• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೊನ್ನೆಯ ಮುಂಬೈ ಬೆಂಕಿ ದುರಂತ ನೋಡಿ ಮಂಗಳೂರು ಕಲಿಯುವಂತದ್ದು ತುಂಬಾ ಇದೆ!

Hanumantha Kamath Posted On January 1, 2018


  • Share On Facebook
  • Tweet It

ಅದನ್ನು ಕೊಲೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಸತ್ತ ಹದಿನಾಲ್ಕು ಮಂದಿಯೂ ಮೂವತ್ತರ ಹರೆಯದ ಆಸುಪಾಸಿನವರು. ಒಬ್ಬಳ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಲು ಗೆಳೆಯರೆಲ್ಲ ಸೇರಿದ್ದರು. ಅದರಲ್ಲಿ ಇಬ್ಬರು ಅಮೇರಿಕಾದಿಂದ ಆಗಮಿಸಿದ್ದರು. ಪಾರ್ಟಿ ಮಾಡುತ್ತಲೇ ಭರ್ಥಡೇ ಗರ್ಲ್ 29 ಹರೆಯದ ಖುಷ್ಬು ಬನ್ಸಾಲಿ ಕೂಡ ಆ ಬೆಂಕಿಯ ಕೆನ್ನಾಲಗೆಯಲ್ಲಿ ಸುಟ್ಟು ಹೋದಳು. ಇನ್ನು 21 ಮಂದಿ ಸುಟ್ಟಗಾಯಗಳೊಂದಿಗೆ ಯಮನ ಹತ್ತಿರ ತನಕ ಹೋಗಿ ಬದುಕಿನ ಪಾಸ್ ಹಿಡಿದು ಹಿಂತಿರುಗಿ ಬಂದಿದ್ದಾರೆ. ಮುಂಬೈಯ ಲೋವರ್ ಪರೇಲ್ ನ ಪ್ರತಿಷ್ಠಿತ ಕಮಲಾ ಮಿಲ್ಸ್ ಆವರಣದಲ್ಲಿರುವ ಬಹುಮಹಡಿ ಕಟ್ಟಡದ ರೂಫ್ ಟಾಪ್ ನಲ್ಲಿರುವ ಪಬ್ ಒಂದು ಗುರುವಾರ ತಡರಾತ್ರಿ ಹುಟ್ಟಿದ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದವರನ್ನು ಹಾಗೆ ಸಾವಿನ ಮನೆಯತ್ತ ಕರೆದುಕೊಂಡು ಹೋಗಿಬಿಟ್ಟಿತು. ಮೂರು ದಿನಗಳಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಅದೇ ಸುದ್ದಿ.

ಸದ್ಯ ಪಬ್ ಮಾಲೀಕನನ್ನು ಬಂಧಿಸಲಾಗಿದೆ. ಎಫ್ ಐ ಆರ್ ದಾಖಲಿಸಲಾಗಿದೆ ಎನ್ನುವುದರಿಂದ ಹಿಡಿದು ಬಂಧಿಸಲ್ಪಟ್ಟಿದ್ದ ಪಬ್ ಮಾಲೀಕನ ಸಂಬಂಧಿಗಳಿಬ್ಬರಿಗೆ ಜಾಮೀನು ಸಿಕ್ಕಿದೆ ಎನ್ನುವ ತನಕ ವಾರ್ತಾ ವಾಹಿನಿಗಳಲ್ಲಿ ಅದೇ ಸುದ್ದಿ. ಇದು ಪ್ರಪಂಚದಲ್ಲಿ ಸಂಭವಿಸುತ್ತಿರುವ ಅಸಂಖ್ಯಾತ ವಿಭಿನ್ನ ಅವಘಡಗಳಂತೆ ಸುದ್ದಿವಾಹಿನಿಗಳಲ್ಲಿ ನಿನ್ನೆ, ಮೊನ್ನೆ ಬಂದು ನಾಳೆಗೆ ಮರೆತು ಹೋಗುತ್ತದೆ. ಒಂದಿಷ್ಟು ದಿನಗಳ ಬಳಿಕ ಪಬ್ ಮಾಲೀಕನಿಗೂ ಜಾಮೀನು ಸಿಗುತ್ತದೆ. ಅವನು ಹೊರಗೆ ಬರುತ್ತಾನೆ. ಆದರೆ ಸತ್ತ ಆ ಹದಿನಾಲ್ಕು ತರುಣ, ತರುಣಿಯರ ಮನೆಗಳಲ್ಲಿ ಅವರ ಪೋಷಕರಿಗೆ ಮಕ್ಕಳನ್ನು ಕಳೆದುಕೊಂಡ ದು:ಖ ಅಳಿಸಿಹಾಕಲು ಆಗುತ್ತದಾ? ಸದ್ಯ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಐದು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಅವರಿಗೂ ಮತ್ತೆ ಕೆಲಸಕ್ಕೆ ಬರಲು ಅವಕಾಶ ಇದೆ. ಆದರೆ ಸರಿಯಾಗಿ ಜೀವನವನ್ನು ನೋಡದ ಆ ಹದಿನಾಲ್ಕು ಮಂದಿ ಮತ್ತೆ ಭೂಮಿಗೆ ಹಿಂತಿರುಗಲು ಆಗುತ್ತಾ? ಪಬ್ ಮಾಲೀಕನ ವಿರುದ್ಧ ಮೂರು ಬಾರಿ ಕ್ರಮ ಕೈಗೊಳ್ಳಲಾಗಿತ್ತಾದರೂ ಆತ ವ್ಯವಹಾರ ಮುಂದುವರೆಸಿದ್ದ ಎಂದು ಕೂಡ ಸುದ್ದಿ ಮಾಧ್ಯಮಗಳು ಹೇಳುತ್ತಿವೆ. ಅವನಿಗೆ ಭಾರತದ ಅತ್ಯುಗ್ರ ಶಿಕ್ಷೆ ಬಿಟ್ಟು ಬೇರೆ ಕೊಡದಿದ್ದರೆ ಆ ಹದಿನಾಲ್ಕು ಆತ್ಮಗಳಿಗೆ ಶಾಂತಿ ಸಿಗುತ್ತಾ ಎಂದು ಯೋಚಿಸುತ್ತಾ ಟಿವಿ ನೋಡುತ್ತಿದ್ದೆ.

ಶನಿವಾರದ ಪತ್ರಿಕೆಗಳ ಮುಖಪುಟದಲ್ಲಿದ್ದ ಈ ಸುದ್ದಿ ಭಾನುವಾರ ಒಳಪುಟಕ್ಕೆ ಹೋಗಿದೆ. ಸೋಮವಾರ ಪತ್ರಿಕೆಗಳ ಯಾವುದಾದರೂ ಮೂಲೆಯಲ್ಲಿ ಬರಬಹುದು. ಟಿವಿಗಳ ವಿಷಯ ಕೂಡ ಹೀಗೆ. ಆದರೆ ನಾವು ಈ ಘಟನೆಯಿಂದ ಪಾಠ ಕಲಿಯದೇ ಹೋದರೆ ಮುಂದೊಂದು ದಿನ ಈ ಸುದ್ದಿ ಬೇರೊಂದು ಪ್ರದೇಶದಲ್ಲಿ ಬೇರೆ ಇನ್ನಷ್ಟು ಯುವಕ, ಯುವತಿಯರ ಬದುಕಿನ ವಿದಾಯ ರೂಪದಲ್ಲಿ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾಗಲ್ಲ ಎಂದು ಹೇಳಲು ಸಾಧ್ಯವಾ? ಹಾಗೆ ಆಗದಿರಲಿ ಎಂದು ಒಳಮನಸ್ಸು ಬಯಸುತ್ತದೆಯಾದರೂ ನಾನು ಕುಳಿತುಕೊಂಡಿರುವ ಮಂಗಳೂರು ಎನ್ನುವ ಮಹಾನಗರಿ ಕೂಡ ಈ ವಿಷಯದಲ್ಲಿ ಮುಂಬೈಗಿಂತ ಭಿನ್ನವೇನಲ್ಲ. ಮಂಗಳೂರಿನಲ್ಲಿ ಕೂಡ ಮುಂಬೈ “1 ಅಬೌವ್” ತರಹದ ಕುಡುಕರ ಸ್ವರ್ಗ ಮಾಡುವ ಭವಿಷ್ಯದ ಅಂತಹುದೇ ಡೆಂಜರ್ ಸ್ಪೋಟ್ ಆಗಬಹುದಾದ ಸ್ಥಳಗಳು ಕೆಲವು ಇವೆ. ಮುಂಬೈ ಪೊಲೀಸರು ಆ ಕಟ್ಟಡದ ಅವಘಡ ಸಂಭವಿಸಿದ ಸ್ಥಳದ ತನಿಖೆ ಮಾಡಿದಾಗ ಗೊತ್ತಾದದ್ದು ಕಟ್ಟಡದ ಟೇರೆಸಿನ ಮೇಲೆ ಅನಧಿಕೃತವಾಗಿ ನಿರ್ಮಾಣ ಮಾಡಿದ ಜಾಗದಲ್ಲಿ ಪಬ್ ಮಾಡಿ ಜನರಿಗೆ ಸಂತಸ ಪಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಂಕಿ ತಗುಲಿದಾಗ ಹೊಗೆ ಹೋಗುವುದಕ್ಕೂ ಜಾಗ ಇರಲಿಲ್ಲ. ಇನ್ನು ಎಮರಜೆನ್ಸಿ ಸಂದರ್ಭದಲ್ಲಿ ಹೊರಗೆ ಹೋಗಲು ಮಾಡಿದ ವ್ಯವಸ್ಥೆಯಲ್ಲಿ ಸಾಮಾನುಗಳನ್ನು ಜೋಡಿಸಿಟ್ಟ ಕಾರಣ ಅಲ್ಲಿ ಕೂಡ ಹೋಗಲು ಜಾಗವಿರಲಿಲ್ಲ.

ಈ ದುರಂತದ ನಂತರ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸುಮಾರು 431 ಇಂತಹ ಕಮರ್ಶಿಯಲ್ ಅಕ್ರಮ ನಿರ್ಮಾಣಗಳನ್ನು ಕಿತ್ತು ಒಗೆದಿದೆ. ಅದರಲ್ಲಿ 14 ಇಂತಹುದೇ ಯಾವಾಗ ಬೇಕಾದರೂ ಯಾರದಾದರೂ ಜೀವ ತಿನ್ನಬಲ್ಲ ಪಬ್ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ಗಳು. ಇನ್ನು ಅಂತಹ ಅನೇಕ ಅಕ್ರಮ ವ್ಯವಹಾರಿಕ ಸ್ಥಳಗಳ ಪಟ್ಟಿಯನ್ನು ಮುಂಬೈ ಪಾಲಿಕೆ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ. ಇದು ಸಹಜ. ಯಾಕೆಂದರೆ ಮುಂಬೈ ಈ ಬೆಂಕಿ ಅಪಘಾತದಿಂದ ಅನುಭವಿಸಿದ ಶಾಕ್ ನಂತರ ಅಲ್ಲಿನ ಸ್ಥಳೀಯ ಸಂಸ್ಥೆಗಳು ಅಷ್ಟೂ ಕೂಡ ಮಾಡದಿದ್ದರೆ ಅಲ್ಲಿನ ಜನ ಖಂಡಿತ ಕ್ಷಮಿಸುವುದಿಲ್ಲ ಎನ್ನುವುದು ಮುಂಬೈ ಪಾಲಿಕೆಯ ಹೊಣೆ ಹೊತ್ತವರಿಗೆ ಗೊತ್ತೆ ಇದೆ. ಆದ್ದರಿಂದ ಯಾರ ಶಿಫಾರಸ್ಸು ಅಥವಾ ಅಡೆತಡೆ ಬಂದರೂ ಕ್ಯಾರ್ ಮಾಡದೇ ಸಾವಿನ ಕೂಪಗಳನ್ನು ಕೆಡವಿಬಿಡಿ ಎನ್ನುವ ಸೂಚನೆ ಸಿಬ್ಬಂದಿಗಳಿಗೆ ಹೋಗಿದೆ. ಅವರೇನೋ ಈಗ ಅಕ್ರಮ ನಿರ್ಮಾಣಗಳನ್ನು ನಾಮಾವಶೇಷ ಮಾಡುತ್ತಿದ್ದಾರೆ. ಆದರೆ ನನ್ನ ಪ್ರಶ್ನೆ, ಹದಿನಾಲ್ಕು ಜೀವಗಳು, 21 ಜನ ತೀವ್ರ ಗಾಯಗಳಿಂದ ನರಳಿದ ನಂತರ ನೀವು ಈಗ ಎಚ್ಚರಗೊಂಡರೆ ಏನು ಪ್ರಯೋಜನ?

ಯಾವುದೇ ಅಪಘಾತ ಹೀಗೆ ಆಗುತ್ತೆ ಎಂದು ಯಾರು ಕೂಡ ಮೊದಲೇ ಊಹೆ ಮಾಡಲು ಆಗುವುದಿಲ್ಲ ನಿಜ, ಆದರೆ ಮುಂಬೈಯ ಈ ದುರಂತವನ್ನು ನೋಡಿ ನಾವು ಮಂಗಳೂರಿನವರು ಪಾಠ ಕಲಿಯದಿದ್ದರೆ ಹೇಗೆ? ನಾವು ಮುಂಬೈಯ ಲೈಫ್ ಸ್ಟೈಲ್ ಕಾಪಿ ಮಾಡಿ ಇಲ್ಲಿ ಅಳವಡಿಸಲು ಹಾತೊರೆಯುವುದು ಮೊದಲಿನಿಂದಲೂ ನಡೆಯುತ್ತಾ ಇದೆ. ಹಾಗಿರುವಾಗ ಅಲ್ಲಿ ನಡೆದ ದುರ್ಘಟನೆಯಿಂದ ಪಾಠ ಕಲಿಯುವುದು ಕೂಡ ಅವಶ್ಯಕ. ಮಂಗಳೂರಿನ ಅನೇಕ ಹೋಟೇಲ್ ಕಟ್ಟಡಗಳ ಟೇರೆಸ್ ಗಳು ಹಿಂದೆ ಖಾಲಿ ಇರುತ್ತಿದ್ದವು. ಅದರ ನಂತರ ನಮ್ಮ ಹೋಟೇಲ್ ಮಾಲೀಕರು ಮುಂಬೈಗೆ ಹೋಗಿ ಅಲ್ಲಿನ ಹೋಟೇಲ್ ಗಳ ಮಾಲೀಕರು ಹೇಗೆ ತಮ್ಮ ಖಾಲಿ ಇರುವ ರೂಫ್ ಟಾಪ್ ಜಾಗವನ್ನು ತಮ್ಮ ವ್ಯವಹಾರಕ್ಕಾಗಿ ಬಳಸುತ್ತಾರೆ ಎಂದು ನೋಡಿ ಕಲಿತುಕೊಂಡರು. ಅಲ್ಲಿಂದ ಬಂದವರೇ ಟೇರೆಸ್ ವೇಸ್ಟ್ ಆಗಲೇಬಾರದು ಎಂದು ನಿರ್ಧಾರಕ್ಕೆ ಬಂದರು. ಆ ಜಾಗದಲ್ಲಿ ಕುರ್ಚಿ, ಟೇಬಲ್ ಗಳು ಬಂದವು. ಕ್ಯಾಂಡಲ್ ಗಳು ಪ್ರತಿ ಟೇಬಲ್ ಮೇಲೆ ಚೆಂದ ಹೆಚ್ಚಿಸಲು ಅಣಿಯಾದವು. ಇಲ್ಲಿಯೂ ಭರ್ಥಡೇ ಪಾರ್ಟಿಗಳು ನಡೆಯುತ್ತಿವೆ. ಕೇಕ್ ಗಳ ಮೇಲೆ ಕ್ಯಾಂಡಲ್ ಗಳು ಇರುತ್ತವೆ. ಉಳಿದ ಕಲ್ಪನೆ ನಿಮಗೆ ಬಿಟ್ಟಿದ್ದು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search