ಬಕ್ರೀದ್ ಗೆ ರಜೆ ಹೊಂದಿಸುವ ತನ್ವೀರ್ ಸೇಠರೇ ನವರಾತ್ರಿಗೆ ಏಕೆ ಹೀಗೆ ಮಾಡುತ್ತೀರಿ?
ನಾನು ಯಾವ ಜಾತಿ, ಧರ್ಮದ ವಿರುದ್ಧವೂ ಮಾತನಾಡುತ್ತಿಲ್ಲ. ನಾನು ಇವತ್ತು ಮಾತನಾಡುತ್ತಿರುವುದು ಮಕ್ಕಳ ಪರವಾಗಿ. ಆದರೆ ಕರ್ನಾಟಕ ಸರಕಾರದ ಘನತೆವೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸೂಕ್ಷ್ಮ ಸಂವೇದನೆ ಕಳೆದುಕೊಂಡಿರುವುದರಿಂದ ನನ್ನ ಆಕ್ರೋಶ ಜಾತ್ಯಾತೀತರ ಮೇಲೆ ಹೋಗಿದೆ, ಅಷ್ಟೇ. ಹಾಗಂತ ಇವರು ಸಂವೇದನೆ ಕಳೆದುಕೊಂಡಿರುವುದು ಹಿಂದೂಗಳ ಧಾರ್ಮಿಕ ಹಬ್ಬಗಳ ವಿಷಯದಲ್ಲಿ ಮಾತ್ರ. ಆದ್ದರಿಂದ ಇವತ್ತಿನ ನನ್ನ ಬರವಣಿಗೆಯಲ್ಲಿ ಜಾತಿ, ಧರ್ಮ ಅಡಗಿದೆ ಬಿಟ್ಟರೆ ಉದ್ದೇಶಪೂರಿತವಲ್ಲ.
ಹಿಂದೂಗಳ ಪಾಲಿಕೆ ನವರಾತ್ರಿ ಮಹತ್ವದ ಧಾರ್ಮಿಕ ಹಬ್ಬ. ಹಿಂದೂಗಳಲ್ಲಿ ಕನಿಷ್ಠ 95 ಜನರು ಒಂಬತ್ತು ದಿನಗಳಲ್ಲಿ ದೇವಿ ದೇವಸ್ಥಾನಗಳಿಗೆ ತೆರಳಿ ಸೇವೆ ಮಾಡಿಸಿ, ದೇವರ ಪ್ರಸಾದ ಸ್ವೀಕರಿಸುವುದು ಸಂಪ್ರದಾಯ. ಇನ್ನು ಒಂದು ಊರಿನಲ್ಲಿ ಕನಿಷ್ಠ ಮೂರ್ನಾಲ್ಕು ಕಡೆ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪಿಸಿ ಎಲ್ಲೆಡೆ ಸಂಭ್ರಮಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮೈಸೂರು ನಂತರ ಅತ್ಯಂತ ಹೆಚ್ಚು ವೈಭವದಿಂದ ನಡೆಯುವುದು ಮಂಗಳೂರು ದಸರಾ. ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲಿ ನವರಾತ್ರಿಯ ಸೊಬಗನ್ನು ಕಣ್ಣು ತುಂಬಲು ನಮ್ಮ ಜಿಲ್ಲೆ, ಕರಾವಳಿ ಮೂಲೆ ಮೂಲೆಗಳಿಂದ ಜನರು ಬಂದು ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ.
ಸೆ.21 ರಿಂದ ದಸರಾ ಆರಂಭವಾಗುತ್ತದೆ. ಆವತ್ತಿನಿಂದ ಹುಲಿವೇಷಗಳ ಅಬ್ಬರ, ತಾಳೆ, ಡೋಲಿನ ಮಾರ್ಧನಿ ನಮ್ಮೆಲ್ಲರ ಕಿವಿಗೆ ಅಪ್ಪಳಿಸುತ್ತವೆ. ಹುಲಿವೇಷಗಳು ಅರ್ಧ ಕಿಲೋ ಮೀಟರ್ ದೂರ ಇವೆ ಎನ್ನುವಾಗಲೇ ಮಕ್ಕಳ ಮುಖದಲ್ಲಿ ಅದೇನೊ ಕುತೂಹಲ. ತಮ್ಮ ರಸ್ತೆಯಲ್ಲಿ ಹುಲಿವೇಷದ ನರ್ತನ ಶುರುವಾಗುತ್ತಿದ್ದಂತೆ ಆ ಕೇರಿಯ ಎಲ್ಲ ಮಕ್ಕಳು ಅಲ್ಲಿಗೆ ಧಾವಿಸುತ್ತಾರೆ. ಹುಲಿ ವೇಷದ ತಂಡ ತಮ್ಮ ಕೇರಿ, ಓಣಿಯಲ್ಲಿ ನಲಿದು ಹೋದ ಮೇಲೆ ಅದನ್ನು ಒಂದಿಷ್ಟು ದೂರ ಹಿಂಬಾಲಿಸುವ ಖುಷಿ ಅವರಲ್ಲಿ ಇರುತ್ತದೆ. ಒಂದರಿಂದ ಒಂಬತ್ತನೇ ತರಗತಿವರೆಗಿನ ಮಕ್ಕಳ ಖುಷಿ ತಡೆಯಲು ಯಾರೂ ಹೋಗುವುದಿಲ್ಲ. ಆದರೆ ನಮ್ಮ ರಾಜ್ಯ ಸರಕಾರ ಅದಕ್ಕೆ ತಡೆಯೊಡುತ್ತಿರುವುದು ದುರಂತ ಮತ್ತು ಅಸಹ್ಯಕರ.
ಒಂಬತ್ತು ದಿನ ಮಕ್ಕಳ ಪಾಲಿಗೆ ಕೇವಲ ಸಂಭ್ರಮ. ಆ ಸಮಯದಲ್ಲಿ ಪೋಷಕರು ಕೂಡ ಮಕ್ಕಳಿಗೆ ಖುಷಿಯಾಗಲು ನಾನಾ ವೇಷಧಾರಿಗಳು ಮನೆಗೆ ಬಂದಾಗ ಇವರ ಕೈಯಿಂದಲೇ ಹಣ ಕೊಡಿಸುತ್ತಾರೆ. ಈ ಎಲ್ಲ ಖುಷಿಗಳನ್ನು ಈ ಸಲ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ತನ್ವೀರ್ ಸೇಠ್ ಕಿತ್ತುಕೊಂಡಿದ್ದಾರೆ. ಹೇಗೆಂದರೆ ನವರಾತ್ರಿ ಸಮಯದಲ್ಲಿಯೇ ಪರೀಕ್ಷೆಗಳನ್ನು ಏರ್ಪಡಿಸಿದ್ದಾರೆ.
ನವರಾತ್ರಿ ಈ ಬಾರಿ ತಿಂಗಳ ಮುಂಚೆ ಬಂದಿರಬಹುದು. ಹಾಗಂತ ಇದು ಸಡನ್ನಾಗಿ ಹತ್ತು ದಿನ ಮೊದಲೇ ಗೊತ್ತಾಗುವುದು ಅಲ್ಲ. ನಿಮಗೆ ವರ್ಷ ಆರಂಭವಾಗುವಾಗಲೇ ಕ್ಯಾಲೆಂಡರ್ ನೋಡಿದಾಗ ಗೊತ್ತಾಾಗುತ್ತೆ. ಅದಕ್ಕೆ ಸರಿಯಾಗಿ ಮಕ್ಕಳ ಪರೀಕ್ಷೆಯನ್ನು ಈ ಧಾರ್ಮಿಕ ಹಬ್ಬ, ಉತ್ಸವ ಆದ ಹದಿನೈದು ದಿನದ ನಂತರವೇ ಇಟ್ಟುಕೊಳ್ಳಬಹುದು. ಉದಾಹರಣೆಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕಗಳನ್ನು ಘೋಷಿಸುವಾಗ ಆವತ್ತು ಏನಾದರೂ ವಿಶೇಷ ಇದೆಯಾ ಎಂದು ನೋಡುತ್ತದಲ್ಲ ಹಾಗೆ. ಏನೂ ಇಲ್ಲದ ವೇಳೆ ಮತದಾನ ದಿನವನ್ನು ನಿರ್ಧರಿಸುತ್ತದೆ. ಹಾಗೆ ಯಾಕೆ ಇಲ್ಲಿಯೂ ಮಾಡಲಾಗುವುದಿಲ್ಲ.
ನವರಾತ್ರಿ ಸಮಯದಲ್ಲಿ ಪರೀಕ್ಷೆಗಳನ್ನು ಇಡುವುದು ಬೇಡ, ನಂತರ ಅಕ್ಟೋಬರ್ ಕೊನೆ ವಾರದಲ್ಲಿ ಇಟ್ಟು ಬಿಡೋಣ, ಏನು ಆಗುವುದಿಲ್ಲ. ಮಕ್ಕಳು, ಹಬ್ಬದ ಸಂಭ್ರಮವನ್ನು ಅನುಭವಿಸಲಿ ಎಂದು ಸಚಿವರು ಹೇಳಬಹುದಿತ್ತು. ಒಂದು ವೇಳೆ ಅವರು ಮಾಡಿದಿದ್ದರೆ ಮಕ್ಕಳ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು. ಆದರೆ ತನ್ವೀರ್ ಸೇಠ್ ಹಾಗೆ ಮಾಡಿಲ್ಲ.
ರಜೆಗಳನ್ನು ಹಬ್ಬಕ್ಕೆ ಸರಿಯಾಗಿ ಅಡ್ಜಸ್ಟ್ ಮೆಂಟ್ ಮಾಡಿ ಇಡಲು ಆಗುವುದಿಲ್ಲ ಎಂದು ಮಾತ್ರ ನನ್ನ ಹತ್ರ ಹೇಳಲು ಬರಬೇಡಿ ಸಚಿವರೇ. ಏಕೆಂದರೆ ನೀವು ಮನಸ್ಸು ಮಾಡಿದರೆ ಅದು ಆಗುತ್ತೆ ಎಂದು ಸಾಬೀತಾಗಿದೆ. ಅದಕ್ಕೆ ಸಾಕ್ಷಿ ಇದೇ ತಿಂಗಳು ಸಿಕ್ಕಿದೆ. ಮೊನ್ನೆ ಬಕ್ರೀದ್ ಹಬ್ಬ ಮಂಗಳೂರಿನಲ್ಲಿ ಒಂದು ದಿನ ಮೊದಲು ಆಚರಿಸಲು ಇಲ್ಲಿನ ಧರ್ಮಗುರುಗಳು ತೀರ್ಮಾನಿಸಿದ್ದರು. ಆದರೆ ರಾಜ್ಯ ಸರಕಾರ ಸೆಪ್ಟೆOಬರ್ 2 ಕ್ಕೆ ರಾಜ್ಯದಲ್ಲಿ ಸರಕಾರಿ ರಜೆ ಘೋಷಿಸಿತ್ತು. ಆದರೆ ಇಲ್ಲಿನ ಮುಸ್ಲಿo ನಿಯೋಗ ಮನವಿ ಮಾಡಿದ ನಂತರ ಕರಾವಳಿಯಲ್ಲಿ ಬಕ್ರೀದ್ ಆಚರಣೆಗೆ ಅನುಕೂಲವಾಗುವಂತೆ ರಜೆಯನ್ನು ಒಂದು ದಿನಮೊದಲೇ ನಿಗದಿಪಡಿಸಿ ಸೂಚನೆ ಹೊರಡಿಸಲಾಗಿತ್ತು. ಬಕ್ರೀದ್ ಗೆ ಆಗುವುದಾದರೆ ನವರಾತ್ರಿಗೆ ಯಾಕೆ ಆಗಲ್ಲ. ಇನ್ನು ಸಮಯ ಮಿಂಚಿಲ್ಲ. ಯೋಚಿಸಿ. ಸಾಧ್ಯವಾದರೆ ನವರಾತ್ರಿಯ ಸಮಯದಲ್ಲಿ ಬಂದಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡಿ. ಪುಣ್ಯ ಕಟ್ಟಿಕೊಳ್ಳಿ!
Leave A Reply