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಪ್ರಕ್ರಿಯೆ ನಡೆದಿದೆ. ಇದರಿಂದ ಒಂದಿಷ್ಟು ಟ್ರಾಫಿಕ್ ಸಿಗ್ನಲ್ ಗ್ರೀನ್ ಆಗಲು ಸವಾರರು ಕಾಯಬೇಕಾದ ಪರಿಸ್ಥಿತಿ ಬರಬಹುದು. ಆದರೆ ಅದರಿಂದ ಆಗುವ ಪ್ರಯೋಜನಗಳು ಮಾತ್ರ ಹಲವಾರು. ಅಪಘಾತಗಳು ಕಡಿಮೆಯಾಗುತ್ತವೆ. ಅಮಾಯಕ ಜೀವಗಳು ಉಳಿಯುತ್ತವೆ. ಆಸ್ಪತ್ರೆಯಲ್ಲಿ ಯಾರೋ ನರಳುವುದು ನಿಲ್ಲುತ್ತದೆ. ನಾವು ಯಾವ ಯಾವುದಕ್ಕೋ ಸಮಯವನ್ನು ವ್ಯರ್ಥ ಮಾಡುತ್ತೇವೆ. ಎಲ್ಲೆಲ್ಲಿಯೋ ಹರಟೆ, ಪಟ್ಟಾಂಗದಲ್ಲಿ ದಿನದ ಎಷ್ಟೋ ನಿಮಿಷಗಳನ್ನು ಕಳೆಯುತ್ತೇವೆ. ಹಾಗಿರುವಾಗ ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಬೆರಳೆಣಿಕೆಯಷ್ಟು ನಿಮಿಷಗಳನ್ನು ಕಳೆದರೆ ಯಾವುದೋ ಮನೆಯ ದೀಪ ಆರುವುದಿಲ್ಲ ಎಂದಾದರೆ ಬೊಬ್ಬೆ ಯಾಕೆ? ಪ್ರಪಂಚದ ಯಾವುದೋ ಮೂಲೆಯಲ್ಲಿ ಕೂಡ ಮಗು ಹುಟ್ಟಿದ ತಕ್ಷಣ ಮಾತನಾಡುವುದಿಲ್ಲ. ಅದಕ್ಕೂ ಸಮಯ ಹಿಡಿಯುತ್ತದೆ. ಇಲ್ಲಿ ಕೂಡ ಪ್ರಯೋಗಾರ್ಥವಾಗಿ ಮಾಡುವ ವ್ಯವಸ್ಥೆಗಳಿಂದ ಎಲ್ಲವೂ ಹಳಿಯ ಮೇಲೆ ಬರಲು ಸಮಯ ತಗಲುತ್ತದೆ. ಅದಕ್ಕಾಗಿ ಏಳೂವರೆ ತಿಂಗಳಿಗೆ ಹುಟ್ಟಿದವರಂತೆ ಯಾರೂ ವರ್ತಿಸಬಾರದು. ನಮಗೆ ತಾಳ್ಮೆ ಮುಖ್ಯ. ಸಮಯ ಉಳಿಸಲು ಹೋಗಿ ಹೆಚ್ಚು ಕಡಿಮೆ ಆದರೆ ನಂತರ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಫ್ಯಾನ್ ರೆಕ್ಕೆ ಎಣಿಸುವುದೇ ಕೆಲಸವಾಗಿ ಬಿಡುವ ಸಾಧ್ಯತೆ ಇದೆ. ಹಾಗೆ ಆಗಬಾರದು ಎಂದರೆ ನಾವು ಪೊಲೀಸ್ ವ್ಯವಸ್ಥೆ, ಸ್ಥಳೀಯಾಡಳಿತದೊಂದಿಗೆ ಸಹಕರಿಸಬೇಕು.
ನೀವು ಒಬ್ಬರು ಗಡಿಬಿಡಿ ಮಾಡುವುದರಿಂದ ಯಾರೂ ಸಾಯಲ್ಲ ಎಂದು ನಿಮಗೆ ಅನಿಸಬಹುದು. ಇದು ಹೇಗೆ ಎಂದರೆ ನಾನು ಒಬ್ಬ ವೋಟ್ ಹಾಕದಿದ್ದರೆ ಏನಾಗುತ್ತದೆ ಎನ್ನುವಂತೆ ಆಗುತ್ತದೆ. ಎಲ್ಲರೂ ಹೀಗೆ ಅಂದುಕೊಳ್ಳುವುದರಿಂದ ಒಬ್ಬ ಒಳ್ಳೆಯ ಅಭ್ಯರ್ಥಿ ಸೋಲಲುಬಹುದು. ಯಾರೋ ಅಸಮರ್ಥರು ಗೆಲ್ಲಲೂಬಹುದು. ರಸ್ತೆಯಲ್ಲಿ ನಮ್ಮ ಗಡಿಬಿಡಿ ಕೂಡ ಹೀಗೆಯೇ. ನೀವು ರಸ್ತೆಯಲ್ಲಿ ಗಡಿಬಿಡಿಯಲ್ಲಿ ಪ್ರಯಾಣಿಸಿ ಯಾರನ್ನೋ ಓವರ್ ಟೇಕ್ ಮಾಡುತ್ತೀರಿ, ಎಲ್ಲಿಯೋ ನುಸುಳಿ ಹೋಗಿರುತ್ತೀರಿ. ಅದನ್ನು ಎಲ್ಲರೂ ಅನುಸರಿಸುತ್ತಾ ಹೋಗುತ್ತಾರೆ. ಪ್ರತಿಯೊಬ್ಬರು ಹೀಗೆ ಮಾಡುವಾಗ ಏನಾಗುತ್ತದೆ. ಯಾವಾಗ ಅಪಘಾತ ನಡೆದು ಯಾರ ಮನೆಯಲ್ಲಿ ಯಾರು ಅನಾಥರಾದರು ಎಂದು ಗೊತ್ತಾಗುವುದಿಲ್ಲ. ಇದೆಲ್ಲವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ತಂದೆಯೋ, ತಾಯಿಯೋ, ಸಹೋದರನೋ, ಸಹೋದರಿಯೋ, ಪತಿ, ಪತ್ನಿ ಹೀಗೆ ಅಮಾಯಕ ಜೀವಗಳು ತೆತ್ತ ಪ್ರಾಣಗಳ ಹಿಂದೆ ಯಾರದ್ದೋ ಅವಸರ ಇರುತ್ತದೆ. ಇನ್ಯಾರದ್ದೋ ಧಾವಂತ ಇರುತ್ತದೆ. ಮತ್ತೆ ಯಾರದ್ದೋ ನಿರ್ಲಕ್ಷ್ಯ ಇರುತ್ತದೆ. ಆದ್ದರಿಂದ ನಮಗೆ ಯಾರದ್ದೋ ಕುಂಕುಮ ಅಳಿಸುವ ಹಕ್ಕಿಲ್ಲ. ಯಾರದ್ದೋ ತಾಯಿ ಜೀವವನ್ನು ಕಸಿಯುವ ಯೋಗ್ಯತೆ ಇಲ್ಲ. ನಾವು ಏನು ಮಾಡಬಹುದು ಎಂದರೆ ಯಾವುದೋ ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಲವು ನಿಮಿಷ ಕಾಯುವ ಮೂಲಕ ಯಾರದ್ದೋ ಪ್ರಾಣ ಉಳಿಸಬಹುದು. ಅಷ್ಟೇ.
ಇನ್ನು ಮಂಗಳೂರಿನ ಸಿಟಿ ಬಸ್ಸುಗಳು ಕೂಡ ಸ್ಟೇಟ್ ಬ್ಯಾಂಕಿನಿಂದ ಸಿಟಿ ಸೆಂಟರ್ ತನಕ ಬರುವ ವೇಗಕ್ಕೂ ನಂತರ ಆ ಸಮಯವನ್ನು ಹೊಂದಿಸಲು ತೆಗೆದುಕೊಳ್ಳುವ ಆವೇಶಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅದರಿಂದ ಏನಾಗುತ್ತದೆ ಎಂದರೆ ಒಂದೊಂದು ನಿಮಿಷವನ್ನು ಕೂಡ ಉಳಿಸುವ ನಿಟ್ಟಿನಲ್ಲಿ ತೋರಿಸುವ ವೇಗದಿಂದ ಅಪಘಾತಗಳು ಸಂಭವಿಸುತ್ತವೆ. ಇದನ್ನು ಕೂಡ ಟ್ರಾಫಿಕ್ ಪೊಲೀಸರು ಗಮನಿಸಬೇಕು.
Leave A Reply