ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!

ಇನ್ನು ಮುಂದೆ ಉತ್ತರಾಖಂಡದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯವೆಂದು ಉತ್ತರಾಖಂಡ ಸರಕಾರ ಆದೇಶ ಹೊರಡಿಸಿದೆ. ಜುಲೈ 14 ರಂದು ಆದೇಶ ಹೊರಡಿಸಲಾಗಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲಿ ಬೆಳಗ್ಗೆ ಭಗವದ್ಗೀತೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕೆಂದು ನಿರ್ದೇಶನ ನೀಡಲಾಗಿದೆ. ದಿನವೂ ಒಂದು ಶ್ಲೋಕವನ್ನು ಪಠಿಸುವುದಷ್ಟೇ ಅಲ್ಲದೇ ಒಂದು ಶ್ಲೋಕವನ್ನು ವಾರದ ಶ್ಲೋಕವೆಂದು ಘೋಷಿಸಿ ಅದರ ಅರ್ಥದೊಂದಿಗೆ ನೋಟಿಸ್ ಬೋರ್ಡಿನಲ್ಲಿ ಬರೆಯುವಂತೆ ಕೇಳಲಾಗಿದೆ.
ಭಗವದ್ಗೀತೆಯ ತತ್ವಗಳು ಮಾನವ ಮೌಲ್ಯಗಳು, ನಡವಳಿಕೆ, ನಾಯಕತ್ವ ಕೌಶಲ್ಯಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ತ್ಯ, ಭಾವನಾತ್ಮಕ ಸಮತೋಲನ ಮತ್ತು ವೈಜ್ಞಾನಿಕ ಚಿಂತನೆಯನ್ನು ಹೇಗೆ ಅಭಿವೃದ್ಧಿಪಡಿಸುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ – 2020 ರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಪ್ರದಾಯ ಮತ್ತು ಜ್ಞಾನ ವ್ಯವಸ್ಥೆಯ ಆಧಾರದ ಜೊತೆಗೆ ವಿವಿಧ ವಿಷಯಗಳನ್ನು ಕಲಿಸಲಾಗುವುದು ಎಂದು ಶಿಕ್ಷಣ ನಿರ್ದೇಶಕ ಡಾ. ಮುಕುಲ್ ಕುಮಾರ್ ಸತಿ ಹೇಳಿದರು.
ಮದರಸಾ ಶಿಕ್ಷಣ ಮಂಡಳಿ ಅಧ್ಯಕ್ಷ ಮುಫ್ತಿ ಸ್ವಾಗತ
ಉತ್ತರಾಖಂಡ್ ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ಅವರು ಸರಕಾರದ ಈ ಉಪಕ್ರಮವನ್ನು ಸ್ವಾಗತಿಸಿದ್ದು, ಶಾಲೆಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣವನ್ನು ಕಲಿಸುವುದು ಮತ್ತು ಜನರಿಗೆ ಅವುಗಳ ಪರಿಚಯ ಮಾಡಿಕೊಡುವುದು ಬಹಳ ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ರಾಮ ಮತ್ತು ಕೃಷ್ಣ ಇಬ್ಬರೂ ನಮ್ಮ ಪೂರ್ವಜರು ಮತ್ತು ಪ್ರತಿಯೊಬ್ಬ ಭಾರತೀಯನು ಅವರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಪುಸ್ತಕದಲ್ಲಿ…
ಇನ್ನು ಉತ್ತರಾಖಂಡದಲ್ಲಿ ರಾಜ್ಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಮೇ 6 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶ್ರೀಮದ್ ಭಗವದ್ಗೀತೆ ಮತ್ತು ರಾಮಾಯಣವನ್ನು ಅದರಲ್ಲಿ ಸೇರಿಸಲು ಸೂಚನೆಗಳನ್ನು ನೀಡಿದ್ದರು. ಭಗವದ್ಗೀತೆ ಮತ್ತು ರಾಮಾಯಣವನ್ನು ಸಹ ರಾಜ್ಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಸೇರಿಸಲಾಗಿದೆ ಮತ್ತು ಇದರ ಪ್ರಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಪುಸ್ತಕಗಳು ಲಭ್ಯವಾಗಲಿವೆ.
ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಸುಮಾರು 17000 ಸರಕಾರಿ ಶಾಲೆಗಳಲ್ಲಿ ಜಾರಿಗೆ ಬಂದಿದೆ.
ಇನ್ನು ಭಗವದ್ಗೀತೆ ಬೋಧನೆ ಜಾರಿಗೆ ತಂದ ಮೊದಲ ರಾಜ್ಯ ಎಂದು ಉತ್ತರಖಂಡ ಎಂದು ಕೆಲವರು ಹೇಳಿಕೊಳ್ಳುತ್ತಿದ್ದರೂ, ದೇಶದಲ್ಲಿ ಈ ರೀತಿಯ ನಡೆ ಇದೇ ಮೊದಲೇನಲ್ಲ. ಈ ಹಿಂದೆ ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ಇದೇ ರೀತಿಯ ಘೋಷಣೆಗಳನ್ನು ಮಾಡಿದ್ದವು. ಗುಜರಾತ್ 2022 ರಲ್ಲಿ ಆರರಿಂದ 12 ತರಗತಿವರೆಗಿನ ಭಗವದ್ಗೀತೆ ತರಗತಿಗಳನ್ನು ಪರಿಚಯಿಸಿತು. ಪ್ರಾರ್ಥನೆಗಳಲ್ಲಿ ಶ್ಲೋಕಗಳನ್ನು ಮತ್ತು ಪಠ್ಯಪುಸ್ತಕಗಳಲ್ಲಿ ಅಧ್ಯಾಯಗಳನ್ನು ಸೇರಿಸಿತ್ತು. ಇನ್ನು ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ 2022-23 ರ ಶೈಕ್ಷಣಿಕ ಅವಧಿಯಲ್ಲಿ ತಜ್ಞರ ಸಮಾಲೋಚನೆಯ ನಂತರ ನೈತಿಕ ವಿಜ್ಞಾನದ ಅಡಿಯಲ್ಲಿ ಗೀತಾ ಪಠಣಗಳನ್ನು ಸೇರಿಸುವ ಯೋಜನೆಯನ್ನು ಪ್ರಕಟಿಸಲಾಗಿತ್ತು.